ಸ್ವಾಮಿ ವಿವೇಕಾನಂದರವರ ಮೌಲ್ಯಗಳು ಯುವ ಪೀಳಿಗೆಗೆ ದಾರಿ ದೀಪ : ಪ್ರೊ.ಸಿ.ಬಸವರಾಜು

3 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, : ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಂಡಾಗ ಮಾನವೀಯ ಮೌಲ್ಯಗಳನ್ನು ಗೌರವಿಸಿದಂತಾಗುತ್ತದೆಂದು ಸ್ವಾಮಿ ವಿವೇಕಾನಂದ ವಿಶ್ವಕ್ಕೆ ಸಂದೇಶ ಸಾರಿದ್ದಾರೆಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ.ಸಿ.ಬಸವರಾಜು ಹೇಳಿದರು.

ಯುವಜನ ಸೇವಾ ಮತ್ತು ಕ್ರೀಡಾ ಸಬಲೀಕರಣ, ಎನ್.ಎಸ್.ಎಸ್. ವಿಭಾಗ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಹುಬ್ಬಳ್ಳಿ ಇವುಗಳ ಸಹಯೋಗದೊಂದಿಗೆ ಸರಸ್ವತಿ ಕಾನೂನು ಕಾಲೇಜಿನಲ್ಲಿ ವರ್ತಮಾನದ ಸನ್ನಿವೇಶದಲ್ಲಿ ಯುವಕರ ಬಗೆಗಿನ ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರಸ್ತುತತೆ ಕುರಿತ ಎರಡು ದಿನಗಳ ಕಾಲ ನಡೆಯಲಿರುವ (ಶುಕ್ರವಾರ ಮತ್ತು ಶನಿವಾರ) ರಾಷ್ಟ್ರೀಯ ಸಮ್ಮೇಳನವನ್ನು ಶುಕ್ರವಾರ ಉದ್ಗಾಟಿಸಿ  ಮಾತನಾಡಿದರು.

ಅಮೇರಿಕಾದ ಚಿಕಾಗೋದಲ್ಲಿ 1893 ರಲ್ಲಿ ನಡೆದ ಧಾರ್ಮಿಕ ಸಂಸತ್ ಉದ್ದೇಶಿಸಿ ಮಾತನಾಡಿದ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮ ಕೇವಲ ಭಾರತಕ್ಕಷ್ಟೆ ಅಲ್ಲ. ಇಡಿ ವಿಶ್ವಕ್ಕೆ ಬೇಕಾಗಿದೆಯೆಂದು ಭಾಷಣ ಮಾಡಿದ್ದರು. ಸಾಮರಸ್ಯ, ಸಹಭಾಳ್ವೆ, ಐಕ್ಯತೆಯಿಂದ ಎಲ್ಲಾ ಜಾತಿ ಧರ್ಮದವರು ಬಾಳಬೇಕಾಗಿರುವುದರಿಂದ ಯಾವುದೇ ಒಂದು ಧರ್ಮವನ್ನು ಅವಮಾನಿಸಬಾರದು. ಎಲ್ಲಾ ಧರ್ಮಗಳಲ್ಲಿರುವ ಒಳ್ಳೆ ಅಂಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪರಸ್ಪರರು ಅರ್ಥಮಾಡಿಕೊಂಡು ಸಹನೆಯಿಂದ ಬದುಕಿದಾಗ ಧರ್ಮ ಸಂಘರ್ಷಕ್ಕೆ ದಾರಿಯಿರುವುದಿಲ್ಲ. ಸೈದ್ದಾಂತಿಕ, ಧಾರ್ಮಿಕ ತಳಹದಿಯ ಮೇಲೆ ಸಮಾಜದಲ್ಲಿ ಶಾಂತಿ ಉಂಟು ಮಾಡಬಹುದೆನ್ನುವುದು ಸ್ವಾಮಿ ವಿವೇಕಾನಂದರವರ ಚಿಂತನೆಯಾಗಿತ್ತು ಎಂದರು.

