ಸುದ್ದಿಒನ್, ಹಿರಿಯೂರು, ನವೆಂಬರ್. 17 : ಇಂದಿನ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಪೋಷಕರು ಸಂಸ್ಕಾರ, ಸಂಸ್ಕೃತಿ ಕಲಿಕೆಗೆ ಪ್ರಾಧಾನ್ಯತೆ ನೀಡಬೇಕು ಎಂದು ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ಬಸವ ರಮಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಈಶ್ವರಗೆರೆ ಮೇಗಳಗೊಲ್ಲರಹಟ್ಟಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ “ಪರಮಪೂಜ್ಯರ ನಡೆ ಭಕ್ತರ ಮನೆ ಮನೆಗಳ ಕಡೆ” ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಣದಿಂದ ಮಾತ್ರ ಪರಸ್ಪರ ಸಹಕಾರ ಹಾಗೂ ಮನೋವೈಶಾಲ್ಯತೆಯನ್ನು ಬೆಳೆಸಿ ಕೊಳ್ಳಬಹುದು. ವಿದ್ಯೆಯಿಂದ ಮಾತ್ರ ಮನುಷ್ಯ ಸಂಸ್ಕಾರವಂತನಾಗಲು ಸಾಧ್ಯ. ಆ ನಿಟ್ಟಿನಲ್ಲಿ ಸೇವಾ ಮನೋಭಾವನೆ, ಪರಸ್ಪರ ಕಷ್ಟಗಳಿಗೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಂಡಾಗ ಮನದಲ್ಲಿ ಮಾಲಿನ್ಯ ತೊಲಗಿ ಮನುಷ್ಯ ಸುಖಕರ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಹಿರಿಯರು ಕಲಿಸಿದ ಸಂಸ್ಕಾರದಂತೆ ಹೆಂಡತಿಯು ಬೆಳಿಗ್ಗೆ ಎದ್ದತಕ್ಷಣ ಗಂಡಂದಿರ ಕಾಲಿಗೆ ಬೀಳಬೇಕು. ಇದರಿಂದ ಗಂಡ ಹೆಂಡತಿ ಮಧ್ಯೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಗಂಡಂದಿರನ್ನು ಪರಿವರ್ತನೆ ಮಾಡುವ ಜೊತೆಯಲ್ಲಿ ಮಧ್ಯಪಾನ ಹಾಗೂ ಧೂಮಪಾನ ಮಾಡುವುದನ್ನು ಬಿಡಿಸುವ ಶಕ್ತಿ ಮಹಿಳೆಯರ ಕೈಯಲ್ಲಿದೆ. ಎಲ್ಲರೂ ಒಂದುಗೂಡಿ ಬಾಳಬೇಕು. ಒಗ್ಗಟ್ಟಿನ ಮೂಲಕ ತಮ್ಮ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಇಂದಿನ ಮಕ್ಕಳು 25 ವರ್ಷ ಕಷ್ಟಪಟ್ಟು ಉತ್ತಮ ಶಿಕ್ಷಣ ಗಳಿಸಿ ಉದ್ಯೋಗ ಪಡೆದುಕೊಂಡರೆ ಮುಂದಿನ 75 ವರ್ಷ ಸುಖವಾಗಿ ಜೀವಿಸಬಹುದು. ದುಡಿಯುವ ವಯಸ್ಸಿನಲ್ಲಿ ವಿನಃ ಕಾರಣ ಕಾಲ ಕಳೆಯಬಾರದು. ಹಟ್ಟಿಗಳಲ್ಲಿರುವ ಮೌಡ್ಯ ಆಚರಣೆಗಳನ್ನು ಬದಿಗೊತ್ತಿ ಆಧುನಿಕತೆಯ ಜೀವನಕ್ಕೆ ಹೊಂದಿಕೊಳ್ಳಬೇಕು. ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕ ಜಾಗೃತರಾಗಬೇಕು ಎಂದು ಕರೆ ನೀಡಿದರು.
ಮದ್ಯಪಾನ ಮಾಡುವವರಿಗೆ ಇನ್ಮುಂದೆ ಯಾವುದೇ ಕಾರಣಕ್ಕೂ ಮಧ್ಯಪಾನ ಸೇವಿಸುವುದಿಲ್ಲವೆಂದು ಪ್ರತಿಜ್ಞೆ ಮಾಡಿಸಿದರು. ಇದಕ್ಕೂ ಮುನ್ನ ಆರತಿ, ಕುಂಭಮೇಳ, ಉರಿಮೆ ಬಡಿತ, ಹೂ ಸುರಿದು ಪದೇ ಹೇಳಿಕೊಂಡು ಮೆರವಣಿಗೆ ಮೂಲಕ ಶ್ರೀಗಳನ್ನು ಗ್ರಾಮಸ್ಥರು ಊರೋಳಗೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಶ್ರೀಗಳಿಗೆ ಪಾದ ಪೂಜೆ ಸಲ್ಲಿಸಿ, ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮುಖಂಡ ಗೋಪಿ ಯಾದವ್, ಗ್ರಾಪಂ ಸದಸ್ಯ ಕೆ. ನಿಜಲಿಂಗಪ್ಪ, ತಮ್ಮಣ್ಣ, ಶಿವಣ್ಣ, ಪೂಜಾರಿ ಕಾಟಪ್ಪ, ನಾಗರಾಜ್, ಮಾಜಿ ಗ್ರಾಪಂ ಸದಸ್ಯ ಪ್ರಕಾಶ್, ದ್ವಾರಕೇಶ್, ನಾಗರಾಜಪ್ಪ, ವೀರೇಶ್, ಮಹಿಳೆಯರು. ಮಕ್ಕಳು ಸೇರಿದಂತೆ ಮತ್ತಿತರರು ಇದ್ದರು.


