ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಆ. 25 : ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ರಚನೆಯಾಗಿ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಹಾಗೂ ಹಿಂದುಳಿದ ಜಾತಿಗಳ ಬೃಹತ್ ಜನಜಾಗೃತಿ ಸಮಾವೇಶ ಮತ್ತು ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಸೆಪ್ಟಂಬರ್-06 ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾ ಮುಖಂಡರಾದ ಬಿ.ಟಿ.ಜಗದೀಶ್ ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ 70% ರಷ್ಟು ಹಿಂದುಳಿದ ಜಾತಿಗಳಿವೆ. ಇವುಗಳ ಸಂವಿಧಾನಿಕ ಹಕ್ಕುಗಳನ್ನು ರಕ್ಷಣೆ ಮಾಡುವುದುಗೋಸ್ಕರ 2001 ರಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟ ರಚನೆಯಾಯಿತು.ಈ ಒಕ್ಕೂಟವನ್ನು ದಿವಂಗತ ಎ. ಶ್ರೀನಿವಾಸ್ ರವರು ಪ್ರಾರಂಭ ಮಾಡಿದರು ಪ್ರಸ್ತುತ ರಾಜ್ಯಾಧ್ಯಕ್ಷರಾಗಿ ರಾಮಚಂದ್ರಪ್ಪ ರವರು ಕೆಲಸ ಮಾಡುತ್ತಿದ್ದಾರೆ.ಕಳೆದ 25 ವರ್ಷಗಳಿಂದ ಹಿಂದುಳಿದ ವರ್ಗಗಳ ಪರ ಹೋರಾಟ ಮಾಡುತ್ತಾ ಸಂವಿಧಾನಿಕ ಹಕ್ಕುಗಳನ್ನು ರಕ್ಷಣೆ ಮಾಡುತ್ತಾ ಬಂದಿದೆ ಎಂದರು.
ಈ ಹಿಂದೆ ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶವನ್ನು ನಡೆಸಲಾಗಿತ್ತು,. ಆ ಸಂದರ್ಭದಲ್ಲಿ ಕಾಂತರಾಜ್ ಆಯೋಗದ ವರದಿಯನ್ನು ಬಹಿರಂಗಪಡಿಸುವಂತೆ ಆಗ್ರಹಿಸಲಾಗಿತ್ತು ಈ ವರದಿಗೆ 10 ವರ್ಷ ತುಂಬಿದೆ ಎಂದು ಆಗಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯರವರು ಮಧುಸೂದನ್ರವರ ನೇತೃತ್ವದಲ್ಲಿ ಸಮಗ್ರ ವರದಿ ತಯಾರಿಸಿದ್ದರು. ಆ ವರದಿಯ ಅನುಷ್ಠಾನವಾಗಬೇಕಾಗಿದೆ ಈ ಸಮಾವೇಶದಲ್ಲಿ ಹಿಂದುಳಿದ ಸಮು ದಾಯಗಳ ಕೆಲವು ಒತ್ತಾಯಗಳನ್ನು ಸರ್ಕಾರಕ್ಕೆ ಮಂಡಿಸಲಿದ್ದೇವೆ. ಎಂದ ಅವರು ಸದರಿ ವಿಚಾರ ವಾಗಿ ಜಿಲ್ಲೆಯ ಆರು ತಾಲೂಕುಗಳಲ್ಲಿ ಪ್ರವಾಸ ಮಾಡಲಿದ್ದು, ಪ್ರತಿ ತಾಲ್ಲೂಕಿನಿಂದ 10 ಬಸ್ಸುಗಳು ಹೊರಡ ಲಿದ್ದು. ಜಿಲ್ಲೆಯಿಂದ ಸುಮಾರು 10 ಸಾವಿರ ಜನ ಜಿಲ್ಲೆಯಿಂದ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಯಾದವ ಮುಖಂಡರು, ನಗರಸಭೆಯ ಮಾಜಿ ಅಧ್ಯಕ್ಷರಾದ ಸಿ.ಟಿ.ಕೃಷ್ಣಮೂರ್ತಿ ಮಾತನಾಡಿ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಈಗ ಸಕ್ರಿಯವಾಗಿ ಕೆಲಸವನ್ನು ಮಾಡುತ್ತಿದೆ ಈ ಸಮುದಾಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಸಿಗುವಂತೆ ಮಾಡುತ್ತಿದೆ, ಸರ್ಕಾರಗಳು ಒಕ್ಕೂಟದ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಬೇಕಿದೆ ಎಂದು ಆಗ್ರಹಿಸಿದರು.
ಪತ್ರಿಕಾ ಗೋಷ್ಟಿಯಲ್ಲಿ ಸವಿತಾ ಸಮಾಜದ ಶ್ರೀನಿವಾಸ್, ಅಲೆಮಾರಿ ಸಮುದಾಯದ ಲಕ್ಷ್ಮೀಕಾಂತ್, ಕುರುಬ ಸಮಾಜದ ಹೆಚ್.ಮಂಜುಪ್ಪ, ಈಡಿಗ ಸಮುದಾಯದ ಸ್ವಾಮಿ, ಉಪ್ಪಾರ ಸಮುದಾಯದ ನಟರಾಜ್, ಉಪಸ್ಥಿತರಿದ್ದರು.