ಇಂದಿನ ಯುವ ಜನಾಂಗಕ್ಕೆ ಸ್ವಾಮಿ ವಿವೇಕಾನಂದರವರ ಚಿಂತನೆ, ಆದರ್ಶ ಮುಖ್ಯ. ವಿಶ್ವದಲ್ಲಿಯೇ ಅಸಮಾನ್ಯ ಪುರುಷನಾಗಿದ್ದ ವಿವೇಕಾನಂದರವರ ಕೊಡುಗೆ ಅಪಾರ.
ವಿಜ್ಞಾನ, ತಂತ್ರಜ್ಞಾನ, ಸಂಸ್ಕøತಿ, ಧರ್ಮ, ಮಾನವೀಯತೆ ಹೀಗೆ ಎಲ್ಲಾ ರಂಗಗಳಲ್ಲಿಯೂ ಸ್ವಾಮಿ ವಿವೇಕಾನಂದರವರ ಚಿಂತನೆಗಳು ಅಡಗಿದೆ. ಶಾಂತಿ, ಸಹೋದರತ್ವವನ್ನು ಹೇಗೆ ಹುಟ್ಟು ಹಾಕಬೇಕೆಂಬ ಕುರಿತು ಸದಾ ಆಲೋಚಿಸುತ್ತಿದ್ದ ಸ್ವಾಮಿ ವಿವೇಕಾನಂದರವರ ಮೌಲ್ಯಗಳು ಯುವ ಪೀಳಿಗೆಗೆ ದಾರಿ ದೀಪವಾಗಬೇಕು. ಧರ್ಮ ಎನ್ನುವುದು ಪುಸ್ತಕ, ಬರವಣಿಗೆಯಲ್ಲಿಲ್ಲ. ನಿಮ್ಮ ನಿಮ್ಮ ಅಂತರಾತ್ಮದಲ್ಲಿದೆ. ಸ್ವತಃ ಯೋಚನೆ, ವೈಯಕ್ತಿಕ ಶ್ರಮದಿಂದ ಜೀವನದಲ್ಲಿ ಸಾಧನೆ ಸಾಧ್ಯ ಎಂದು ತಿಳಿಸಿದರು.

ಮೌಲ್ಯ ವೃದ್ದಿಸಿಕೊಳ್ಳಲು ಅಂತರಂಗದ ಶಕ್ತಿಯನ್ನು ಬಳಸಿ. ನಿಸ್ವಾರ್ಥ ಸೇವೆಯಿಂದ ವ್ಯಕ್ತಿತ್ವ ಬೆಳೆಸಿಕೊಳ್ಳಬಹುದೆಂದು ಸ್ವಾಮಿ ವಿವೇಕಾನಂದರು ಕರೆ ನೀಡಿದ್ದಾರೆ. ಪ್ರತಿಯೊಂದು ಧರ್ಮದಲ್ಲೂ ಧಾರ್ಮಿಕ ಸತ್ವವಿದೆ. ಯಾವ ಕೆಲಸವನ್ನಾಗಲಿ, ಏಕಾಗ್ರತೆ, ಬದ್ದತೆಯಿಂದ ನಿಭಾಯಿಸಿದಾಗ ಗುರಿ ಮುಟ್ಟಲು ಸಾಧ್ಯ. ಸಾಮಾಜಿಕ ಪಿಡುಗು ಅಸಮತೋಲನ ನಿವಾರಣೆಗೆ ಶಿಕ್ಷಣವೊಂದೆ ಅಸ್ತ್ರ ಎನ್ನುವ ಜಾಗೃತಿಯನ್ನು ಯುವ ಪೀಳಿಗೆಯಲ್ಲಿ ಮೂಡಿಸಿರುವ ಸ್ವಾಮಿ ವಿವೇಕಾನಂದರು ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಮುಖ್ಯ. ನಕಾರಾತ್ಮಕ ಆಲೋಚನೆಯಿಂದ ಹೊರ ಬರಲು ಧ್ಯಾನ ಮಾಡಿ. ಸಮಾಜ ಪರಿವರ್ತನೆಗೆ ವಿವೇಕಾನಂದರವರಲ್ಲಿದ್ದ ಚಿಂತನೆಯನ್ನು ನೀವುಗಳು ಮೈಗೂಡಿಸಿಕೊಂಡರೆ ನಿಜವಾಗಿಯೂ ವಿವೇಕಾನಂದ ಆಶಯಗಳನ್ನು ಗೌರವಿಸಿದಂತಾಗುತ್ತದೆಂದು ಕಾನೂನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸರಸ್ವತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಡಿ.ಕೆ.ಶೀಲಾ ಮಾತನಾಡಿ ಸ್ವಾಮಿ ವಿವೇಕಾನಂದರು ಯುವ ಜನಾಂಗದ ಮೇಲೆ ಅಪಾರವಾದ ಭರವಸೆಯಿಟ್ಟುಕೊಂಡಿದ್ದರು. ಭಾರತದ ಭವಿಷ್ಯ ನಿಂತಿರುವುದೇ ಯುವ ಪೀಳಿಗೆ ಮೇಲೆ ಹಾಗಾಗಿ ವಿವೇಕಾನಂದರು ಯುವಕ-ಯುವತಿಯರ ಮೇಲೆ ಬೆಳಕು ಚೆಲ್ಲುತ್ತಿದ್ದರು. ಯಾವುದೇ ವೃತ್ತಿಯಾಗಲಿ ಶಿಸ್ತು, ಬದ್ದತೆ, ಏಕಾಗ್ರತೆಯಿಂದ ಮಾಡಬೇಕೆನ್ನುವುದು ಅವರ ಚಿಂತನೆಯಾಗಿತ್ತೆಂದರು.

