ಇದು ಒಂದು ಅಪರೂಪದ ಖಗೋಳೀಯ ಘಟನೆ. ‘ಶೂನ್ಯ ನೆರಳಿನ ದಿನ’ದಲ್ಲಿ ಮಧ್ಯಾಹ್ನದ ವೇಳೆ ಸೂರ್ಯನು ನೇರವಾಗಿ ತಲೆಯ ಮೇಲ್ಭಾಗದಲ್ಲೇ ಕಾಣಿಸಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ನಿಂತಿರುವ ವ್ಯಕ್ತಿ ಅಥವಾ ವಸ್ತುವಿನ ನೆರಳು ಭೂಮಿಯ ಮೇಲೆ ಬೀಳದೆ ಸಂಪೂರ್ಣವಾಗಿ ಕಾಣೆಯಾಗುತ್ತದೆ.ಈ ವಿಶೇಷ ಘಟನೆ ವರ್ಷಕ್ಕೆ ಎರಡು ಬಾರಿ ಮಾತ್ರ ಸಂಭವಿಸುತ್ತದೆ.
ಕರ್ಕಾಟಕ ವೃತ್ತ ಮತ್ತು ಮಕರ ವೃತ್ತದ ನಡುವೆ ಇರುವ ಪ್ರದೇಶಗಳಲ್ಲಿ ವಾಸಿಸುವವರಿಗೆ ಮಾತ್ರ ಇದು ಗೋಚರಿಸುತ್ತದೆ. ನೆರಳು ಕಾಣೆಯಾಗುವ ಕ್ಷಣವು ಅತಿ ಸ್ವಲ್ಪ ಸಮಯ—ಕೆಲವೇ ಕ್ಷಣಗಳು ಅಥವಾ ಒಂದು ನಿಮಿಷದವರೆಗೆ ಮಾತ್ರ ಇರುತ್ತದೆ.ಚಿತ್ರದುರ್ಗದಲ್ಲಿ ಈ ಅಪರೂಪದ ದೃಶ್ಯ ಇಂದು, ಏಪ್ರಿಲ್ 28ರಂದು ಮಧ್ಯಾಹ್ನ ಸುಮಾರು 12.05ರ ಹೊತ್ತಿಗೆ ಕಾಣಿಸಿಕೊಳ್ಳಲಿದೆ. ಭೂಮಿ ತನ್ನ ಅಕ್ಷದ ಮೇಲೆ ಸುಮಾರು 23.5 ಡಿಗ್ರಿ ಓರೆಯಾಗಿ ತಿರುಗುತ್ತಾ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುವುದರಿಂದ, ಕೆಲ ಸಂದರ್ಭಗಳಲ್ಲಿ ಸೂರ್ಯನ ಕಿರಣಗಳು ನೇರವಾಗಿ ಭೂಮಿಯ ಮೇಲ್ಭಾಗಕ್ಕೆ ಬೀಳುತ್ತವೆ.

ಇದರ ಪರಿಣಾಮವಾಗಿ ಈ ‘ಶೂನ್ಯ ನೆರಳು’ ವಿದ್ಯಮಾನ ಸಂಭವಿಸುತ್ತದೆ.ಈ ಕ್ಷಣವನ್ನು ಗಮನಿಸಲು ನೇರವಾಗಿ ಒಂದು ಕಂಬ ಅಥವಾ ಕಡ್ಡಿಯನ್ನು ನೆಟ್ಟಿಟ್ಟು ಅದರ ನೆರಳನ್ನು ನೋಡಬಹುದು ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ. ಸ್ವಾಮಿ ತಿಳಿಸಿದ್ದಾರೆ.



















