ಬೆಂಗಳೂರು: ಹುಬ್ಬಳ್ಳಿಯಲ್ಲಿ ಮತಪಟ್ಟಿ ಪರಿಷ್ಕರಣೆಗೆಂದು ಹೋದಾಗ ಗಲಾಟೆ ಜೋರಾಗಿದೆ. ಈ ವೇಳೆ ಮಹಿಳೆಯನ್ನ ಪೊಲೀಸರು ಬಂಧಿಸಿದ್ದಾರೆ. ವ್ಯಾನ್ ನಲ್ಲಿ ಹತ್ತಿಸಿದ ಬಳಿಕ ತಾನೇ ಬಟ್ಟೆ ಬಿಚ್ಚಿದ್ದಾಳೆ ಎಂದು ಖುದ್ದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ಈ ಸಂಬಂಧ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ನಾಗಲಕ್ಷ್ಮೀ, ನಾನು ಎಸ್ಪಿ ಜೊತೆಗೆ ಮಾತನ್ನಾಡಿದ್ದೇನೆ. ಪೊಲೀಸರು 307 ಕೇಸಿನಲ್ಲಿ ಆ ಮಹಿಳೆಯನ್ನು ಅರೆಸ್ಟ್ ಮಾಡಿದ್ದಾರೆ. ಆ ಸಂದರ್ಭದಲ್ಲಿ ಮಹಿಳೆಯ ತಾಯಿ ತಮ್ಮ ಜೊತೆಗಿದ್ದರು. ಮಹಿಳೆಯನ್ನು ಅರೆಸ್ಟ್ ಮಾಡಿದ ಮೇಲೆ ಆಕೆಯೇ ಬಟ್ಟೆ ಬಿಚ್ಚಿಕೊಂಡಿದ್ದಾಳೆ. ಬಟ್ಟೆ ಬಿಚ್ಚಿದ್ದನ್ನ ತಮ್ಮನೇ ವಿಡಿಯೋ ಮಾಡಿ ವೈರಲ್ ಮಾಡಿದ್ದಾನೆ.
ಅಷ್ಟೇ ಅಲ್ಲ ಜಡ್ಜ್ ಮುಂದೆಯೂ ಪೊಲೀಸರು ದೌರ್ಜನ್ಯ ಮಾಡಿರುವ ಬಗ್ಗೆ ಮಹಿಳೆ ಏನು ಹೇಳಿರಲಿಲ್ಲ. ಕಾನೂನಿನ ಪ್ರಕಾರ ಏನು ಕ್ರಮ ಆಗಬೇಕೋ ಆಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇನ್ನು ಈ ಘಟನೆ ಬಗ್ಗೆ ಬಿಜೆಪಿ ನಾಯಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ಹೊರ ಹಾಕಿದ್ದಾರೆ. ದ್ರೌಪದಿ ವಸ್ತ್ರಾಭರಣ ಆದ ಹಾಗೆ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರದಲ್ಲಿ ಬಿಜೆಪಿ ಕಾರ್ಯಕರ್ತೆಯ ಮೇಲೆ ದೌರ್ಜನ್ಯ ನಡೆದಿದೆ ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಈ ಘಟನೆ ಬಗ್ಗೆ ಧ್ವನಿ ಎತ್ತಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.















