ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 25 : ಚಿತ್ರದುರ್ಗ ಶಾಖಾ ಕಾಲುವೆ ಪರೀಕ್ಷಾರ್ಥ ಭದ್ರಾ ಜಲಾಶಯದಿಂದ ಮೂರು ಟಿಎಂಸಿ ನೀರು ಹರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸ್ವಾಗತಿಸಿದೆ.
ಈ ಸಂಬಂಧ ಹೇಳಿಕೆ ನೀಡಿರುವ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಜನವರಿಯಲ್ಲಿಯೇ ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ನೀರು ಹರಿಸಿ ಗೋನೂರು ಕೆರೆಯವರೆಗೆ ತರಲಾಗುವುದೆಂದು ಹೇಳಲಾಗಿತ್ತು. ಇದೀಗ ತಡವಾಗಿ ನೀರು ಹರಿಯುತ್ತಿರುವುದು ಜಿಲ್ಲೆಯ ರೈತಾಪಿ ಸಮುದಾಯದಲ್ಲಿ ಹೊಸ ಭರವಸೆ ಮೂಡಿಸಿದೆ. ಹೊಳಲ್ಕೆರೆ ತಾಲೂಕಿನ ಬಹುತೇಕ ಕೆರೆಗಳಿಗೆ ಪರೀಕ್ಷಾರ್ಥ ಹರಿಯುವಿಕೆಯಲ್ಲಿ ನೀರಿನ ಸ್ಪರ್ಶವಾಗಲಿದೆ.
ಕಾಮಗಾರಿ ಮುಗಿದಿರುವುದರಿಂದ ಪರೀಕ್ಷಾರ್ಥವಾಗಿ ಮಾತ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಗೋನೂರು ಕೆರೆಯವರೆಗೆ ನೀರು ಹರಿದಾಕ್ಷಣ ಭದ್ರಾ ಮೇಲ್ದಂಡೆ ಕಾಮಗಾರಿ ಮುಗಿದಂತಾಗುವುದಿಲ್ಲ. ತುಮಕೂರು ಶಾಖಾ ಕಾಲುವೆ ಕೆಲಸ ಬಾಕಿ ಇದೆ. ಅಲ್ಲದೇ ಚಳ್ಳಕೆರೆ, ಮೊಳಕಾಲ್ಮೂರು, ಜಗಳೂರು, ಪಾವಗಡ ಭಾಗಗಳಿಗೂ ನೀರು ತಲಪಬೇಕಾಗಿದ್ದು ಉಳಿದ ಕಾಮಗಾರಿ ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು. ಹಾಗೂ ತುಂಗಾದಿಂದ ಭದ್ರಾ ಜಲಾಶಯದವರೆಗಿನ ಕಾಮಗಾರಿಗೆ ಚುರುಕಿನ ವೇಗ ನೀಡಿ ಮುಂದಿನ ಮಳೆಗಾಲದ ಒಳಗಾದರೂ ನೀರು ಲಿಫ್ಟ್ ಮಾಡುವ ವಾತಾವರಣವ ಸರ್ಕಾರ ಸೃಷ್ಡಿಸಬೇಕು.
ಚಿತ್ರದುರ್ಗ ಶಾಖಾ ಕಾಲುವೆ ಪರೀಕ್ಷಾರ್ಥ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಪಟ್ಟು ಆದೇಶ ಹೊರಡಿಸಿದ ಸಚಿವ ಟಿ.ರಘುಮೂರ್ತಿ ಅವರ ಕಾರ್ಯಕ್ಕೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಭಿನಂದಿಸುತ್ತದೆ ಎಂದು ಲಿಂಗಾರೆಡ್ಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.









