ಬೆಂಗಳೂರು: ರಾಜ್ಯದ ಬಜೆಟ್ ಅಂದ ಮೇಲೆ ಶಿಕ್ಷಣ ಕ್ಷೇತ್ರ, ಕೃಷಿ ಹೀಗೆ ಅನೇಕರು ನಿರೀಕ್ಷೆಯನ್ನಿಟ್ಟುಕೊಂಡು ಬಜೆಟ್ ನತ್ತ ಚಿತ್ತ ಹರಿಸಿರುತ್ತಾರೆ. ಈಗಾಗಲೇ ಗ್ಯಾರಂಟಿಗಳನ್ನ ನೀಡುತ್ತಿರುವ ಕಾಂಗ್ರೆಸ್ ಸರ್ಕಾರ ನಾಳೆಯ ಬಜೆಟ್ ನಲ್ಲಿ ಏನೆಲ್ಲಾ ಕೊಡಬಹುದು ಎಂಬ ಕುತೂಹಲವಿದೆ. ಬಂಪರ್ ಕೊಡುಗೆಗಳು ಸಿಗುವ ನಿರೀಕ್ಷೆಯು ಇದೆ.
ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡಮಟ್ಟದ ನಿರೀಕ್ಷೆ ಇದೆ. ಆರ್ಟಿಇ ಕಾಯ್ದೆಯನ್ನು ಬಲವರ್ಧನೆ ಮಾಡಬೇಕೆಂಬುದು ಪೋಷಕರ ದೊಡ್ಡ ನಿರೀಕ್ಷೆಯಾಗಿದೆ. 60 ಸಾವಿರ ಹುದ್ದೆಗಳ ಭರ್ತಿಗೆ ಬಜೆಟ್ ನಲ್ಲಿ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ. ಹಳೆಯ ಪಿಂಚಣಿ ಸೌಭ್ಯವನ್ನೇ ಮರು ಜಾರಿಗೊಳಿಸುವಂತೆ ಒಕ್ಕೊರಲ ಆಗ್ರಹವಿದೆ. ಗೌರವಧನ ಹೆಚ್ಚಳದ ನಿರೀಕ್ಷೆಯೂ ಇದೆ.

ಯುವ ಜನರನ್ನು ಕೃಷಿಯತ್ತ ಸೆಳೆಯಲು ಹಾಗೂ ಸಾವಯವ ಕೃಷಿಗೆ ಸಹಾಯಧನ, ಶೂನ್ಯ ಬಡ್ಡಿ ಸಾಲದ ಸಮರ್ಪಕ ಅನುಷ್ಠಾನಕ್ಕೆ ರೈತರು ಕಾಯುತ್ತಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ 10 ಸಾವಿರ ಕೋಟಿ ಅನುದಾನವನ್ನು ನೀಡುವ ಬಗ್ಗೆ ಹಾಗೂ ಮೀಸಲಾತಿ ಹೆಚ್ಚಳದ ಬಗ್ಗೆಯೂ ನಿರೀಕ್ಷೆ ಇದೆ. ಹಿಂದುಳಿದ ವರ್ಗಗಳ ನಿಗಮಗಳಿಗೆ ಹೆಚ್ಚಿನ ಅನುದಾನದ ನಿರೀಕ್ಷೆ ಇದೆ. ಕೇವಲ ಬೆಂಗಳೂರಿಗೆ ಸೀಮಿತವಾಗಿರುವ ಕೈಗಾರಿಕೆಗಳನ್ನು ರಾಜ್ಯದ 2ನೇ ಮತ್ತು 3ನೇ ಹಂತದ ನಗರಗಳಿಗೂ ವಿಸ್ತರಣೆ ಮಾಡುವುದಕ್ಕೆ ಉತ್ತೇಜನ ನೀಡುವಂತ ಕಾರ್ಯಕ್ರಮಗಳ ಘೋಷಣೆಯ ಬಗ್ಗೆಯೂ ನಿರೀಕ್ಷೆ ಇದೆ. ಸಾರಿಗೆ ವಲಯದತ್ತ ಬಂದರೆ ಚಾಲಕರ ಅಭಿವೃದ್ಧಿ ನಿಗಮ, ವೇತನ ಪರಿಷ್ಕರಣೆ ಬಗ್ಗೆ ದೊಡ್ಡಮಟ್ಟದ ನಿರೀಕ್ಷೆ ಇದೆ. ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸರ್ಕಾರಿ ಆಸ್ಪತ್ರೆಗಳ ಮೇಲ್ದರ್ಜೆ ಹಾಗೂ ಹೊಸ ಮೆಡಿಕಲ್ ಕಾಲೇಜುಗಳ ಘೋಷಣೆ ಸಂಬಂಧ ನಿರೀಕ್ಷೆಗಳಿದಾವೆ.












