ಸುದ್ದಿಒನ್, ಚಿತ್ರದುರ್ಗ, ಜುಲೈ. 02 : ಜಿಲ್ಲೆಯಲ್ಲಿ ವಿವಿದ ಯೋಜನೆಗಳು ಹಾಗೂ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಈ ಕೆಳಕಂಡಂತೆ ಮಾಹಿತಿಯನ್ನು ನೀಡಲಾಗಿದೆ.
ವಿಕಲಚೇತನರ ವಿವಿಧ ಸೌಲಭ್ಯಗಳ ಯೋಜನೆಗಳಿಗೆ ಅರ್ಜಿ ಆಹ್ವಾನ :
ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ 2026-27ನೇ ಸಾಲಿಗೆ ಜಿಲ್ಲೆಯ ಅರ್ಹ ವಿಕಲಚೇತನ ಅಭ್ಯರ್ಥಿಗಳಿಂದ ವಿವಿಧ ಕಲ್ಯಾಣ ಯೋಜನೆಗಳಡಿ ಸೌಲಭ್ಯ ಪಡೆಯಲು ಆಫ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿಕಲಚೇತನ ವಿದ್ಯಾರ್ಥಿಗಳ ಶಿಕ್ಷಣ ಪ್ರೋತ್ಸಾಹಕ್ಕಾಗಿ ಶುಲ್ಕ ಮರುಪಾವತಿ ಸೌಲಭ್ಯ, ವಿಕಲಚೇತನರನ್ನು ವಿವಾಹವಾಗುವ ದಂಪತಿಗಳಿಗೆ ಧನಸಹಾಯ ನೀಡುವ ಯೋಜನೆ, ವಿಕಲಚೇತನರ ಆರೋಗ್ಯ ರಕ್ಷಣೆಗಾಗಿ ವಿಮಾ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದು.
ಯೋಜನೆಗಳ ಪ್ರಯೋಜನ ಪಡೆಯಲು ಇಚ್ಛಿಸುವ ಅರ್ಹ ವಿಕಲಚೇತನರು ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಿರುವ ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ವೈದ್ಯಕೀಯ ಪ್ರಮಾಣ ಪತ್ರ, ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ (UDID ಕಾರ್ಡ್), ಇತ್ತೀಚಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್, ನಿವಾಸಿ ಧೃಡೀಕರಣ ಪತ್ರ, ಇತ್ತೀಚಿನ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬೇಕು.
ವಿದ್ಯಾರ್ಥಿ ವೇತನ ಹಾಗೂ ಶುಲ್ಕ ಮರುಪಾವತಿಗಾಗಿ ಹಿಂದಿನ ತರಗತಿಯ ಅಂಕಪಟ್ಟಿ, ಪ್ರಸ್ತುತ ವರ್ಷದ ವ್ಯಾಸಂಗ ಧೃಡೀಕರಣ ಪತ್ರ ಮತ್ತು ಕಾಲೇಜು ಮೂಲ ಶುಲ್ಕದ ರಸೀದಿ ಹೊಂದಿರಬೇಕು. ವಿವಾಹ ಯೋಜನೆಗೆ ವಿವಾಹ ನೊಂದಣಾಧಿಕಾರಿಯಿಂದ ಪಡೆದ ಪ್ರಮಾಣ ಪತ್ರ (ಗೆಜೆಟೆಡ್ ಅಧಿಕಾರಿಗಳ ಸಹಿಯೊಂದಿಗೆ) ಮತ್ತು ಜನನ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ.
ಅರ್ಜಿಗಳನ್ನು ಸಲ್ಲಿಸಲು 31-07-2026 ಕೊನೆಯ ದಿನಾಂಕವಾಗಿರುತ್ತದೆ. ಈ ಯೋಜನೆಗಳ ಅರ್ಜಿ ನಮೂನೆಗಳನ್ನು ಇಲಾಖೆಯ ಅಧಿಕೃತ ವೆಬ್ಸೈಟ್ www.dwdsc.kar.nic.in ನಿಂದ ನೇರವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.ಅಥವಾ ಆಯಾ ತಾಲೂಕು ಪಂಚಾಯಿತಿ/ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು (MRW/VRW/URW) ಸಂಪರ್ಕಿಸಿ ಉಚಿತವಾಗಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಮಾಹಿತಿಗಾಗಿ ತಾಲ್ಲೂಕುವಾರು ಚಿತ್ರದುರ್ಗ 9880821934, ಚಳ್ಳಕೆರೆ 9611266930, ಹಿರಿಯೂರು 9902888901, 9902898901 ಹೊಳಲ್ಕೆರೆ 9740030227,ಹೊಸದುರ್ಗ 9741829990, ಮೊಳಕಾಲ್ಮೂರು 9742725576 ಕರೆ ಮಾಡಬಹದು. ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳ ಕಚೇರಿ, ಬಾಲಭವನ ಆವರಣ, ಸ್ಟೇಡಿಯಂ ಹತ್ತಿರ, ಚಿತ್ರದುರ್ಗ ಅಥವಾ ಕಚೇರಿ ದೂರವಾಣಿ ಸಂಖ್ಯೆ 08194-235284 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ತಿಳಿಸಿದ್ದಾರೆ.
