ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆ ಅಡಿಯಲ್ಲಿ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಅರ್ಹತೆಯನ್ನು ಪರಿಶೀಲಿಸುವ ಕಾರ್ಯಕ್ಕೆ ವೇಗ ನೀಡಲಾಗಿದೆ. ಅನರ್ಹರು ಯೋಜನೆಯ ಲಾಭ ಪಡೆಯದಂತೆ ತಡೆಯುವ ಉದ್ದೇಶದಿಂದ ರಾಜ್ಯಾದ್ಯಂತ ‘ಆಪರೇಷನ್ ಗೃಹಜ್ಯೋತಿ’ ಆರಂಭಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಜುಲೈ ತಿಂಗಳಲ್ಲಿ ಸಾಮಾನ್ಯ ಮೀಟರ್ ರೀಡಿಂಗ್ ನಡೆಸುವುದಿಲ್ಲ ಎಂದು ಬೆಸ್ಕಾಂ (BESCOM) ತಿಳಿಸಿದೆ.
ಬೆಸ್ಕಾಂ ಪ್ರಕಟಿಸಿರುವ ಅಧಿಕೃತ ಮಾಹಿತಿಯ ಪ್ರಕಾರ, ಮೀಟರ್ ರೀಡರ್ಗಳನ್ನು ಮನೆ-ಮನೆಗೆ ಭೇಟಿ ನೀಡಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪರಿಶೀಲನಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದರಿಂದ ಜುಲೈ ತಿಂಗಳಲ್ಲಿ ನಿಯಮಿತ ಮೀಟರ್ ರೀಡಿಂಗ್ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ.ಈ ಕಾರಣದಿಂದ ಗ್ರಾಹಕರಿಗೆ ಜುಲೈ ತಿಂಗಳ ವಿದ್ಯುತ್ ಬಿಲ್ ಅನ್ನು ಕಳೆದ ಮೂರು ತಿಂಗಳ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಸಿದ್ಧಪಡಿಸಿ ನೀಡಲಾಗುತ್ತದೆ. ಮುಂದಿನ ತಿಂಗಳ ಮೀಟರ್ ರೀಡಿಂಗ್ ವೇಳೆ ನೈಜ ಬಳಕೆಯ ಆಧಾರದ ಮೇಲೆ ಅಗತ್ಯ ಹೊಂದಾಣಿಕೆ (Adjustment) ಮಾಡಲಾಗುವ ಸಾಧ್ಯತೆಯೂ ಇದೆ.
ಆದರೆ ಈ ವ್ಯವಸ್ಥೆ ಎಲ್ಲ ಗ್ರಾಹಕರಿಗೂ ಅನ್ವಯಿಸುವುದಿಲ್ಲ. ಹೈ ಟೆನ್ಷನ್ (HT) ಗ್ರಾಹಕರು, 40 ಹೆಚ್.ಪಿ. ಮತ್ತು ಅದಕ್ಕಿಂತ ಹೆಚ್ಚಿನ ಲೋಡ್ ಹೊಂದಿರುವ ಎಲ್.ಟಿ. ಗ್ರಾಹಕರು, ಸೋಲಾರ್ ರೂಫ್ಟಾಪ್ ಸಂಪರ್ಕ ಹೊಂದಿರುವವರು ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಗ್ರಾಹಕರಿಗೆ ಎಂದಿನಂತೆ ನಿಯಮಿತ ಮೀಟರ್ ರೀಡಿಂಗ್ ನಡೆಸಿ ಬಿಲ್ ನೀಡಲಾಗುತ್ತದೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.ಗೃಹಜ್ಯೋತಿ ಯೋಜನೆಯ ಪಾರದರ್ಶಕ ಅನುಷ್ಠಾನ ಹಾಗೂ ನಿಜವಾದ ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಸೌಲಭ್ಯ ತಲುಪಿಸುವ ಉದ್ದೇಶದಿಂದ ಈ ವಿಶೇಷ ಪರಿಶೀಲನಾ ಅಭಿಯಾನ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




















