ಚಿತ್ರದುರ್ಗ. ನ.21 : ಎಲ್ಲರೂ ಶೌಚಾಲಯ ಬಳಸಿ, ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ಜಯಲಕ್ಷ್ಮೀ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಗುಡ್ಡದರಂಗವ್ವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮಟಕಲ್ಲು ಗ್ರಾಮದಲ್ಲಿ ಶುಕ್ರವಾರ ವಿಶ್ವ ಶೌಚಾಲಯ ದಿನಾಚರಣೆ ಪ್ರಯುಕ್ತ ನಮ್ಮ ಶೌಚಾಲಯ-ನಮ್ಮ ಭವಿಷ್ಯ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಸಮುದಾಯದಲ್ಲಿ ಸುರಕ್ಷಿತ ನೈರ್ಮಲ್ಯ, ಶುಚಿತ್ವ ಕುರಿತು ಜಾಗೃತಿ ಮೂಡಿಸಿ, ಶೌಚಾಲಯಗಳನ್ನು ನಿರಂತರವಾಗಿ ಬಳಸುವಂತೆ ಪ್ರೇರೇಪಿಸುವ ಉದ್ದೇಶದೊಂದಿಗೆ ಪ್ರತಿ ವರ್ಷ ನ.19ರಂದು ವಿಶ್ವ ಶೌಚಾಲಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನಾಚರಣೆಯು ಬಯಲು ಬಹಿರ್ದೆಸೆ ಮುಕ್ತ ಸ್ಥಿತಿಯ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ತಿಳಿಸಿದ ಅವರು, ವಿಶ್ವ ಶೌಚಾಲಯ ದಿನಾಚರಣೆಯ ಪ್ರಯುಕ್ತ “ನಮ್ಮ ಶೌಚಾಲಯ-ನಮ್ಮ ಭವಿಷ್ಯ” ಅಭಿಯಾನ ಈಗಾಗಲೇ ನವೆಂಬರ್ 19 ರಿಂದ ಪ್ರಾರಂಭವಾಗಿದ್ದು, ಡಿಸೆಂಬರ್ 10 ರವರೆಗೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
“ನಮ್ಮ ಶೌಚಾಲಯ-ನಮ್ಮ ಭವಿಷ್ಯ” ಅಭಿಯಾನವು ಆರೋಗ್ಯ ಘನತೆ ಮತ್ತು ಸಾಮಾಜಿಕ ಸಮೃದ್ಧಿಗಾಗಿ ನೈರ್ಮಲ್ಯ ಮತ್ತು ಸ್ವಚ್ಛತೆಯ ಪ್ರಾಮುಖ್ಯತೆಯ ಮೇಲೆ ಮಾತ್ರವಲ್ಲದೇ, ವೈಯಕ್ತಿಕ ಮನೆ ಶೌಚಾಲಯಗಳು ಮತ್ತು ಸಮುದಾಯದ ನೈರ್ಮಲ್ಯ ಸಂಕೀರ್ಣಗಳು ಎರಡಕ್ಕೂ ಸಂಬಂಸಿದಂತೆ, ಕಾರ್ಯಕ್ಷಮತೆಯ ಮೌಲ್ಯಮಾಪನ ಮತ್ತು ಗ್ರಾಮೀಣ ಶೌಚಾಲಯಗಳ ಸೌಂದರ್ಯ ವರ್ಧನೆಯಂತಹ ಅಂಶಗಳಿಗೂ ಒತ್ತು ನೀಡುತ್ತದೆ ಎಂದರು.
ಶೌಚಾಲಯ ಬಳಕೆ ಕಾರ್ಯ ಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವಲ್ಲಿ ಸಮುದಾಯ ಶೌಚಾಲಯಗಳು ಮತ್ತು ವೈಯಕ್ತಿಕ ಗೃಹ ಶೌಚಾಲಯಗಳ ದುರಸ್ತಿ ನಿರ್ವಹಣೆಯನ್ನು ಕೈಗೊಳ್ಳಲು ಸಮುದಾಯ, ವೈಯಕ್ತಿಕ ಕುಟುಂಬಗಳಿಗೆ ಪ್ರೋತ್ಸಾಹ ನೀಡುವುದು. ಜಿಲ್ಲೆಯಲ್ಲಿ ಪ್ರಸ್ತುತ ಸಮುದಾಯ ಶೌಚಾಲಯಗಳಿಗೆ ಚಾಲ್ತಿಯಲ್ಲಿರುವ ಕಾರ್ಯಾಚರಣೆ ಮತ್ತು ನಿರ್ವಹಣೆ ವ್ಯವಸ್ಥೆಯ ಮೌಲ್ಯಮಾಪನ ಮತ್ತು ಬಲಪಡಿಸುವುದು. ವೈಯಕ್ತಿಕ ಗೃಹ ಶೌಚಾಲಯ, ಸಮುದಾಯ ಸಂಕೀರ್ಣ ಘಟಕಗಳು ಎರಡಕ್ಕೂ ಬಣ್ಣ ಬಳಿಯುವುದು ಮತ್ತು ಸೌಂದರ್ಯ ವರ್ಧನೆ ಮಾಡುವುದು. ಸಮುದಾಯದವರನ್ನು ಪ್ರೋತ್ಸಾಹಿಸಿ ಸಮುದಾಯ ಸಂಕೀರ್ಣ ಘಟಕಗಳನ್ನು ಸ್ವಾಗತಾರ್ಹ ಸ್ಥಳಗಳಾಗಿ ಪರಿವರ್ತಿಸುವುದು. ವೈಯಕ್ತಿಕ ಗೃಹ ಶೌಚಾಲಯಗಳಿಗೆ ಇದೇ ರೀತಿಯ ಸುಧಾರಣೆಗಳನ್ನು ಮಾಡಲು ವೈಯಕ್ತಿಕ ಮನೆಗಳಿಗೂ ಪ್ರೇರಣೆ ನೀಡುವುದು. ಸಮುದಾಯದಲ್ಲಿ ಮತ್ತು ವಿಶೇಷವಾಗಿ ಶಾಲೆಗಳಲ್ಲಿ ವೈಯಕ್ತಿಕ, ಸಮುದಾಯ ನೈರ್ಮಲ್ಯ ಮತ್ತು ಸ್ವಚ್ಛತೆಯ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿಸುವುದು. ಸಮುದಾಯದ ಮಲ ತ್ಯಾಜ್ಯದ ಸುರಕ್ಷಿತ ನಿರ್ವಹಣೆ ಕುರಿತು ಅರಿವು ಮೂಡಿಸುವುದು. ಗ್ರಾಮ ಪಂಚಾಯಿತಿ ಹಂತದಲ್ಲಿ ಸ್ವಚ್ಛ, ಸುಂದರ ವೈಯಕ್ತಿಕ ಗೃಹ ಶೌಚಾಲಯ (ಉತ್ತಮ ಶೌಚಾಲಯ) ಸ್ಪರ್ಧೆ ಆಯೋಜಿಸುವುದು. ಅದೇ ರೀತಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮ ಸಮುದಾಯ ಶೌಚಾಲಯ ಸ್ಪರ್ಧೆಗಳನ್ನು ಆಯೋಜಿಸುವುದು. ತದನಂತರ ಜಿಲ್ಲೆ ಮತ್ತು ತಾಲ್ಲೂಕು ಹಂತದಲ್ಲಿ ವಿಜೇತರಿಗೆ ಪುರಸ್ಕಾರ ನೀಡಿ ಗೌರವಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಜಯಸಿಂಹ ಸ್ವಚ್ಛತಾ ಪ್ರತಿಜ್ಞಾವಿಧಿ ಬೋಧಿಸಿದರು.
ಅಭಿಯಾನದಲ್ಲಿ ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಸುಮಾ, ಜಿಲ್ಲಾ ಸಮಾಲೋಚಕರಾದ ಬಿ.ಸಿ.ನಾಗರಾಜ್, ಪ್ರಮೀಳಾ, ವಿನಯ್, ಶಶಿಧರ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಹೆಚ್.ಯರ್ರಿಸ್ವಾಮಿ, ಗುಡ್ಡದ ರಂಗವ್ವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುದ್ರಮ್ಮ, ಸದ್ಯಸ್ಯರಾದ ಸಣ್ಣ ಹನುಮಂತಪ್ಪ, ಸುರೇಶ್, ಸಾಕಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆನಂದ್, ಮುಖಂಡರಾದ ಮಾರುತಿ, ಮಂಜುನಾಥ್ ಸೇರಿದಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಸ್ವ ಸಹಾಯ ಒಕ್ಕೂಟದ ಮಹಿಳೆಯರು ಮತ್ತು ಸ್ವಚ್ಛವಾಹಿನಿ ಚಾಲಕರು ಹಾಗೂ ಸಹಾಯಕರು ಇದ್ದರು.






