ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗಾಗಿ ಕೇಂದ್ರ ಸರ್ಕಾರ ತಮ್ಮ ಬಜೆಟ್ ನಲ್ಲಿ ಸುಮಾರು 5,300 ಕೋಟಿ ರೂಪಾಯಿ ಅನುದಾನವನ್ನ ಘೋಷಣೆ ಮಾಡಿತ್ತು. ಅದು 2022ರಲ್ಲಿ. ಆದರೆ ಇಲ್ಲಿಯವರೆಗೂ ಅದು ಘೋಷಣೆಯಾಗಿಯೇ ಉಳಿದಿದೆ ವಿನಃ ಭದ್ರಾ ಮೇಲ್ದಂಡೆ ಯೋಜನೆಗಾಗಿ ಹಣ ಬಂದಿಲ್ಲ. ಈ ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ತುಮಕೂರು ಭಾಗದ ರೈತರ ಆಶಾ ಕಿರಣವಾಗಿದೆ. ಹೀಗಾಗಿ ಯೋಜನೆಗೆ ಬರಬೆರಕಾದ ಹಣ ನೀಡದ ಕೇಂದ್ರ ಸರ್ಕಾರದ ವಿರುದ್ಧ ರೈತರು ಗರಂ ಆಗಿದ್ದಾರೆ.
ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ದೆಹಲಿಗೆ ತೆರಳಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಅದಕ್ಕೂ ಮುನ್ನ ತರಳಬಾಳು ಮಠದ ಸದ್ಧರ್ಮ ನ್ಯಾಯಪೀಠದಲ್ಲಿ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳನ್ನು ರೈತರು ಭೇಟಿಯಾಗಿದ್ದಾರೆ. ನಮಗೆ, ನಮ್ಮ ಹೋರಾಟಕ್ಕೆ ಬೆಂಬಲ ನೀಡಿ ಎಂದು ಕೇಳಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ಏನು ಘೋಷಣೆ ಮಾಡಿದೆ, ಆ ಹಣವನ್ನ ಬಿಡುಗಡೆ ಮಾಡಿದರೆ ಕೆಲಸವೂ ಚುರುಕುಗೊಳ್ಳಲಿದೆ. ಹಾಗಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಭೇಟಿ ಮಾಡುತ್ತೇವೆ. ಈಗಾಗಲೇ ಸಂಸದ ಗೋವಿಂದ ಕಾರಜೋಳ ಅವರಿಗೂ ಮನವಿಯನ್ನ ಮಾಡಿದ್ದೇವೆ. ಅವರು ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು, ಮಧ್ಯ ಕರ್ನಾಟಕ ಭಾಗದಲ್ಲಿ ಹಲವು ಏತ ನೀರಾವರಿಗಳನ್ನ ಯಶಸ್ವಿಗೊಳಿಸಿದ್ದಾರೆ. ಹೀಗಾಗಿ ಅವರು ರೈತರ ಪಾಲಿನ ಆಶಾ ಕಿರಣವಾಗಿದ್ದಾರೆ. ಹಾಗೆ ಸ್ವಾಮೀಜಿಗಳ ಬೆಂಬಲವೂ ಸಿಗಬೇಕು ಎಂದು ರೈತ ಸಂಘದ ಗೌರವಾಧ್ಯಕ್ಷರಾದ ಹೆಚ್ ಆರ್ ತಿಮ್ಮಯ್ಯ ಅಭಿಪ್ರಾಯಪಟ್ಟಿದ್ದಾರೆ.


