ನಲ್ಗೊಂಡ, ಆಗಸ್ಟ್ 20: ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದ ಶಾಲಾ ಪ್ರಾಂಶುಪಾಲೆಯ ಭೀಕರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇಬ್ಬರು 10ನೇ ತರಗತಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕೊಂಡಮಲ್ಲೇಪಲ್ಲಿಯ ನಾಗಾರ್ಜುನ ಗ್ರಾಮರ್ ಕಾನ್ಸೆಪ್ಟ್ ಶಾಲೆಯ ಪ್ರಾಂಶುಪಾಲೆ ಕಲ್ಲು ರೂಪಾ ರೆಡ್ಡಿ ಅವರ ಮೇಲೆ 27 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ಕೇವಲ ಎಂಟು ದಿನಗಳಲ್ಲಿ ಪೊಲೀಸರು ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.
ಪ್ರಾಂಶುಪಾಲೆಯ ಮೇಲೆ ವಿದ್ಯಾರ್ಥಿಗಳಿಗೆ ಕೋಪ
ಪೊಲೀಸರ ಪ್ರಕಾರ, ಆರೋಪಿಗಳಿಬ್ಬರೂ 16 ವರ್ಷದ ವಿದ್ಯಾರ್ಥಿಗಳಾಗಿದ್ದು, ಇದೇ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದರು. ಹಾಸ್ಟೆಲ್ನಲ್ಲಿದ್ದ ವಿದ್ಯಾರ್ಥಿಗಳ ಬಳಿ ಹಣ ಹಾಗೂ ಮೊಬೈಲ್ ಪತ್ತೆಯಾದ ಹಿನ್ನೆಲೆಯಲ್ಲಿ ರೂಪಾ ರೆಡ್ಡಿ ಅವರು ಪೋಷಕರನ್ನು ಕರೆಸಿ ಬುದ್ಧಿವಾದ ಹೇಳಿದ್ದರು. ಒಬ್ಬ ವಿದ್ಯಾರ್ಥಿಯನ್ನು ಹಾಸ್ಟೆಲ್ನಿಂದ ಹೊರಹಾಕಿ ಡೇ ಸ್ಕಾಲರ್ ಆಗಿಯೂ ಮಾಡಲಾಗಿತ್ತು. ಇದರಿಂದ ಇಬ್ಬರಿಗೂ ಪ್ರಾಂಶುಪಾಲೆಯ ಮೇಲೆ ಕೋಪ ಬೆಳೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಹಣಕ್ಕಾಗಿ ಮನೆಗೆ ಕನ್ನ ಹಾಕಲು ಸಂಚು
ತ್ವರಿತವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಪ್ರಾಂಶುಪಾಲೆಯ ಮನೆಯಲ್ಲಿ ಕಳ್ಳತನ ಮಾಡಲು ಇಬ್ಬರು ವಿದ್ಯಾರ್ಥಿಗಳು ನಿರ್ಧರಿಸಿದ್ದರು. ಶಾಲಾ ಶುಲ್ಕ ಸಂಗ್ರಹವಾಗುತ್ತಿದ್ದ ಹಿನ್ನೆಲೆಯಲ್ಲಿ ಮನೆಯಲ್ಲಿ ಹೆಚ್ಚಿನ ಹಣ ಇರಬಹುದು ಎಂದು ಅವರು ಅಂದಾಜಿಸಿದ್ದರು. ಘಟನೆಗೂ ಮುನ್ನ ಹಲವು ದಿನಗಳ ಕಾಲ ಮನೆಯ ಸುತ್ತಮುತ್ತ ಓಡಾಡಿ ಮಾಹಿತಿ ಕಲೆಹಾಕಿದ್ದರು. ಕಳ್ಳತನಕ್ಕಾಗಿ ಮಾಸ್ಕ್, ಗ್ಲೌಸ್, ಬಟ್ಟೆ ಹಾಗೂ ಚಾಕುವನ್ನು ಖರೀದಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಕಳ್ಳತನ ವೇಳೆ ಗುರುತಿಸಿದ ಪ್ರಾಂಶುಪಾಲೆ
ಆಗಸ್ಟ್ 11ರ ಸಂಜೆ ಒಬ್ಬ ವಿದ್ಯಾರ್ಥಿ ಮನೆಯ ಹಿಂಬದಿಯಿಂದ ಒಳನುಗ್ಗಿದ್ದರೆ, ಮತ್ತೊಬ್ಬ ಹೊರಗೆ ಕಾವಲು ಕಾಯುತ್ತಿದ್ದ. ಮನೆಯೊಳಗೆ ನುಗ್ಗಿದ ವಿದ್ಯಾರ್ಥಿ ಸುಮಾರು ₹2.50 ಲಕ್ಷ ಹಣವನ್ನು ತೆಗೆದುಕೊಂಡಿದ್ದಾನೆ. ಈ ವೇಳೆ ರೂಪಾ ರೆಡ್ಡಿ ಅವರು ಆತನನ್ನು ಗುರುತಿಸಿದ್ದಾರೆ ಎನ್ನಲಾಗಿದೆ. ತಾನು ಸಿಕ್ಕಿಬೀಳುವ ಭಯದಿಂದ ವಿದ್ಯಾರ್ಥಿ ಚಾಕುವಿನಿಂದ ಅವರ ಮೇಲೆ ದಾಳಿ ಮಾಡಿ 27 ಬಾರಿ ಇರಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಅವರ ಮೊಬೈಲ್ ಫೋನ್ನ್ನೂ ತೆಗೆದುಕೊಂಡು ಪರಾರಿಯಾಗಿದ್ದಾನೆ.
