ಒಡಿಶಾದ ಪುರಿ ಜಗನ್ನಾಥ ಯಾತ್ರೆ ಪ್ರತಿ ವರ್ಷವೂ ಅದ್ದೂರಿಯಾಗಿ ನಡೆಯುತ್ತದೆ. ಈ ಯಾತ್ರೆಯಲ್ಲಿ ಭಾಗಿಯಾಗಲು ಲಕ್ಷಾಂತರ ಮಂದಿ ಪ್ಲ್ಯಾನ್ ಮಾಡಿಕೊಂಡು ಹೋಗುತ್ತಾರೆ. ನಿನ್ನೆಯಿಂದ ಯಾತ್ರೆ ಆರಂಭವಾಗಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಕಾಲ್ತುಳಿತವೂ ಉಂಟಾಗಿ, 600ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಹಾಗೇ ಹಲವರು ಈ ಘಟನೆಯಿಂದ ಗಂಭೀರ ಸ್ಥಿತಿಗೆ ತಲುಪಿದ್ದಾರೆ. ಮೊದಲ ದಿನದ ರಥಯಾತ್ರೆಯನ್ನು ಕಣ್ತುಂಬಿಕೊಳ್ಳುವುದಕ್ಕೆ ದೇಶ-ವಿದೇಶದಿಂದ ಜನಸಾಗರವೇ ಹರಿದು ಬಂದಿತ್ತು. ಈಗ ಹಲವರು ಆಸ್ಪತ್ರೆಯಲ್ಲಿದ್ದಾರೆ.
ತಾಳಧ್ವಜ ರಥದ ಹಗ್ಗವನ್ನ ಪವಿತ್ರ ಹಗ್ಗವೆಂದೇ ಭಾವಿಸುವ ಭಕ್ತರು ಅದನ್ನ ಎಳೆಯುವುದಕ್ಕೇನೆ ಬಂದಿರುತ್ತಾರೆ. ಹೀಗೆ ತಾಳಧ್ವಜದ ರಥದ ಹಗ್ಗವನ್ನು ಎಳೆಯುವಾಗ ಜನದಟ್ಟಣೆ ಉಂಟಾಗಿದೆ. ಭಕ್ತರು ಏಕಾಏಕಿ ಬಂದಿದ್ದರಿಂದ ಕಾಲ್ತುಳಿತ ಉಂಟಾಗಿದೆ. ಗಜಪತಿ ದೊರೆಯ ಅರಮನೆ ಶ್ರೀ ನಹರ್ ಬಳಿ ಕಾಲ್ತುಳಿತ ಸಂಭವಿಸಿದೆ. ಘಟನೆ ನಡೆದ ಬಳಿಕ ಹಲವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅತ್ತ ಗುಜರಾತ್ ನಲ್ಲಿ ನಡೆಯುತ್ತಿದ್ದ ಪುರಿ ಜಗನ್ನಾಥ ಯಾತ್ರೆಯಲ್ಲೂ ಅವಗಢ ಸಂಭವಿಸಿದೆ. ಆನೆಗಳು ಚೆಲ್ಲಾಪಿಲ್ಲಿಯಾಗಿ ಓಡಿದ್ದು, ಜನರಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಸದ್ಯ ಯಾವುದೇ ಪ್ರಾಣಹಾನಿಯಾದಂತ ಘಟನೆಗಳ ವರದಿಯಾಗಿಲ್ಲ. ಮಾವುತರು ತಮ್ಮ ಆನೆಗಳನ್ನ ಹಿಡಿದು, ಆತಂಕವನ್ನು ದೂರ ಮಾಡಿದ್ದಾರೆ. ಇನ್ನು ಒಡಿಶಾದ ಪುರಿ ಜಗನ್ನಾಥ ಯಾತ್ರೆ ಒಟ್ಟು 9 ದಿನಗಳ ಕಾಲ ನಡೆಯಲಿದೆ. ಈ ಯಾತ್ರೆಯಲ್ಲಿ ಭಾಗಿಯಾಗಬೇಕೆಂಬ ಬಯಕೆಯಿಂದ ಲಕ್ಷಾಂತರ ಭಕ್ತರು ದೂರದೂರುಗಳಿಂದ ಬರ್ತಾರೆ. ಅಷ್ಟೇ ಅಲ್ಲ ದೇಶ – ವಿದೇಶಗಳಿಂದಾನೂ ಪುರಿಗೆ ಬಂದು ಜಗನ್ನಾಥನ ದರ್ಶನ ಪಡೆಯುತ್ತಾರೆ.


