ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮೊದಲೆ ಸಿಎಂ ಸ್ಥಾನ ಬದಲಾವಣೆಯ ಬಗ್ಗೆ ಜೋರು ಚರ್ಚೆ ನಡೆಯುತ್ತಿರುವಾಗಲೇ ಡಿಸಿಎಂ ಹುದ್ದೆಯ ಚರ್ಚೆಯು ನಡೆದಿದೆ. ಅದರಲ್ಲೂ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಡಿಸಿಎಂ ಹುದ್ದೆ ಸಿಗಲಿದೆ ಎಂಬ ಮಾತು ಚರ್ಚೆಯಾಗುತ್ತಿದೆ. ಈ ಬಗ್ಗೆ ಸ್ವತಃ ಜಮೀರ್ ಅಹ್ಮದ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯನಗರದಲ್ಲಿ ಮಾತನಾಡಿದ ಜಮೀರ್ ಅಹ್ಮದ್ ಖಾನ್, ನವೆಂಬರ್ ಕ್ರಾಂತಿಯೂ ಇಲ್ಲ ಏನಿಲ್ಲ. ಮೊನ್ನೆ ಮೊನ್ನೆಯಷ್ಟೇ ಚಿತ್ರದುರ್ಗದಲ್ಲೂ ಈ ಬಗ್ಗೆ ಹೇಳಿದ್ದೀನಿ. 2028ರವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಸದ್ಯಕ್ಕೆ ಸಿಎಂ ಖುರ್ಚಿ ಖಾಲಿ ಇಲ್ಲ. ಈ ಬಗ್ಗೆ ಮೊನ್ನೆನೆ ಹೇಳಿದ್ದೀನಿ. ಡಿಸಿಎಂ ಆಗೋದು, ಸಚಿವ ಸಂಪುಟ ಪುನರ್ ರಚನೆ ಮಾಡೋದು ಇದೆಲ್ಲವನ್ನು ನೋಡಿಕೊಳ್ಳೋದು ಹೈಕಮಾಂಡ್.
ನಮ್ಮದು ಹೈಕಮಾಂಡ್ ಇರುವ ಪಕ್ಷ. ಈ ಬಗ್ಗೆ ನಾವೆಲ್ಲಾ ಏನು ಹೇಳೋದಕ್ಕೆ ಆಗಲ್ಲ. ನಮ್ಮ ಅಭಿಮಾನಿಗಳಿಗೆ ಬೇಡಿಕೆ ಇದೆ. ಎಲ್ಲರಿಗೂ ಈ ವಿಚಾರ ಸಹಜ ತಾನೇ. ನಮ್ಮ ಅಭಿಮಾನಿಗಳಿಗೆ ನಾನು ಡಿಸಿಎಂ ಆಗ್ಬೇಕು ಎಂಬ ಆಸೆ ಇದೆ. ಆದರೆ ಅದನ್ನ ತೀರ್ಮಾನ ಮಾಡೋದು ಯಾರು, ನಮ್ಮ ಹೈಕಮಾಂಡ್. ನಾನು ಆಕಾಂಕ್ಷಿಯಲ್ಲ. ಪಕ್ಷದ ಶಿಸ್ತಿನ ಸಿಪಾಯಿ. ಆದರೆ ಅವಕಾಶ ಬಂದ್ರೆ ಬೇಡ ಅಂತಾರಾ ಯಾರಾದ್ರು. ಆದ್ರೆ ನಂಗೆ ಪಕ್ಷ ತುಂಬಾ ಮುಖ್ಯ. ಪಕ್ಷ ಇದ್ರೆ ನಾವು. ಒಂದು ವೇಳೆ ಈಗಿರುವ ಸಚಿವ ಸ್ಥಾನವನ್ನೇ ಬಿಟ್ಟುಕೊಟ್ಟು, ಪಕ್ಷದ ಕೆಲಸ ಮಾಡಪ್ಪ ಅಂದ್ರೆ ನಾನು ಅದಕ್ಕೂ ಸಿದ್ಧ ಎಂದ ಜಮೀರ್ ಅಹ್ಮದ್ ಹೇಳಿದ್ದಾರೆ.
