Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಾವ್ಯ ಬರೆಯುವುದು, ಕಟ್ಟುವುದು ಹೃದಯಕ್ಕೆ ಸಂಬಂಧಿಸಿದ ಕೆಲಸ: ಇತಿಹಾಸ ಸಂಶೋಧಕ ಡಾ. ಬಿ. ರಾಜಶೇಖರಪ್ಪ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 23 : ಓದುಗರಿಗೆ ತಿಳುವಳಿಕೆ ಕೊಡುವ ಕಾವ್ಯಕ್ಕೆ ಹಿಂದಿನಿಂದಲೂ ವಿಶೇಷ ಮಾನ್ಯತೆ ಕೊಡಲಾಗಿದೆ. ಕಾವ್ಯ ಬರೆಯುವುದು, ಕಟ್ಟುವುದು ಹೃದಯಕ್ಕೆ ಸಂಬಂಧಿಸಿದ ಕೆಲಸ ಎಂದು ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಹೇಳಿದರು.

ಡಾ.ಹೇಮಂತರಾಜು ಎಸ್.ಎನ್.ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನವನ್ನು ಪತ್ರಕರ್ತರ ಭವನದಲ್ಲಿ ಭಾನುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಡಾ.ಹೇಮಂತರಾಜುರವರಲ್ಲಿ ಕಾವ್ಯದ ಬಗ್ಗೆ ಗಂಭೀರವಾದ ಕಳಕಳಿಯಿದೆ. ಅವರು ವಿದ್ಯಾರ್ಥಿಯಾದಾಗಿನಿಂದಲೂ ನಾನು ಗಮನಿಸುತ್ತಿದ್ದೇನೆ. ಕಾವ್ಯ ಬೇರೆ, ಪದ್ಯವೆ ಬೇರೆ ಎಂದು ಕುವೆಂಪು ಹೇಳಿದ್ದಾರೆ. ಎಲ್ಲಾ ಪದ್ಯಗಳು ಕಾವ್ಯ ಆಗಲ್ಲ. ಎಲ್ಲಾ ಕಾವ್ಯಗಳು ಪದ್ಯ ಆಗುವುದಿಲ್ಲ. ಗದ್ಯವೂ ಆಗಬಹುದು ಅಂತ. ಕಾವ್ಯ ಅಂದರೆ ಸುಂದರ ರಮ್ಯವಾದ ಪದಗಳ ನೇಯ್ಗೆಯಿದೆ ಎಂದು ಆದಿ ಕವಿ ಪಂಪ್ ಕೂಡ ಹೇಳಿದ್ದಾರೆ. ಹೊಸ ರೀತಿಯ ಯೋಚನೆಯಿರಬೇಕು. ಮನಸ್ಸಿಗೆ ಆನಂದ ನೀಡುವುದು ಕಾವ್ಯ ಎಂದು ತಿಳಿಸಿದರು.

ಹೊಸಗನ್ನಡ, ಹಳೆಗನ್ನಡ, ನವ್ಯ ಕಾವ್ಯ ಹೀಗೆ ನಾನಾ ಬಗೆಯ ಕಾವ್ಯಗಳಿವೆ. ಬಂಡಾಯ ಕಾವ್ಯವನ್ನು ನೋಡುತ್ತಿದ್ದೇವೆ. ಡಾ.ಹೇಮಂತರಾಜುರವರ ಕವನದಲ್ಲಿ ಮೃದುತ್ವವಿದೆ. ಕಠೋರವಾದ ಚಿತ್ರ, ಹೋಲಿಕೆ, ಭಾಷೆಯಾಗಲಿ ಈ ಕಾವ್ಯದಲ್ಲಿಲ್ಲ. ಇಂತಹ ಕವನ ಸಂಕಲವನ್ನು ಹೊರ ತರುವುದು ಸುಲಭದ ಕೆಲಸವಲ್ಲ. ಪ್ರಜಾಪ್ರಭುತ್ವದ ವಿಫಲತೆಯನ್ನು ಕಣ್ಣಿಗೆ ಕಟ್ಟುವ ಸಾಲುಗಳು ಇದರಲ್ಲಿದೆ. ಓದುಗರು ಇಂತಹ ಕವನಗಳಿಗೆ ಪ್ರೋತ್ಸಾಹ ನೀಡಬೇಕೆಂದರು.

