ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ಡಿಸೆಂಬರ್. 28 : ಜಿಲ್ಲೆಯಾದ್ಯಂತ ಪ್ರತಿ ತಾಲ್ಲೂಕಿನಲ್ಲಿ ಅಡ್ಡಾಡಿ ಕೆಲಸ ಮಾಡುವ ಮೂಲಕ ಸಂಘಟಿಸಿ ದಸ್ತಾವೇಜು ಬರಹಗಾರರ ಸಂಘವನ್ನು ಬಲಪಡಿಸುವಂತೆ ಉಪ ನೊಂದಣಾಧಿಕಾರಿ ತಿಪ್ಪೇರುದ್ರಪ್ಪ ಪತ್ರ ಬರಹಗಾರರಿಗೆ ಕರೆ ನೀಡಿದರು.
ಐಶ್ವರ್ಯ ಫೋರ್ಟ್ನಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಜಿಲ್ಲಾ ದಸ್ತಾವೇಜು ಬರಹಗಾರರ ಸಂಘದ ಸಮಾವೇಶ ಹಾಗೂ 2026 ನೇ ಸಾಲಿನ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.
ಅಲ್ಪ ಅವಧಿಯಲ್ಲಿಯೇ ಸಮಾವೇಶ ನಡೆಸಿ ಕ್ಯಾಲೆಂಡರ್ ಬಿಡುಗಡೆಗೊಳಿಸಿರುವುದು ನೋಡಿದರೆ ದಸ್ತಾವೇಜು ಬರಹಗಾರರ ಸಂಘದಲ್ಲಿ ಒಗ್ಗಟ್ಟಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದಸ್ತಾವೇಜು ಬರಹಗಾರರ ಸಂಘದ ಅಧ್ಯಕ್ಷ ಎಸ್.ರುದ್ರಸ್ವಾಮಿ ಮಾತನಾಡಿ ಉಪ ನೊಂದಣಾಧಿಕಾರಿ ತಿಪ್ಪೇರುದ್ರಪ್ಪನವರ ಸಲಹೆ ಮಾರ್ಗದರ್ಶನದಂತೆ ಸಂಘವನ್ನು ಬೆಳೆಸಿ ಮುಂದಿನ ದಿನಗಳಲ್ಲಿ ಬಲಪಡಿಸೋಣ. ಅಲ್ಪ ಅವಧಿಯಲ್ಲಿಯೇ ಕ್ಯಾಲೆಂಡರ್ ಸಿದ್ದಪಡಿಸಿ ದಸ್ತಾವೇಜು ಬರಹಗಾರರ ಸಮಾವೇಶ ನಡೆಸಲು ನನ್ನೊಬ್ಬನಿಂದ ಸಾಧ್ಯವಾಗುತ್ತಿರಲಿಲ್ಲ. ಜಿಲ್ಲೆಯ ಎಲ್ಲಾ ಬರಹಗಾರರು ಕೈಜೋಡಿಸಿದ್ದಾರೆಂದು ಸ್ಮರಿಸಿದರು.
ದೇವರಾಜ್ ಮಾತನಾಡುತ್ತ ಚಿತ್ರದುರ್ಗದಲ್ಲಿ ಬರಹಗಾರರ ದಸ್ತಾವೇಜು ಸಂಘ ಹುಟ್ಟುಕೊಂಡು ಕೇವಲ ಮೂರು ವರ್ಷವಾಗಿದೆ. ನಮ್ಮಲ್ಲಿ ಸಂಘಟನೆ ಒಗ್ಗಟ್ಟಿಲ್ಲದ ಕಾರಣಕ್ಕೆ ಪ್ರತಿಯೊಬ್ಬರು ಪತ್ರ ಬರಹಗಾರರಾಗಿದ್ದಾರೆ. ಕಟ್ ಅಂಡ್ ಪೇಸ್ಟ್ ಆಗುತ್ತಿರುವುದನ್ನು ಮೊದಲು ನಿಯಂತ್ರಿಸಬೇಕೆಂದು ಉಪ ನೊಂದಣಾಧಿಕಾರಿಯವರಲ್ಲಿ ಮನವಿ ಮಾಡಿದರು.
ಹಿರಿಯೂರಿನ ಸುಧಾಕರ್ ಮಾತನಾಡಿ ಪತ್ರ ಬರಹ ಬ್ರಿಟೀಷರ ಕಾಲದ್ದು, ಉಪ ನೊಂದಣಾಧಿಕಾರಿ ಕಚೇರಿಗೆ ಪತ್ರ ಬರಹಗಾರರು ರಾಯಬಾರಿಗಳಿದ್ದಂತೆ. ಪತ್ರ ಬರವಣಿಗೆಯಿಂದ ಅನುಭವವಿದ್ದರೆ ಎಲ್ಲಾ ಕಡೆ ಗೌರವ ಸಿಗುತ್ತದೆ. ಎಲ್ಲರೊಂದಿಗೂ ಪತ್ರ ಬರಹಗಾರರು ಹೊಂದಿಕೊಳ್ಳಬೇಕು. ಪತ್ರ ಬರಹಗಾರರೆಂದರೆ ಸೇವೆಯಿದ್ದಂತೆ. ದಂಧೆಯಲ್ಲ. ಯಾರಿಗೂ ಮೋಸವಾಗಬಾರದೆಂದು ಹೇಳಿದರು.
ಜಿಲ್ಲಾ ದಸ್ತಾವೇಜು ಬರಹಗಾರರ ಸಂಘದ ಉಪಾಧ್ಯಕ್ಷರುಗಳಾದ ಎಸ್.ಬಿ.ಸೋಮಶೇಖರಪ್ಪ, ವಿ.ಎಸ್.ಮಲ್ಲಿಕಾರ್ಜುನಸ್ವಾಮಿ, ಕಾರ್ಯದರ್ಶಿ ಸಿ.ಕೆಂಚಪ್ಪ, ಖಜಾಂಚಿ ಎಸ್.ಎಂ.ಬಸವರಾಜ್ ಸೇರಿದಂತೆ ಪದಾಧಿಕಾರಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಮಂಜುನಾಥಗುಪ್ತ ಕಾರ್ಯಕ್ರಮ ನಿರೂಪಿಸಿದರು.

















