ಹೊನ್ನಾಳಿ : ಏಕಾಏಕಿ ಆರಂಭವಾದ ಭಾರೀ ಗುಡುಗು–ಸಿಡಿಲಿನ ಆರ್ಭಟ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರ ಪ್ರಾಣ ಕಸಿದ ದಾರುಣ ಘಟನೆ ಹೊನ್ನಾಳಿ ತಾಲೂಕಿನ ಮಲೆಕುಂಬಳೂರು ಗ್ರಾಮದಲ್ಲಿ ನಡೆದಿದೆ.ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ನಾಗರಾಜಪ್ಪ (56) ಮೃತ ದುರ್ದೈವಿ. ಮೇ 17ರ ರಾತ್ರಿ ಮನೆಯ ಮುಂಭಾಗ ನಿಂತಿದ್ದ ವೇಳೆ ಭಾರೀ ಸಿಡಿಲು ಬಡಿದ ಪರಿಣಾಮ ಉಂಟಾದ ತೀವ್ರ ಶಬ್ದಕ್ಕೆ ಅವರು ಬೆಚ್ಚಿಬಿದ್ದಿದ್ದಾರೆ.
ಈ ವೇಳೆ ತಕ್ಷಣವೇ ಹೃದಯಾಘಾತ ಸಂಭವಿಸಿ ನಾಗರಾಜಪ್ಪ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ನಡೆದ ತಕ್ಷಣ ಕುಟುಂಬಸ್ಥರು ಆತಂಕಗೊಂಡು ನೆರವಿಗೆ ಧಾವಿಸಿದರೂ, ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು ಎನ್ನಲಾಗಿದೆ. ಘಟನೆ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದ್ದು, ನಾಗರಾಜಪ್ಪರ ನಿಧನಕ್ಕೆ ಗ್ರಾಮಸ್ಥರು ಹಾಗೂ ಶಿಕ್ಷಣ ವಲಯದವರು ಸಂತಾಪ ಸೂಚಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಮಳೆ, ಗುಡುಗು ಹಾಗೂ ಸಿಡಿಲಿನ ಆರ್ಭಟ ಹೆಚ್ಚಾಗಿದ್ದು, ಹವಾಮಾನ ಇಲಾಖೆಯೂ ಎಚ್ಚರಿಕೆ ನೀಡಿದೆ. ತಜ್ಞರ ಪ್ರಕಾರ, ಭಾರೀ ಸಿಡಿಲಿನ ಶಬ್ದ ಮತ್ತು ಆತಂಕ ಕೆಲವೊಮ್ಮೆ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.ಈ ಕುರಿತು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಮಾಹಿತಿ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.