ಪ್ರಾಧ್ಯಾಪಕಿ ಡಾ.ತಾರಿಣಿ ಶುಭದಾಯಿನಿ ಮಾತನಾಡಿ ಅಸಡ್ಡೆ, ಅನಧಾರಗಳ ನಡುವೆ ಕಾವ್ಯ ಏಕೆ ಬರೆಯಬೇಕು ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಕವಿಗಳಿಗೆ ಕಾಡುತ್ತದೆ.
ನಾಡು, ನುಡಿ, ಅಸ್ತಿತ್ವದ ಬಗ್ಗೆ ನಿರಾಸೆಯ ಮಾತುಗಳನ್ನಾಡುವವರು ಒಂದು ಕಡೆಯಾದರೆ ಮತ್ತೊಂದು ಕಡೆ ಕವಿಗಳು ಕವಿತೆಗಳ ಬಗ್ಗೆ ರಮ್ಯವಾಗಿ ಯೋಚಿಸುತ್ತಾರೆ. ಹೃದಯ ಸಂಬಂಧ ಮಾತುಗಳನ್ನಾಡಬೇಕಾದರೆ ಕವಿತೆಗಳನ್ನು ಬರೆಯಬೇಕು. ಪ್ರತಿಯೊಬ್ಬರಲ್ಲಿಯು ಒಂದೊಂದು ಬಗೆಯ ಕಾವ್ಯ ಇದ್ದೆ ಇರುತ್ತದೆ. ಡಾ.ಹೇಮಂತರಾಜುರವರ ಕವನ ಸಂಕಲನದಲ್ಲಿ ಬುದ್ದಿ ಭಾವನೆಗಳಿವೆ. ಕವಿತೆ ನಮ್ಮೊಳಗಿನ ಮಾತು. ಪ್ರತಿ ಕವಿತೆಯೂ ಒಂದು ಪ್ರಾರ್ಥನೆ ಎಂದು ಅಡಿಗರು ಹೇಳುತ್ತಾರೆ. ಉಪಾಯಗಳನ್ನು ಹುಡುಕಿಕೊಳ್ಳುವುದು ಕವಿತೆಗಳ ಕೆಲಸ ಎಂದು ನುಡಿದರು.

ದೇಶದಲ್ಲಿ ಸಾಲು ಸಾಲು ಅತ್ಯಾಚಾರಗಳು ನಡೆಯುತ್ತಿವೆ. ಕವಿತೆ ಕೆಲವೊಮ್ಮೆ ವಾಸ್ತವಿಕತೆಗೆ ಉಲ್ಟಾಪಲ್ಟಾ ಇರುತ್ತೆ. ಬ್ರಾಮಕ ಜಗತ್ತಿನಲ್ಲಿ ಮುಳುಗುವುದನ್ನು ಬಿಟ್ಟು ಕವಿ ಸೂಕ್ಷ್ಮವಾಗಿ ಆತ್ಮಾವಲೋಕನಕ್ಕೆ ಇಳಿಯಬೇಕು. ಈ ಕವನ ಸಂಕಲನದಲ್ಲಿ ಒಳ್ಳೊಳ್ಳೆ ಸಾಲುಗಳಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕವನ ಸಂಕಲನ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯರಾದ ಡಾ.ಸಂಗೇನಹಳ್ಳಿ ಅಶೋಕ್‍ಕುಮಾರ್ ಮಾತನಾಡಿ ಕಾವ್ಯ ಹೊರಬಿದ್ದಾಗ ಕವಿ ಮೌನವಾಗಿರಬೇಕಾಗುತ್ತದೆ. ಹಣ, ಅಧಿಕಾರಕ್ಕಾಗಿಯೇ ಎಲ್ಲರೂ ಹಪ ಹಪಿಸುವ ಇಂದಿನ ಕಾಲದಲ್ಲಿ ಡಾ.ಹೇಮಂತರಾಜು ಕಾವ್ಯದ ಮೂಲಕ ಭ್ರಷ್ಟರು, ಅತ್ಯಾಚಾರಿಗಳಿಗೆ ಚಾಟಿ ಬೀಸುವ ಕೆಲಸವನ್ನು ಮಾಡಿದ್ದಾರೆ. ಕವಿಗಳು ಮಾನಸಿಕ ರೋಗಕ್ಕೆ ತುತ್ತಾಗುತ್ತಾರೆನ್ನುವುದು ಸ್ಕಿಜೋಫ್ರೇನಿಯಾ ಅರ್ಥವಿರಬಹುದು. ಕಾವ್ಯ ಎನ್ನುವುದು ಸಮಾಜ ಮುಖಿ ಆಶಯವಾಗಿರಬೇಕು. ಈ ಕವನ ಸಂಕಲನ ನಾಟ್ಯ, ಭಂಗಿ, ಕಾಲ್ಗೆಜ್ಜೆಯ ಧ್ವನಿಯಾಗಿದೆ ಎಂದು ಪ್ರಶಂಶಿಸಿದರು.

 

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಮಾತನಾಡುತ್ತ ಕವಿತೆಯನ್ನು ಕಟ್ಟುವವರಲ್ಲಿ ಒಳ ಹಸಿವಿರುತ್ತದೆ. ಪ್ರಧಾನಿ ನರೇಂದ್ರ ಮೋದಿರವರ ಭೇಟಿ ಬಚಾವೋ, ಭೇಟಿ ಪಡಾವೋ, ಗಾಂಧಿ, ಅಪ್ಪ ಈ ಮೂರು ವಿಚಾರಗಳನ್ನು ಓದಿದಾಗ ಮನಸ್ಸಿಗೆ ಆಗುವ ಗಾಯಗಳನ್ನು ವಾಸಿ ಮಾಡುವ ಶಕ್ತಿ ಈ ಕವಿತೆಯಲ್ಲಿದೆ. ಹೆಣ್ಣನ್ನು ಪರಿಭಾವಿಸುವ ಹಿನ್ನೆಲೆ ಕಾಡದಿದ್ದರೆ ನಮಗೆ ನಾವೆ ಮಾಡಿಕೊಳ್ಳುವ ಮೋಸ. ಗಾಂಧಿ ಬೇಕೆನ್ನುವ ತುಡಿತ ಇದರಲ್ಲಿದೆ ಎಂದರು.

