
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 06 : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಮಂಡಿಸಿರುವ 2026-27 ನೇ ಸಾಲಿನ ಆಯವ್ಯಯವು ರಾಜ್ಯವನ್ನು ಸಾಲದ ಕೂಪಕ್ಕೆ ದೂಡುವ “ದಿವಾಳಿ ಬಜೆಟ್” ಆಗಿದೆ ಎಂದು ಸಂಸದ ಗೋವಿಂದ ಎಂ. ಕಾರಜೊಳ ಟೀಕಿಸಿದ್ದಾರೆ.
ಯಾವುದೇ ಹೊಸ ಕೈಗಾರಿಕೆಗಳ ಸ್ಥಾಪನೆ ವಿಚಾರವಿಲ್ಲ, ರೈತರಿಗೆ ನೆರವಿನ ಸಹಾಯಹಸ್ತವಿಲ್ಲದ ಇದೊಂದು ಕೇವಲ ಅಂಕಿ ಅಂಶಗಳ ಮಾಯಾಜಾಲದ ಬಜೆಟ್ ಆಗಿದೆ. ರಾಜ್ಯದ ಒಟ್ಟು ಸಾಲ 8.24 ಲಕ್ಷ ಕೋಟಿ ದಾಟುತ್ತಿರುವುದು ಆತಂಕಕಾರಿಯಾಗಿದೆ. ಸಿದ್ದರಾಮಯ್ಯನವರ ಬಜೆಟ್ ರಾಜ್ಯದ ಜನರ ಆಶೋತ್ತರಗಳಿಗೆ ತಣ್ಣೀರು ಎರಚಿದೆ.
ಕರ್ನಾಟಕ ರಾಜ್ಯದಲ್ಲಿ ಸರ್ಕಾರದ ಆರ್ಥಿಕ ಶಿಸ್ತನ್ನು ಕಾಪಾಡಲು ಮತ್ತು ಅನಗತ್ಯ ಸಾಲದ ಹೊರೆ ತಡೆಯಲು ಜಾರಿಗೆ ತಂದಿರುವ “ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮ-2002” ರನ್ನು ಉಲ್ಲಂಘಿಸುವ ಅಂಚಿಗೆ ಸಿದ್ದರಾಮಯ್ಯನವರು ಬಂದು ತಲುಪಿದ್ದಾರೆ.
ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಮೇಲೆ ಸಾಲದ ಮಿತಿ ರಾಜ್ಯದ ಆರ್ಥಿಕ ಹೊಣೆಗಾರಿಕೆ ನಿಯಮಗಳ ಪ್ರಕಾರ ಹಣಕಾಸಿನ ಕೊರತೆಯನ್ನು ರಾಜ್ಯದ ಒಟ್ಟು ಉತ್ಪನ್ನದ ಶೇಕಡ 3 ರಷ್ಟು ಮಿತಿಯಲ್ಲಿ ಕಾಯ್ದುಕೊಳ್ಳಬೇಕು, ಸಿದ್ದರಾಮಯ್ಯನವರ ಬಜೆಟ್ ಶೇಕಡ 2.95 ರಷ್ಟಿದೆ ಎಂದರೆ ಇದೊಂದು ಅಂಕಿ ಅಂಶಗಳ ಮಾಯಜಾಲದ ಬಜೆಟ್ ಅಲ್ಲದೇ ಮತ್ತಿನ್ನೇನು. ರಾಜಸ್ವ ಕೊರತೆಯನ್ನು ಕಡಿಮೆ ಮಾಡಬೇಕಿದ್ದ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಸಾಲದ ಮೇಲೆ ಸಾಲ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

















