ಸುದ್ದಿಒನ್,ಬೆಂಗಳೂರು,ಮೇ.14: ವಿಧಾನಸೌಧವು ಇಂದು ನೂತನ ಶಾಸಕರ ಪದಗ್ರಹಣಕ್ಕೆ ಸಾಕ್ಷಿಯಾಯಿತು. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ್ದ ಉಮೇಶ್ ಮೇಟಿ ಹಾಗೂ ಸಮರ್ಥ ಶಾಮನೂರು ಅವರು ಇಂದು ಅಧಿಕೃತವಾಗಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗಂಭೀರ ಹಾಗೂ ಸಂಪ್ರದಾಯಬದ್ಧ ಸಮಾರಂಭದಲ್ಲಿ, ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ನೂತನ ಶಾಸಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಬಾಗಲಕೋಟೆ ಕ್ಷೇತ್ರದ ನೂತನ ಶಾಸಕ ಉಮೇಶ್ ಮೇಟಿ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ನೂತನ ಶಾಸಕ ಸಮರ್ಥ ಶಾಮನೂರು ಇಬ್ಬರೂ ನಾಯಕರು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸದನದ ಸದಸ್ಯರಾಗಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದರು. ಈ ಸಂದರ್ಭದಲ್ಲಿ ಸಭಾಧ್ಯಕ್ಷರು ನೂತನ ಶಾಸಕರನ್ನು ಅಭಿನಂದಿಸಿ, ಸದನದ ಕಲಾಪಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡು ಜನರ ಧ್ವನಿಯಾಗಿ ಕೆಲಸ ಮಾಡಿ ಎಂದು ಹಾರೈಸಿದರು.




