ಬಿಆರ್ಸಿ ಕೇಂದ್ರಗಳಲ್ಲಿ ಥೆರಪಿಸ್ಟ್ ಹಾಗೂ ಆಯಾ ಹುದ್ದೆಗಳಿಗೆ ಅರ್ಜಿ ಆಹ್ವಾನ :
ಜಿಲ್ಲೆಯ ಆರು ತಾಲೂಕುಗಳ ಬಿಆರ್ಸಿ ಕೇಂದ್ರದ ಶಾಲಾ ಸಿದ್ಧತಾ ಕೇಂದ್ರಗಳಲ್ಲಿ ಖಾಲಿ ಇರುವ ಥೆರಪಿಸ್ಟ್ ಹಾಗೂ ಆಯಾ/ಸಹಾಯಕಿ ಹುದ್ದೆಗಳನ್ನು ನೇರ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಥೆರಪಿಸ್ಟ್ ಹುದ್ದೆಗೆ ಬ್ಯಾಚುಲರ್ ಆಫ್ ಫಿಸಿಯೋಥೆರಪಿ (BPT) ಅಥವಾ ಡಿಪ್ಲೊಮಾ ಇನ್ ಫಿಸಿಯೋಥೆರಪಿ (DPT) / ಬಿಒಟಿ (Bachelor of Occupational Therapy) ಅಥವಾ ಬಿ.ಎಸ್ಸಿ ಆಕ್ಯುಪೇಷನಲ್ ಥೆರಪಿ / ಬ್ಯಾಚುಲರ್ ಆಫ್ ಆಡಿಯಾಲಜಿ ಅಂಡ್ ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿ (BASLP) ಪದವಿ ಹೊಂದಿರಬೇಕು. ಸಂಬಂಧಿತ ಕ್ಷೇತ್ರದಲ್ಲಿ ಸೇವಾ ಅನುಭವ ಹೊಂದಿರುವುದು ಕಡ್ಡಾಯ, ಮಾಸಿಕ ವೇತನ ರೂ. 12,000 ವೇತನ ನೀಡಲಾಗುವುದು. ಆಯಾ / ಸಹಾಯಕಿ ಹುದ್ದೆಗೆ ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿರಬೇಕು. ಸೇವಾ ಅನುಭವ ಹೊಂದಿರಬೇಕು ಹಾಗೂ ಕಡ್ಡಾಯವಾಗಿ ಸ್ಥಳೀಯ ಮಹಿಳಾ ಅಭ್ಯರ್ಥಿ ಆಗಿರಬೇಕು. ಮಾಸಿಕ ವೇತನ ರೂ. 6,000 ವೇತನ ನೀಡಲಾಗುವುದು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಅಗತ್ಯವಿರುವ ಎಲ್ಲಾ ದೃಢೀಕೃತ ದಾಖಲೆಗಳೊಂದಿಗೆ ಜುಲೈ 17 ರ ಸಂಜೆ 5 ಗಂಟೆಯೊಳಗೆ ಚಿತ್ರದುರ್ಗದ ಉಪನಿರ್ದೇಶಕರ (ಆಡಳಿತ) ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾಧಿಕಾರಿಗಳ ಕಚೇರಿ, ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆ ಇಲ್ಲಿಗೆ ಮುದ್ದಾಂ (ಖುದ್ದಾಗಿ) ಸಲ್ಲಿಸಬೇಕಾಗಿ ಕೋರಲಾಗಿದೆ.
