ದೆಹಲಿ: ದೇಶದಲ್ಲಿ ಇಂಧನ ಕೊರತೆಯಾಗದಂತೆ ತಡೆಯಲು ಕೇಂದ್ರ ಸರ್ಕಾರ ಭಾರಿ ಮಹತ್ವದ ಹಾಗೂ ಕಠಿಣ ನಿರ್ಧಾರವೊಂದನ್ನು ಕೈಗೊಂಡಿದೆ. ಇನ್ನು ಮುಂದೆ ಸಾಮಾನ್ಯ ಪೆಟ್ರೋಲ್ ಬಂಕ್ ಗಳಿಂದ ಕೈಗಾರಿಕಾ ಮತ್ತು ವಾಣಿಜ್ಯ ಬಳಕೆಯ ಗ್ರಾಹಕರು ಪೆಟ್ರೋಲ್ ಹಾಗೂ ಡೀಸೆಲ್ ಖರೀದಿಸುವುದನ್ನು ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದೆ. ಇದರೊಂದಿಗೆ ಸಾಮಾನ್ಯ ವಾಹನ ಸವಾರರಿಗೂ ಡೀಸೆಲ್ ಮಾರಾಟದ ದಿನದ ಮಿತಿಯನ್ನು ನಿಗದಿಪಡಿಸಲಾಗಿದೆ.
ವರದಿಯ ಪ್ರಕಾರ, ಸರ್ಕಾರದ ಈ ಹೊಸ ನಿಯಮವು ಸದ್ಯಕ್ಕೆ 90 ದಿನಗಳವರೆಗೆ (ಮೂರು ತಿಂಗಳು) ಜಾರಿಯಲ್ಲಿರಲಿದ್ದು, ಪರಿಸ್ಥಿತಿ ಸುಧಾರಿಸಿದರೆ ಅವಧಿಗೂ ಮುನ್ನವೇ ವಾಪಸ್ ಪಡೆಯುವ ಸಾಧ್ಯತೆಯೂ ಇದೆ.ಹೊಸ ಆದೇಶದ ಪ್ರಕಾರ, ಸಾಮಾನ್ಯ ಪೆಟ್ರೋಲ್ ಬಂಕ್ ಗಳಲ್ಲಿ ಒಬ್ಬ ಗ್ರಾಹಕನಿಗೆ ಅಥವಾ ಒಂದು ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಮಾತ್ರ ನೀಡಲಾಗುತ್ತದೆ.
ಬೃಹತ್ ಕೈಗಾರಿಕಾ ಸಂಸ್ಥೆಗಳು ಮತ್ತು ವಾಣಿಜ್ಯ ಉದ್ದೇಶದ ಗ್ರಾಹಕರು ಇನ್ನು ಮುಂದೆ ಸಾಮಾನ್ಯ ಪೆಟ್ರೋಲ್ ಬಂಕ್ ಗಳಿಂದ ಇಂಧನ ಖರೀದಿಸುವಂತಿಲ್ಲ. ಅವರು ಕೇವಲ ಸರ್ಕಾರ ಅಧಿಕೃತಗೊಳಿಸಿರುವ ‘ಬಲ್ಕ್ ಸಪ್ಲೈ ಪಾಯಿಂಟ್ಗಳಿಂದಲೇ’ (ಸಗಟು ಪೂರೈಕೆ ಕೇಂದ್ರಗಳು) ತಮಗೆ ಬೇಕಾದ ಇಂಧನವನ್ನು ಖರೀದಿಸಬೇಕಾಗುತ್ತದೆ.ಈ ನಿಯಮದಿಂದ ಸಾಮಾನ್ಯ ವಾಹನ ಸವಾರರಿಗೆ ಮತ್ತು ಗೃಹ ಬಳಕೆಯ ಗ್ರಾಹಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಹಾಗೂ ಇಂಧನ ಪೂರೈಕೆ ಎಂದಿನಂತೆ ಇರಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇತ್ತೀಚಿನ ದಿನಗಳಲ್ಲಿ ಅನೇಕ ಸಾರಿಗೆ ಸಂಸ್ಥೆಗಳು ಮತ್ತು ದೊಡ್ಡ ಕೈಗಾರಿಕೆಗಳು ತಮಗೆ ನಿಗದಿಪಡಿಸಲಾದ ಬಲ್ಕ್ ಡಿಪೋಗಳ ಬದಲಿಗೆ ಸಾಮಾನ್ಯ ಪೆಟ್ರೋಲ್ ಬಂಕ್ಗಳಿಂದಲೇ ಭಾರಿ ಪ್ರಮಾಣದಲ್ಲಿ ಡೀಸೆಲ್ ಖರೀದಿಸುತ್ತಿದ್ದವು. ಇದಕ್ಕೆ ಮುಖ್ಯ ಕಾರಣ ಬೆಲೆಯಲ್ಲಿನ ಭಾರಿ ವ್ಯತ್ಯಾಸ. ಪ್ರಸ್ತುತ ದೆಹಲಿಯಲ್ಲಿ ಸಾಮಾನ್ಯ ಪೆಟ್ರೋಲ್ ಬಂಕ್ಗಳಲ್ಲಿ ಡೀಸೆಲ್ ದರ ಪ್ರತಿ ಲೀಟರ್ಗೆ ₹95.20 ಇದ್ದರೆ, ಬಲ್ಕ್ (ಸಗಟು) ಗ್ರಾಹಕರಿಗೆ ಇದರ ಬೆಲೆ ₹134.50 ಆಗಿದೆ. ಅಂದರೆ ಪ್ರತಿ ಲೀಟರ್ಗೆ ಸುಮಾರು 39 ರೂಪಾಯಿಗಳ ಭಾರಿ ವ್ಯತ್ಯಾಸವಿದೆ! ಈ ಬೆಲೆ ವ್ಯತ್ಯಾಸದಿಂದಾಗಿ ದೊಡ್ಡ ಕಂಪನಿಗಳು ರಿಟೇಲ್ ಬಂಕ್ಗಳಿಂದಲೇ ತೈಲ ಖರೀದಿಸುತ್ತಿದ್ದವು. ಇದರಿಂದ ದೇಶದ ಹಲವೆಡೆ ಇಂಧನ ಕೊರತೆ ಮತ್ತು ಕೃತಕ ಅಭಾವ ಸೃಷ್ಟಿಯಾಗತೊಡಗಿತ್ತು.
ಜೊತೆಗೆ, ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ, ಜಾಗತಿಕ ಸರಬರಾಜು ಸರಪಳಿಯಲ್ಲಿನ ಅಡೆತಡೆಗಳು ಮತ್ತು ಕಚ್ಚಾ ತೈಲದ ಹೆಚ್ಚಿನ ಬೆಲೆಯಿಂದಾಗಿ ತೈಲ ಪೂರೈಕೆಯ ಮೇಲೆ ಒತ್ತಡ ಹೆಚ್ಚಾಗಿದೆ. ಆದ್ದರಿಂದ ದೇಶಾದ್ಯಂತ ಇಂಧನದ ಸಮಾನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಕಾಳಸಂತೆ ಹಾಗೂ ಅಕ್ರಮ ದಾಸ್ತಾನನ್ನು ತಡೆಯಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















