ತುಮಕೂರು: RSS ಸಂಘಟನೆಗೆ 100 ವರ್ಷ ತುಂಬಿದ ಹಿನ್ನೆಲೆ ಎಲ್ಲೆಡೆ ಪಥ ಸಂಚಲನ ಸಾಗುತ್ತಲೆ ಇದೆ. ಇಂದು ಕೋಲಾರ, ತುಮಕೂರು ಸೇರಿದಂತೆ ಹಲವೆಡೆ ಪಥ ಸಂಚಲನ ನಡೆದಿದೆ. ಅದರಲ್ಲೂ ಸರ್ಕಾರದ ಆದೇಶವಿದ್ದರೂ ಸರ್ಕಾರಿ ಜಾಗದಲ್ಲಿಯೇ ಪಥ ಸಂಚಲನ ನಡೆದಿದೆ. ಇತ್ತೀಚೆಗಷ್ಟೇ ಆರ್ ಎಸ್ ಎಸ್ ಕಾರ್ಯಕ್ರಮಗಳು ಸರ್ಕಾರಿ ಜಾಗದಲ್ಲಿ ನಡೆಯಬಾರದು ಎಂಬ ನಿರ್ಧಾರವನ್ನು ಸಚಿವ ಸಂಪುಟದಲ್ಲಿ ತೆಗೆದುಕೊಳ್ಳಲಾಗಿತ್ತು. ಆದರೆ ತುಮಕೂರಿನಲ್ಲಿ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಿಂದಾನೇ ಇಂದು ಆರ್ ಎಸ್ ಎಸ್ ಪಥಸಂಚಲನ ಆರಂಭವಾಗಿದೆ.
ಈ ಪಥ ಸಂಚಲನದಲ್ಲಿ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ, ಜ್ಯೋತಿ ಗಣೇಶ್ ಹಾಗೂ ಮಾಜಿ ಸಂಸದ ಸೊಗಡು ಶಿವಣ್ಣ ಕೂಡ ಭಾಗಿಯಾಗಿದ್ದರು. ಜ್ಯೂನಿಯರ್ ಕಾಲೇಜು ಅಂಗಳದಲ್ಲಿ ಪಥ ಸಂಚಲನ ಏರ್ಪಟ್ಟಿತ್ತು. ಹಾಗೇ ಆರ್ ಎಸ್ ಎಸ್ ಗೀತೆಯೂ ಮೊಳಗಿತ್ತು. ಈ ಮೂಲಕ ಸರ್ಕಾರಿ ಜಾಗದಲ್ಲಿ ಆರ್ ಎಸ್ ಎಸ್ ಅಥವಾ ಖಾಸಗಿ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಲೇಬೇಕು ಎಂಬ ಆದೇಶಕ್ಕೆ ಎಳ್ಳು ನೀರು ಬಿಟ್ಟಂತಾಯ್ತು.
ಇನ್ನು ಕೋಲಾರದಲ್ಲಿಯೂ ಆರ್ ಎಸ್ ಎಸ್ ಪಥ ಸಂಚಲನ ಸಾಗಿದೆ. ಆದರೆ ಅಲ್ಲಾಹು ಅಕ್ಬರ್ ಘೋಷಣೆ ಕೇಳಿದೆ. ಕೋಲಾರದ ಶ್ರೀನಿವಾಸಪುರದ ಬಾಲಕಿಯರ ಕಾಲೇಜಿನಿಂದ ಆರಂಭವಾದ ಪಥ ಸಂಚಲನ ಟಿಪ್ಪು ಸರ್ಕಲ್ ಗೆ ಬರುತ್ತಿದ್ದಂತೆ ಅನ್ಯಕೋಮಿನ ಮಂದಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೇ ನಮಾಜ್ ಮಾಡುವ ಸಮಯಕ್ಕೆ ಪಥ ಸಂಚಲನ ಬಂದಿದ್ದಾರೆಂದು ಗಲಾಟೆ ಮಾಡಿದ ಘಟನೆಯೂ ನಡೆದಿದೆ. ಕೂಡಲೇ ಎಚ್ಚೆತ್ತ ಪೊಲೀಸರು, ಅಲ್ಲಿನ ಸಮಸ್ಯೆಯನ್ನ ತಿಳಿಗೊಳಿಸಿ, ಆರ್ ಎಸ್ ಎಸ್ ಪಥಸಂಚಲನವಾಗುವುದಕ್ಕೆ ಸುಲಭ ಮಾಡಿಕೊಟ್ಟರು.
