ಬೆಂಗಳೂರು: ಶಾಸಕ ವಿನಯ್ ಕುಲಕರ್ಣಿ ಅಪರಾಧಿ ಎಂದು ಸಾಬೀತಾಗಿದ್ದು, ಇಂದು ಶಿಕ್ಷೆಯ ಪ್ರಮಾಣವನ್ನ ಕೋರ್ಟ್ ಪ್ರಕಟಿಸಬೇಕಿತ್ತು. ಆದರೆ ಪ್ರಕಟ ಮಾಡಿಲ್ಲ. ನಾಳೆಗೆ ಶಿಕ್ಷೆಯ ಪ್ರಮಾಣವನ್ನ ಮುಂದೂಡಿಕೆ ಮಾಡಿದೆ. ಅದಕ್ಕೂ ಮುನ್ನ ಕೋರ್ಟ್ ನಲ್ಲಿ ಜಡ್ಜ್ ಗಳ ಮುಂದೆ ವಿನಯ್ ಕುಲಕರ್ಣಿ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ. ಕೋರ್ಟ್ ಗೆ ಹೋಗುವುದಕ್ಕೂ ಮುನ್ನ ವಿಶ್ವಾಸವಿದೆ ಎಂಬ ಮಾತನ್ನ ಹೇಳಿದ್ದರು. ಇದೀಗ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎಂದಿದ್ದಾರೆ.
ನಾನು ಯಾರಿಗೂ ಈವರೆಗೂ ಅನ್ಯಾಯ ಮಾಡಿಲ್ಲ. ಈ ಪ್ರಕರಣದಲ್ಲಿ ನಿಜಕ್ಕೂ ನನಗೆ ಅನ್ಯಾಯವಾಗಿದೆ. ನನಗೆ ಇಬ್ಬರು ಹೆಣ್ಣು ಮಕ್ಕಳ, ಒಬ್ಬ ಮಗನಿದ್ದಾನೆ. ಮೂವರಿಗೂ ಮದುವೆ ಮಾಡಬೇಕಿದೆ. ನನ್ನ ಕುಟುಂಬದ ಪರಿಸ್ಥಿತಿ ಹೀಗಿದೆ ಎಂಬುದರ ಬಗ್ಗೆ ಮಾತನ್ನಾಡುತ್ತಾ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಇನ್ನು ಇಂದು ವಾದ – ಪ್ರತಿವಾದ ಆಲಿಸಿರುವ ಕೋರ್ಟ್ ನಾಳೆ ತೀರ್ಪನ್ನ ಪ್ರಕಟ ಮಾಡಲಿದೆ. ವಿನಯ್ ಕುಲಕರ್ಣಿ ಪರವಾಗಿ ಶಾಮ್ ಅವರು ವಾದ ಮಂಡನೆ ಮಾಡಿದರು. ಕಡಿಮೆ ಪ್ರಮಾಣದ ಶಿಕ್ಷೆಯನ್ನು ನೀಡುವಂತೆ ಮನವಿ ಮಾಡಿದ್ದಾರೆ. ವಿನಯ್ ಕುಲಕರ್ಣಿ ಅವರ ತಂದೆಯ ವಯಸ್ಸಿನ ಬಗ್ಗೆಯೂ ಮೆನ್ಶನ್ ಮಾಡಿದ್ದಾರೆ. ಜೀವಿತಾವಧಿ ಶಿಕ್ಷೆ ಕೊಡುವುದು ಗಲ್ಲು ಶಿಕ್ಷೆಗಿಂತ ಘೋರ ಶಿಕ್ಷೆಯಾದಂತೆ ಆಗುತ್ತದೆ. ನಾಲ್ಕು ಗೋಡೆಗಳ ನಡುವೆಯೇ ಜೀವನ ನಡೆಸಬೇಕು. ಆದರೆ ಅವರ ಕುಟುಂಬ ಹೊರಗೆ ನರಳುತ್ತಾ ಇರುತ್ತದೆ. ಹೀಗಾಗಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದೆಲ್ಲವನ್ನು ಕೇಳಿಸಿಕೊಂಡ ಕೋರ್ಟ್ ಸದ್ಯ ಶಿಕ್ಷೆಯ ಪ್ರಮಾಣವನ್ನ ನಾಳೆಗೆ ಮುಂದೂಡಿದೆ.