ಡಿಎಸ್‍ಇಆರ್‍ಟಿ. ಉಪ ನಿರ್ದೇಶಕ ಡಾ.ಜಿ.ವಿ.ಹರಿಪ್ರಸಾದ್ ಮಾತನಾಡಿ ಮಿಡಿಯುವ ಗುಣ, ಸೂಕ್ಷ್ಮತೆ ಈ ಕವನ ಸಂಕಲನದಲ್ಲಿದೆ. ಕೌತುಕತೆ, ಬೇಸರ, ನೋವನ್ನು ಒಟ್ಟಿಗೆ ಸೇರಿಸಿ ಡಾ.ಹೇಮಂತರಾಜು ಕವನಗಳನ್ನು ರಚಿಸಿದ್ದಾರೆ. ಬರಹಗಾರರು ಆಶಾವಾದಿಗಳಾಗಿರುತ್ತಾರೆ. ವಸ್ತುನಿಷ್ಟತೆ, ವ್ಯಕ್ತಿನಿಷ್ಟತೆ ಈ ಕವನ ಸಂಕಲನದಲ್ಲಿದೆ. ವೈಶಿಷ್ಠತೆಯನ್ನು ಹಾಸುಹೊಕ್ಕಾಗಿ ನಿಲ್ಲಿಸಿದ್ದಾರೆಂದು ಗುಣಗಾನ ಮಾಡಿದರು.
ಓಪನ್ ಮೈಂಡ್ಸ್ ವಲ್ರ್ಡ್ ಸ್ಕೂಲ್ ಶಿವಮೊಗ್ಗದ ಕೆ.ಕಿರಣ್‍ಕುಮಾರ್ ಮಾತನಾಡುತ್ತ ನಲವತ್ತು ಕವಿತೆಗಳುಳ್ಳ ಈ ಕವನ ಸಂಕಲನದಲ್ಲಿ ಸಾಮಾಜಿಕ, ರಾಜಕೀಯ ಪ್ರಶ್ನೆಗಳಿವೆ. ಓದುಗರನ್ನು ತೀಕ್ಷ್ಣವಾಗಿ ಚಿಂತನೆಗೆ ಒಳಪಡಿಸುವ ಕವನಗಳಿವೆ. ಡಾ.ಹೇಮಂತರಾಜುರವರ ಬರವಣಿಗೆಯ ಹಿಂದೆ ಸಿಟ್ಟು, ಹತಾಶೆ ಅಡಗಿದೆ ಎಂದು ಹೇಳಿದರು.

ಕವನ ಸಂಕಲನದ ಕೃತಿಕಾರ ಡಾ.ಹೇಮಂತರಾಜು ಮಾತನಾಡಿ ಸಾಹಿತ್ಯದ ಬಗ್ಗೆ ಯೋಚನೆ ಮಾಡುವುದನ್ನು ನನಗೆ ಕಲಿಸಿದ್ದು, ವಿದ್ಯಾ ಗುರುಗಳು. ನಮ್ಮ ಕಾಲದ ಪಠ್ಯಗಳೆ ಆಲೋಚನೆಯನ್ನು ರೂಪಿಸುವಂತಿದ್ದವು. ಸಮಾಜವನ್ನು ಬದಲಿಸುವ ಶಕ್ತಿಯಿರುವುದು ಗುರುಗಳಿಗೆ ಮಾತ್ರ. ಮೇಷ್ಟ್ರುಗಳ ಶಕ್ತಿ ಕುಂದಿದರೆ ಸಮಾಜ ನಾಶವಾಗುತ್ತದೆ. ಪುಸ್ತಕಗಳು ಮನಸ್ಸನ್ನು ರೂಪಿಸದರೆ ಸಾಹಿತ್ಯ ಮನಸ್ಸನ್ನು ಶುದ್ದಿಕರಿಸುತ್ತದೆ. ಓದು ಮುಖ್ಯ. ಆದರೆ ಯಾವುದನ್ನು ಓದುತ್ತೇವೆನ್ನುವುದು ಅತಿ ಮುಖ್ಯ. ಕವನಗಳೆಂದರೆ ನನಗೆ ತುಂಬಾ ಇಷ್ಟ ಎಂದರು. ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ದೊಡ್ಡಪ್ಪ ಎನ್ ವೇದಿಕೆಯಲ್ಲಿದ್ದರು. ಡಾ.ಹೇಮಂತರಾಜು ಎಸ್.ಎನ್.ರವರ ಕುಟುಂಬದವರು, ಸಹ ಪಾಠಿಗಳು, ಅಪಾರ ಅಭಿಮಾನಿಗಳು ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now