ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುತ್ತಿದೆ. ಇದೀಗ ಪಿ.ಎಂ.ಶ್ರೀ ಶಾಲೆಗಳಿಗೆ ಕೂಡ ಸುತ್ತಲಿನ ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಸರ್ಕಾರ ಪಿ.ಎಮ್. ಶ್ರೀ ಯೋಜನೆಯ ಹೆಸರಿನಲ್ಲಿ ರಾಜ್ಯದಾದ್ಯಂತ 317 ಶಾಲೆಗಳನ್ನು ವಿಲೀನ ಮಾಡಿಸಲು ಆದೇಶ ಹೊರಡಿಸಿದೆ. ಪಿಯು ಕಾಲೇಜುಗಳನ್ನು ಕೂಡ ವಿಲೀನಗೊಳಿಸಲಾಗುತ್ತಿದೆ.
ಶಿಕ್ಷಣಕ್ಕೆ 8 ಗ್ಯಾರಂಟಿಗಳನ್ನು ನೀಡಿ ದೇಶದಲ್ಲೇ ಮಾದರಿ ಶಾಲಾ ವ್ಯವಸ್ಥೆ ನಿರ್ಮಿಸುತ್ತೇವೆ ಎಂದು ಸರ್ಕಾರವು ಹೇಳುತ್ತಿದೆ. ಆದರೆ ವಾಸ್ತವದಲ್ಲಿ ಈ ಗ್ಯಾರಂಟಿಗಳು ಮೋಸದಿಂದ ಕೂಡಿವೆ. ಸರ್ಕಾರಿ ಶಾಲೆಗಳನ್ನು ಮುಚ್ಚುವ ಅಂಶವನ್ನು ನಯವಾಗಿ ತಳ್ಳಿ ಹಾಕುತ್ತಾ ಗ್ಯಾರಂಟಿಗಳ ಮುಖವಾಡದಲ್ಲಿ ನಾಡಿನ ಜನತೆಗೆ ರಾಜ್ಯ ಕಾಂಗ್ರೇಸ್ ಸರ್ಕಾರವು ಮೋಸ ಮಾಡುತ್ತಿದೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಅನೇಕ ಹಳ್ಳಿಗಳ ಶಾಲೆಗಳನ್ನು ವಿಲೀನಗೊಳಿಸುವ ಅಧಿಕೃತ ಪಟ್ಟಿ ಈಗಾಗಲೇ ಹೊರಬಿದ್ದಿದ್ದು, ಗ್ರಾಮಸ್ಥರಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಹಳ್ಳಕಟ್ಟೆ ಶಾಲೆಯ 58 ಮಕ್ಕಳನ್ನು, ಎಂವಿ ಹಟ್ಟಿಯ 28 ಮಕ್ಕಳನ್ನು, ಹಿರೇ ಸಾದರಹಳ್ಳಿಯ 34 ಮಕ್ಕಳನ್ನು ಹೊಳಲ್ಕೆರೆಯ 40 ಮಕ್ಕಳನ್ನು ಹೀಗೆ 15 ಹಳ್ಳಿಗಳಲ್ಲಿ ಓದುತ್ತಿರುವ 305 ಮಕ್ಕಳನ್ನು ಡಿ.ಎಂ ಕುರ್ಕೆ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಸೇರಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
ಪೋಷಕರು, ಗ್ರಾಮಸ್ಥರು, ಎಸ್.ಡಿ.ಎಂ.ಸಿ ಸದಸ್ಯರು ಇದನ್ನು ವಿರೋಧಿಸಿ ಬಿ ಇ ಓ ಹಾಗೂ ಸರ್ಕಾರಕ್ಕೆ ನಮ್ಮ ಮಕ್ಕಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಸೇರಿಸುವುದಿಲ್ಲ ನಮ್ಮ ಊರಿನಲ್ಲೇ ನಮ್ಮೂರ ಶಾಲೆ ಉಳಿಯಲಿ ಎಂದು ಪತ್ರ ಬರೆದಿದ್ದಾರೆ.
ರಾಜ್ಯ ಸರ್ಕಾರವು ತನ್ನ ಹಠಮಾರಿ ಧೋರಣೆಯನ್ನು ಕೈಬಿಡಬೇಕೆಂದು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯು ಆಗ್ರಹಿಸುತ್ತದೆ. ಸರ್ಕಾರದ ಈ ಬೂಟಾಟಿಕೆಯನ್ನು ಅರಿತು ‘ನಮ್ಮೂರ ಶಾಲೆ’ ಉಳಿಸುವ ಪ್ರತಿರೋಧ ಚಳುವಳಿಯನ್ನು ಮತ್ತಷ್ಟು ಬಲಪಡಿಸಬೇಕೆಂದು ನಾಡಿನ ಜನತೆಗೆ ಕರೆ ನೀಡುತ್ತದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









