ಬೆಂಗಳೂರು: ಇಂದು ಡಿಕೆ ಶಿವಕುಮಾರ್ ಅವರು ಮತ್ತಿಕೆರೆಯ ಜೆಪಿ ಪಾರ್ಕ್ ನಲ್ಲಿ ಒಂದು ರೌಂಡ್ ಹೊಡೆದು, ಜನರ ಜೊತೆಗೆ ಮಾತುಕತೆ, ಸಮಸ್ಯೆಗಳನ್ನ ಆಲಿಸಿದ್ದಾರೆ. ಈ ವೇಳೆ ಮುನಿರತ್ನ ಅವರು ಹೈಡ್ರಾಮ ಕ್ರಿಯೇಟ್ ಮಾಡಿದ್ದು, ಪೊಲೀಸರು ಅವರನ್ನ ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಮುನಿರತ್ನ ಅವರು ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.
ನಾನು ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ಹೋಗಿ ಬಂದೆ. ಈ ಟೋಪಿಯನ್ನ ಕಿತ್ತು ಹೊಡೆಯೋದು ಏನ್ರೀ ಇದೆ. ಹಲ್ಲೆ ಮಾಡೋದು ಏನ್ರಿ ಇದೆ. ಎಂಪಿಗಳಿಗೆ ಆಹ್ವಾನವಿಲ್ಲ, ಎಂಎಲ್ಎಗಳಿಗೆ ಆಹ್ವಾನವಿಲ್ಲ. ಸೌಜನ್ಯಕ್ಕಾದರೂ ಆಹ್ವಾನ ಕೊಡಬೇಕು ಅಲ್ವಾ. ಒಂದೇ ಒಂದು ಆಹ್ವಾನವಿದ್ದರೆ ಇವತ್ತೆ ರಾಜಕೀಯ ಬಿಟ್ಟು ಹೋಗ್ತೀನಿ ನಾನು.
ನಾನು ಸಾರ್ವಜನಿಕರ ನಡುವೆ ದೂರು ನೀಡೋದಕ್ಕೆ ಕೂತಿದ್ದೆ. ನನ್ನನ್ನ ಕರೆದು ಇಷ್ಟು ಅವಮಾನ ಮಾಡುವಂತದ್ದು ಏನಿತ್ತು. ಇವತ್ತು ಆರ್ ಎಸ್ ಎಸ್ ಪ್ರೋಗ್ರಾಂ ಮುಗಿಸಿಕೊಂಡು, ಅದೇ ಡ್ರೆಸ್ ನಲ್ಲಿ ಬಂದ್ರೆ ಕರಿ ಟೋಪಿ ಅಂತ ಕರೀತಾರೆ. ನಾನೊಬ್ಬ ಎಂಎಲ್ಎ ರೀ. ನಿಮ್ಗೆ ಅಧಿಕಾರ ಇದೆ. ದಬ್ಬಾಳಿಕೆ, ದೌರ್ಜನ್ಯ ಮಾಡ್ತೀರಿ. ಕನಕಪುರದಲ್ಲಿ ಮಾಡ್ತಾ ಇದ್ದೀರಾ ಅಂತ ಗೊತ್ತು. ಬೆಂಗಳೂರಲ್ಲೂ ಮಾಡ್ತಾ ಇದ್ದೀರಾ. ಏ ಟೋಪಿ ಬಾರೋ ಇಲ್ಲಿ ಅಂದ್ರೆ ಏನ್ ಅದು. ಇವತ್ತು ಪೊಲೀಸರು ಇಲ್ಲ ಅಂದಿದ್ರೆ ನನ್ನನ್ನ ಮುಗಿಸ್ತಾ ಇದ್ರು. ಚನ್ನಪಟ್ಟಣ, ಕನಕಪುರದಿಂದೆಲ್ಲಾ ಬಂದಿರೋರೆಲ್ಲಾ ಬರೀ ರೌಡಿಗಳೆ. ನೋಡುದ್ರಲ್ಲಾ ನೀವೇನೆ ನನ್ನ ಮೇಲೆ ಹೇಗೆ ಹಲ್ಲೆ ಮಾಡಿದ್ರು ಅಂತ. ಪೊಲೀಸರಿಂದ ನನ್ನ ಜೀವ ಉಳಿದಿದೆ ಎಂದಿದ್ದಾರೆ.





