ಸುದ್ದಿಒನ್,ಬೆಂಗಳೂರು,ಮೇ.12: ರಾಜ್ಯದಲ್ಲಿರುವ ಸರ್ಕಾರಿ ಶಾಲೆ ಹಾಗೂ ಕಾಲೇಜುಗಳ ಭೂಮಿಯನ್ನು ಅಕ್ರಮ ಒತ್ತುವರಿಯಿಂದ ಮುಕ್ತಗೊಳಿಸಲು ಮತ್ತು ಆಸ್ತಿ ಹಕ್ಕುಗಳನ್ನು ಸುರಕ್ಷಿತವಾಗಿರಿಸಲು ಕಂದಾಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಕನಿಷ್ಠ 12 ವರ್ಷಗಳಿಂದ ನಿರಂತರವಾಗಿ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳು ಬಳಸುತ್ತಿರುವ ಜಾಗವನ್ನು ಅಧಿಕೃತವಾಗಿ ರಾಜ್ಯ ಸರ್ಕಾರದ ಸ್ವತ್ತು ಎಂದು ಘೋಷಿಸಿ, ಪಹಣಿ (RTC) ಗಳಲ್ಲಿ ದಾಖಲಿಸುವಂತೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
‘ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಭೂಮಿಗಳ ಅಧಿನಿಯಮ 2026’ ಜಾರಿ

ಹೊಸದಾಗಿ ಜಾರಿಗೆ ತರಲಾಗಿರುವ ‘ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಭೂಮಿಗಳ ಅಧಿನಿಯಮ 2026’ ರ ಅನ್ವಯ, ಕನಿಷ್ಠ 12 ವರ್ಷಗಳಿಂದ ಸರ್ಕಾರಿ ಶಾಲೆ ಅಥವಾ ಕಾಲೇಜುಗಳ ವಶದಲ್ಲಿರುವ ಮತ್ತು ಅವುಗಳು ಬಳಸುತ್ತಿರುವ ಭೂಮಿಯು ಇನ್ಮುಂದೆ ಯಾವುದೇ ರೀತಿಯ ಕಾನೂನು ದಾವೆ, ಹಕ್ಕು ಹಾಗೂ ಬಾಧ್ಯತೆಗಳಿಂದ ಮುಕ್ತವಾಗಲಿದೆ. ಈ ಜಮೀನುಗಳು ಸಂಪೂರ್ಣವಾಗಿ ರಾಜ್ಯ ಸರ್ಕಾರದ ಪರವಾಗಿ ನಿಹಿತವಾಗಿರಲಿವೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಸರ್ಕಾರಿ ಶಾಲೆಗಳ ಆಸ್ತಿಯನ್ನು ಉಳಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆಯ ಮುಖ್ಯಸ್ಥರು ಮತ್ತು ತಹಶೀಲ್ದಾರ್ಗಳ ಜಂಟಿ ಸಹಭಾಗಿತ್ವದಲ್ಲಿ ಸಂಬಂಧಪಟ್ಟ ಪಹಣಿ (RTC) ಗಳಲ್ಲಿ ಸರ್ಕಾರಿ ಶಾಲೆಯ ಹೆಸರನ್ನು ಅಧಿಕೃತವಾಗಿ ದಾಖಲಿಸಬೇಕು.ಈ ಪ್ರಕ್ರಿಯೆಯನ್ನು ವಿಳಂಬ ಮಾಡದೆ ತುರ್ತಾಗಿ ಪೂರ್ಣಗೊಳಿಸುವಂತೆ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಲಾಗಿದೆ.
ಒಂದು ವೇಳೆ ಈ ಜಮೀನುಗಳಲ್ಲಿ ಯಾವುದೇ ರೀತಿಯ ಅಕ್ರಮ ಒತ್ತುವರಿ ಅಥವಾ ಅನಧಿಕೃತ ಬಳಕೆ ಕಂಡುಬಂದಲ್ಲಿ, ಜಿಲ್ಲಾಡಳಿತದ ಮೂಲಕ ನಿಯಮಾನುಸಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕಂದಾಯ ಆಯುಕ್ತರಾದ ಮುಲ್ಲೈ ಮುಹಿಲನ್ ಎಂ ಪೂರಾನಂ ಅವರು ಆದೇಶಿಸಿದ್ದಾರೆ. ಅಷ್ಟೇ ಅಲ್ಲದೆ, ಒತ್ತುವರಿ ತೆರವು ಹಾಗೂ ಪಹಣಿ ದಾಖಲಾತಿ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ತುರ್ತಾಗಿ ವರದಿಯನ್ನು ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.














