ಮಾರ್ಚ್ 22ಕ್ಕೆ ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜ್ ಕರೆ ; ಕಾರಣವೇನು ಗೊತ್ತಾ..?

suddionenews
1 Min Read

ಬೆಂಗಳೂರು; ಎಂಇಎಸ್ ಪುಂಡರ ಹಾವಳಿ ಬೆಳಗಾವಿಯಲ್ಲಿ ಕಡಿಮೆಯಾದಂತೆ ಕಾಣಿಸುತ್ತಿಲ್ಲ. ಪದೇ ಪದೇ ಯಾವುದಾದರೂ ವಿಚಾರಕ್ಕೆ ಕ್ಯಾತೆ ತೆಗೆಯುತ್ತಲೆ ಇರುತ್ತಾರೆ. ಇತ್ತೀಚೆಗಷ್ಟೇ ಸಾರುಗೆ ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಮೇಲೆ ನಡೆದ ದಾಳಿಗೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಈ ಸಂಬಂಧ ಹೋರಾಟಗಳು ನಡೆಯುತ್ತಿವೆ. ಇದೀಗ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕೂಡ ಈ ಸಂಬಂಧ ಆಕ್ರೋಶ ಹೊರ ಹಾಕಿದ್ದು, ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ.

ಇಂದು ಬೆಂಗಳೂರಿನ ಹೊಟೇಲ್ ನಲ್ಲಿ ವಾಟಾಳ್ ನಾಗಾರಾಜ್ ನೇತೃತ್ವದಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ಬೆಳಗಾವಿಯಲ್ಲಿ ಸಾರಿಗೆ ಬಸ್ ಕಂಡಕ್ಟರ್ ಹಾಗೂ ಚಾಲಕರ ಮೇಲೆ ಹಲ್ಲೆ ನಡೆದಿದ್ದನ್ನು ಖಂಡಿಸಿ, ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಈಗಾಗಲೇ ಪದೇ ಪದೇ ಕನ್ನಡಿಗರ ಮೇಲೆ ಎಂಇಎಸ್ ಪುಂಡರಿಂದ ಹಲ್ಲೆ ನಡೆಯುತ್ತಿದೆ. ಆದರೆ ಬಂದು ಹೋಗುವ ಸರ್ಕಾರಗಳು ಮಾತ್ರ ಜಾಣ ಕುರುಡು ತೋರಿಸುತ್ತಿವೆ. ಬೆಳಗಾವಿಯಲ್ಲಿ ಕನ್ನಡಿಗರಿಗೆ ಆಗ್ತಿರೋ ಅನ್ಯಾಯ ಕೊನೆಯಾಗಬೇಕು. ಶಿವಸೇನೆ ಹಾಗೂ ಎಂಇಎಸ್ ಪುಂಡರಿಗೆ ಕಡಿವಾಣ ಹಾಕಬೇಕು. ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳದೆ ಹೋದರೆ ಮರಾಠಿಗರು ಬುದ್ದಿ ಕಲಿಯಲ್ಲ ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಮಾರ್ಚ್ 3ರ ಬೆಳಗ್ಗೆ 11ಕ್ಕೆ ರಾಜಭವನದ ಮುತ್ತಿಗೆ ಹಾಕಲಿದ್ದು, ಮಾರ್ಚ್ 7ಕ್ಕೆ ಬೆಳಗಾವಿ ಚಲೋ ಹಮ್ಮಿಕೊಂಡಿದ್ದಾರೆ. ಮಾರ್ಚ್ 11 ರಂದು ಮೇಕೆದಾಟಿಗಾಗಿ ಅತ್ತಿಬೆಲೆ ತಮಿಳುನಾಡು ಗಡಿ ಬಂದ್ ಮಾಡಲಿದ್ದಾರೆ. ಮಾರ್ಚ್ 17 ರಂದು ಹೊಸಕೋಟೆ – ಚೆನ್ನೈ ಹೆದ್ದಾರಿ ತಡೆಯಲಿದ್ದಾರೆ. ಮಾರ್ಚ್ 18 ರಂದು ಕನ್ನಡ ಪರ ಸಂಘಟನೆಗಳು ಸಭೆ ನಡೆಸಲಿದ್ದು, ಮಾರ್ಚ್ 22ರಂದು ಬೆಳಗ್ಗೆ 6 ರಿಂದ ಸಂಜೆ 6 ರವರೆಗೂ ಕರ್ನಾಟಕ ಬಂದ್ ನಡೆಸಲು ನಿರ್ಧಾರ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *