ಬೆಂಗಳೂರು: ವಿಜಯಲಕ್ಷ್ಮೀ ದರ್ಶನ್ ಅವರಿಗೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಕೆಟ್ಟ ಕೆಟ್ಟ ಕಮೆಂಟ್ ಗಳು ಬಂದಿದ್ದವು. ಆ ಸಂಬಂಧ ಪೊಲೀಸ್ ಕಮಿಷನರ್ ಕಚೇರಿಗೆ ದೂರು ನೀಡಿದ್ದ ವಿಜಯಲಕ್ಷ್ಮೀ ಅವರು, ಕಾನೂನು ಹೋರಾಟ ನಡೆಸಿದ್ದರು. ಆದರೆ ದೂರು ಕೊಟ್ಟು ಕೆಲ ದಿನಗಳು ಕಳೆದರು ಸಹ, ಪೊಲೀಸರು ಯಾರನ್ನು ಬಂಧಿಸಿರಲಿಲ್ಲ. ಹೀಗಾಗಿ ಮೊನ್ನೆಯಷ್ಟೇ ಮತ್ತೆ ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಬೇಸರವನ್ನ ಹೊರ ಹಾಕಿದ್ದರು. ನನ್ನ ದೂರನ್ನ ಕಂಪ್ಲೀಟ್ ಆಗಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದಿದ್ದರು. ಈ ಬೆನ್ನಲ್ಲೇ ಇಬ್ಬರು ಅರೆಸ್ಟ್ ಆಗಿದ್ದಾರೆ.
ಬಂಧಿತ ಆರೋಪಿಗಳು, 45 ವರ್ಷದ ಚಂದ್ರಶೇಖರ್ ಹಾಗೂ 31 ವರ್ಷದ ನಿತಿನ್ ಬಂಧಿತ ಆರೋಪಿಗಳು. ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಿನ್ನಲೆಯಲ್ಲಿ ಇಬ್ಬರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ಬಂಧಿತರಲ್ಲಿ ಒಬ್ಬ ಆಟೋ ಚಾಲಕನಾಗಿದ್ದಾರೆ. ಮತ್ತು ಮತ್ತೊಬ್ಬ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾನೆ. ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ಚಂದ್ರಶೇಖರ್ ಬೆಂಗಳೂರಿನ ಚಿಕ್ಕಬಾಣಾವರದ ನಿವಾಸಿಯಾಗಿದ್ದಾನೆ. ನಿತಿನ್ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ದಾವಣಗೆರೆಯ ನಿವಾಸಿಯಾಗಿದ್ದಾನೆ.
ಇಬ್ಬರು ಆರೋಪಿಗಳು ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಅಶ್ಲೀಲ ಕಾಮೆಂಟ್ ಹಾಕಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಅಶ್ಲೀಲ ಮೆಸೇಜ್ ಹಾಗೂ ಪೋಸ್ಟ್ ವಿರುದ್ಧ ದರ್ಶನ್ ಪತ್ನಿ ಇತ್ತೀಚೆಗೆ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಈ ಮೊದಲು ರಮ್ಯಾ ಅವರು ಕೂಡ ತಮ್ಮ ಬಗ್ಗೆ ಕಮೆಂಟ್ ಹಾಕಿದ್ದವರ ವಿರುದ್ಧ ದೂರು ನೀಡಿದ್ದರು.