‘ಬಾಬು’ ಎಂಬ ಕೊನೆಯ ಮಾತೇ ಪೊಲೀಸರಿಗೆ ಸುಳಿವು
ಹತ್ಯೆಗೂ ಮುನ್ನ ರೂಪಾ ರೆಡ್ಡಿ ಅವರು ತಮ್ಮ ಸಂಬಂಧಿಯೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದರು. ಸಂಭಾಷಣೆಯ ಕೊನೆಯಲ್ಲಿ ಅವರು ‘ಬಾಬು’ ಎಂಬ ಪದವನ್ನು ಉಚ್ಚರಿಸಿದ್ದರು ಎನ್ನಲಾಗಿದೆ. ಈ ಸುಳಿವಿನ ಆಧಾರದಲ್ಲಿ ಪೊಲೀಸರು ಶಾಲೆಯ ವಿದ್ಯಾರ್ಥಿಗಳ ವಿಚಾರಣೆ ಆರಂಭಿಸಿದರು. ಶಾಲೆ ಪುನರಾರಂಭವಾದ ಬಳಿಕ ಗೈರಾಗಿದ್ದ ವಿದ್ಯಾರ್ಥಿಗಳ ಪೈಕಿ ಐವರು 10ನೇ ತರಗತಿಯವರಾಗಿದ್ದರು. ಅವರಲ್ಲಿ ಇಬ್ಬರು ಅಕಸ್ಮಿಕವಾಗಿ ಹಣವನ್ನು ಖರ್ಚು ಮಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿತ್ತು.
ರಕ್ತದ ಕಲೆ ಇದ್ದ ನೋಟುಗಳಿಂದ ಬಯಲಾದ ಸತ್ಯ
ಪ್ರಕರಣದ ತನಿಖೆಗಾಗಿ ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಿ ಸುಮಾರು 70 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. 80ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಲಾಗಿದೆ. ಇಬ್ಬರು ವಿದ್ಯಾರ್ಥಿಗಳ ಪೈಕಿ ಒಬ್ಬನ ಬಳಿ ₹1.54 ಲಕ್ಷ ನಗದು ಮತ್ತು ದುಬಾರಿ ಐಫೋನ್ ಪತ್ತೆಯಾಯಿತು. ಹಣದ ನೋಟುಗಳ ಮೇಲೆ ರಕ್ತದ ಕಲೆಗಳು ಕಂಡುಬಂದ ಹಿನ್ನೆಲೆಯಲ್ಲಿ ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ರಕ್ತದ ಕಲೆಗಳು ಮಾನವ ರಕ್ತದ್ದೇ ಎಂದು ದೃಢಪಟ್ಟ ಬಳಿಕ ವಿದ್ಯಾರ್ಥಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಹಾಗೂ ಕಳ್ಳತನದ ವಿಚಾರ ಬಯಲಾಗಿದೆ.
ಹಲವು ವಸ್ತುಗಳು ಪೊಲೀಸರ ವಶಕ್ಕೆ
ಆರೋಪಿಗಳಿಂದ ₹1.54 ಲಕ್ಷ ನಗದು, ಪ್ರಾಂಶುಪಾಲೆಯ ಮೊಬೈಲ್, ಐಫೋನ್, ಕೃತ್ಯಕ್ಕೆ ಬಳಸಿದ್ದ ಚಾಕು, ಗ್ಲೌಸ್, ಮಾಸ್ಕ್ ಹಾಗೂ ಇತರ ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಬ್ಬರೂ ಅಪ್ರಾಪ್ತರಾಗಿರುವುದರಿಂದ ಅವರನ್ನು ಜುವೈನಲ್ ಜಸ್ಟಿಸ್ ಬೋರ್ಡ್ ಮುಂದೆ ಹಾಜರುಪಡಿಸಲಾಗುವುದು ಎಂದು ನಲ್ಗೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶರತ್ ಚಂದ್ರ ಪವಾರ್ ತಿಳಿಸಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.