ಶುಲ್ಕ ಮರುಪಾವತಿಗಾಗಿ ಅರ್ಜಿ ಆಹ್ವಾನ :
ಚಿತ್ರದುರ್ಗ ಜಿಲ್ಲೆಯ ಅರ್ಹ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ಕೋರ್ಸ್ಗಳ ಶುಲ್ಕ ಮರುಪಾವತಿಗಾಗಿ ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ (SSP) ಮೂಲಕ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

2026-27ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ಪದವಿ ಪೂರ್ವ, ಪದವಿ, ಸ್ನಾತಕೋತ್ತರ, ವೃತ್ತಿಪರ ಕೋರ್ಸ್ಗಳು ಹಾಗೂ ಎಂ.ಫಿಲ್ ಮತ್ತು ಪಿಹೆಚ್.ಡಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ವಿದ್ಯಾರ್ಥಿಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು.
ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ನ ಅಧಿಕೃತ ಲಿಂಕ್ https://ssp.postmatric.karnataka.gov.in/ ಮೂಲಕ ಸೆಪ್ಟೆಂಬರ್ 30 ಅರ್ಜಿ ಸಲ್ಲಿಸಿ ಕೊನೆಯ ದಿನ. ಹೆಚ್ಚಿನ ವಿವರ ಹಾಗೂ ಮಾಹಿತಿಗಾಗಿ ವಿದ್ಯಾರ್ಥಿಗಳು ತಮ್ಮ ಹತ್ತಿರದ ಜಿಲ್ಲಾ ಅಥವಾ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಿಗೆ ಭೇಟಿ ನೀಡಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿನಿಲಯಗಳ ಪ್ರವೇಶಾತಿಗೆ ಆನ್ಲೈನ್ ಅರ್ಜಿ ಆಹ್ವಾನ :
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2026-27ನೇ ಸಾಲಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ (ಸಾಮಾನ್ಯ ಪದವಿ ಕೋರ್ಸ್ಗಳ) ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ ಹೊಸ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಇತರ ಜನಾಂಗಗಳಿಗೆ ಸೇರಿದ ಸಾಮಾನ್ಯ ಪದವಿ ಕೋರ್ಸ್ಗಳ ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರವರ್ಗ-1, ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ: ಗರಿಷ್ಠ ರೂ. 2.50 ಲಕ್ಷ, ಪ್ರವರ್ಗ-2ಎ, 2ಬಿ, 3ಎ, 3ಬಿ ಹಾಗೂ ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ: ಗರಿಷ್ಠ ರೂ. 1.00 ಲಕ್ಷ ಆದಾಯ ಮಿತಿ ಹೊಂದಿರಬೇಕು.
https://shp.karnataka.gov.in/bcwd ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 20 ಕೊನೆಯ ದಿನವಾಗಿದೆ. ಹೊಸ ಅರ್ಜಿಗಳನ್ನು ಜುಲೈ 23 ರಂದು ಪರಿಶೀಲನೆ ಮಾಡಲಾಗುವುದು. ಜುಲೈ 27 ರಂದು ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳು ಜುಲೈ 30 ರೊಳಗೆ ಪ್ರವೇಶ ಪಡೆಯಬೇಕು.
ಹೆಚ್ಚಿನ ವಿವರಗಳಿಗಾಗಿ ತಾಲೂಕುವಾರು ವಿದ್ಯಾರ್ಥಿನಿಲಯಗಳ ವಿವರ, ಅರ್ಹತೆ, ಮತ್ತು ಸಲ್ಲಿಸಬೇಕಾದ ದಾಖಲೆಗಳ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್ಸೈಟ್ https://bcwd.karnataka.gov.in/ ಅನ್ನು ವೀಕ್ಷಿಸಬಹುದು. ಅರ್ಜಿ ಸಲ್ಲಿಸುವಾಗ ಯಾವುದೇ ತಾಂತ್ರಿಕ ತೊಂದರೆಗಳ ಆದಲ್ಲಿ, ವಿದ್ಯಾರ್ಥಿಗಳು bcwdhelpline@gmail.com ಇ-ಮೇಲ್ ಮುಖಾಂತರ ಅಥವಾ ಸಂಬಂಧಪಟ್ಟ ಜಿಲ್ಲಾ/ತಾಲೂಕು ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರನ್ನು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ಸಹಾಯವಾಣಿ ಸಂಖ್ಯೆ: 8050770004 ಅನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.






