ರಾಷ್ಟ್ರೀಯ ಸಮ್ಮೇಳದ ಅಧ್ಯಕ್ಷತೆ ವಹಿಸಿದ್ದ ಸರಸ್ವತಿ ಕಾನೂನು ಕಾಲೇಜು ಅಧ್ಯಕ್ಷರಾದ ಹೆಚ್.ಹನುಮಂತಪ್ಪ ಮಾತನಾಡಿ ವೀರ ಸನ್ಯಾಸಿಯಾಗಿದ್ದ ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋ ನಗರದಲ್ಲಿ ಭಾಷಣ ಮಾಡಿದ್ದಾರೆ. ಯುವಕರೆ ಏಳಿ, ಎದ್ದೇಳಿ, ಗುರಿ ಮುಟ್ಟುವತನಕ ನಿಲ್ಲದಿರಿ ಎನ್ನುವ ಸಂದೇಶ ಅವರದಾಗಿತ್ತು. ಹಾಗಾಗಿ ವಿವೇಕಾನಂದರವರ ಆದರ್ಶಗಳನ್ನು ಇಂದಿನ ಯುವ ಜನಾಂಗ ಮೈಗೂಡಿಸಿಕೊಳ್ಳಿ ಎಂದರು. ಸರಸ್ವತಿ ಕಾನೂನು ಕಾಲೇಜು ಪ್ರಾಚಾರ್ಯರಾದ ಡಾ.ಎಂ.ಎಸ್.ಸುಧಾದೇವಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸರಸ್ವತಿ ಕಾನೂನು ಕಾಲೇಜು ಉಪಾಧ್ಯಕ್ಷರು ಹಾಗೂ ನ್ಯಾಯವಾದಿ ಫಾತ್ಯರಾಜನ್, ಎನ್.ಎಸ್.ಎಸ್.ಕೋ-ಆರ್ಡಿನೇಟರ್ ಐ.ಬಿ.ಬೀರಾದರ್, ಆರ್ಥಿಕ ಚಿಂತಕ
ಡಾ.ಎನ್.ಮಲ್ಲಿಕಾರ್ಜುನಪ್ಪ ವೇದಿಕೆಯಲ್ಲಿದ್ದರು.
ಸಹಾಯಕ ಪ್ರಾಧ್ಯಾಪಕ ಡಾ.ಡಿ.ಬಿ.ರವಿಕುಮಾರ್ ರಾಷ್ಟ್ರೀಯ ಪ್ರತಿಜ್ಞೆ ಬೋಧಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಎನ್.ಡಿ.ಗೌಡ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪಿ.ಮುರುಗೇಶ್ ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *