ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಫೆ. 09 : ನಗರದ ಕಬೀರಾನಂದ ನಗರದಲ್ಲಿನ ಶ್ರೀ ಸದ್ಗುರು ಕಬೀರಾನಂದಾಶ್ರಮದಲ್ಲಿ ನಡೆಯಲಿರುವ 96ನೇ ಮಹಾ ಶಿವರಾತ್ರಿ ಮಹೋತ್ಸವದ ಅಂಗವಾಗಿ ಸೋಮವಾರದಂದು ಶ್ರೀ ಶಿವಲಿಂಗಾನಂದ ಶ್ರೀಗಳ ಸಾನಿಧ್ಯದಲ್ಲಿ ಶಿವಮಹಿಮ್ನಾ ಸ್ತೋತ್ರ ಹಾಗೂ ಕಾತ್ರಾಳ ಬಳಿಯಲ್ಲಿನ ಗೋಶಾಲೆಯಲ್ಲಿ ಗೋಪೂಜೆಯನ್ನು ಮಾಡುವುದರ ಮೂಲಕ ಶಿವನಾಮ ಸಪ್ತಾಹಕ್ಕೆ ಚಾಲನೆಯನ್ನು ನೀಡಲಾಯಿತು.
ಇಂದು ಬೆಳ್ಳಿಗೆ ಬ್ರಾಹ್ಮೀ ಮಹೂರ್ತದಲ್ಲಿ ಕಳಶವನ್ನು ಸ್ಥಾಪನೆ ಮಾಡಿ ಶ್ರೀ ಗುರು ಕರ್ತೃ ಗದ್ದಿಗೆಯ ಮೂರ್ತಿಗೆ ರುದ್ರಾಭೀಷೇಕವನ್ನು ನಡೆಸಲಾಯಿತು. ಇಂದಿನಿಂದ ಪ್ರಾರಂಭವಾಗಿರುವ ಶಿವಮಾಹಿಮ್ನಾ ಸ್ತೋತ್ರವೂ ಫೆ, 15ರವರೆಗೂ ನಡೆಯಲಿದೆ. ಪ್ರತಿ ದಿನ ಪ್ರಾತಃ ಕಾಲದಲ್ಲಿ ಸಾಮೂಹಿಕವಾಗಿ ಶಿವಪಂಚಾಕ್ಷರಿ ಜಪ, ಶ್ರೀಮದ್ ಭಗವತ್ ಪಾರಾಯಣ ನಡೆಯಲಿದೆ.
ಫೆ. 11 ರಿಂದ 15ರವರೆಗೆ ಶಿವನಾಮ ಸಪ್ತಾಹದ ಅಂಗವಾಗಿ ಆಶ್ರಮದ ಹಿಂಭಾಗದಲ್ಲಿ ನಿರ್ಮಾಣವಾಗಿರುವ ಮಂಟಪದಲ್ಲಿ ಶ್ರೀ ಸದ್ಗರು ಕಬೀರಾನಂದಸ್ವಾಮಿ ವೇದಿಕೆಯಲ್ಲಿ ಪ್ರತಿ ದಿನ ಸಂಜೆ 6.30ರಿಂದ ಸಭಾ ಕಾರ್ಯಕ್ರಮಗಳು ನಡೆಯಲಿದ್ದು, ಇದರಲ್ಲಿ ನಾಡಿನ ವಿವಿಧ ಮಠಾಧೀಶರು, ಸಾಹಿತಿಗಳು, ಗಣ್ಯರು, ವಿದ್ವಾಂಸರು, ಚುನಾಯಿತ ಪ್ರತಿನಿಧಿಗಳು, ಮಾಜಿ ಸಚಿವರು ಶಾಸಕರು, ಸಂಸದರು ಭಾಗವಹಿಸಲಿದ್ದಾರೆ. ಫೆ. 15 ರಂದು ಶಿವಲಿಂಗಾನಂದ ಶ್ರೀಗಳ ಪಲ್ಲಕ್ಕಿ ಉತ್ಸವ, ಫೆ, 16 ರಂದು ಕೌದಿ ಪೂಜೆಯೊಂದಿಗೆ ಶಿವನಾಮ ಸಪ್ತಾಹವೂ ಸಮಾಪ್ತಿಯಾಗಲಿದೆ.
ಈ ಸಂದರ್ಭದಲ್ಲಿ 96ನೇ ಮಹಾ ಶಿವರಾತ್ರಿ ಮಹೋತ್ಸವದ ಅಧ್ಯಕ್ಷರಾದ ಭಾಸ್ಕರ್, ಉಪಾಧ್ಯಕ್ಷರಾದ ಪರಮೇಶ್ವರಪ್ಪ, ಗಣಪತಿ ಶಾಸ್ತ್ರಿ, ತಿಪ್ಪೇಸ್ವಾಮಿ ನಿರಂಜನಮೂರ್ತಿ ಯೋಗೀಶ್, ಪ್ರವೀಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

