ದರೋಡೆ ಯತ್ನ : ಭರಮಸಾಗರ ಪೊಲೀಸರಿಂದ ಮೂವರ ಬಂಧನ

1 Min Read

ಸುದ್ದಿಒನ್, ಚಿತ್ರದುರ್ಗ, ಜುಲೈ. 16 : ತಾಲ್ಲೂಕಿನ ಸಿರಿಗೆರೆಯಲ್ಲಿ ಅಳಗವಾಡಿ ಗ್ರಾಮದ ಕಡೆಗೆ ಹೋಗುವ ಹಳ್ಳದ ಬದಿಯಲ್ಲಿ ಯಾರೋ ಅನುಮಾನಾಸ್ಪದ ವ್ಯಕ್ತಿಗಳು ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭರಮಸಾಗರ ಪೊಲೀಸರು ದರೋಡೆಗೆ ಯತ್ನಿಸಿದ್ದ ಮೂವರನ್ನು ಬಂಧಿಸಲಾಗಿದೆ.

ಶಿವಮೊಗ್ಗದ ಕಾರ್ತಿಕ್, ಭದ್ರಾವತಿ ತಾಲ್ಲೂಕಿನ ತಟ್ಟಿಹಳ್ಳಿ ಗ್ರಾಮದ ಮದನ್ ಮತ್ತು ಹರೀಶ್ ಬಂಧಿತರು. ಉಳಿದ 5 ಜನ ಆರೋಪಿಗಳು ಪರಾರಿಯಾಗಿರುತ್ತಾರೆ. ಇವರೆಲ್ಲರೂ ನಿನ್ನೆ (ಜುಲೈ. 15 ರಂದು) ಮಧ್ಯಾನ್ಹ ಅಳಗವಾಡಿ ಗ್ರಾಮದ ಕಡೆಗೆ ಹೋಗುವ ಹಳ್ಳದ ಬದಿಯಲ್ಲಿ ನಿಂತು ಅಡಿಕೆ ವ್ಯಾಪಾರಿಯು ಹಣದೊಂದಿಗೆ ವಾಹನದಲ್ಲಿ ಬರುವುದಾಗಿ ತಿಳಿದಿದ್ದರಿಂದ ದರೋಡೆ ಮಾಡಲು ಹೊಂಚು ಹಾಕಿ ಕಾಯುತ್ತಿದ್ದರು. ಇದೇ ಸಂದರ್ಭದಲ್ಲಿ ಇದನ್ನು ಗಮನಿಸಿದ
ಸಿರಿಗೆರೆ ಗ್ರಾಮದ ಲೋಹಿತ್‌ಕುಮಾರ್ ಎಂಬುವರು ಸಿರಿಗೆರೆ ಉಪ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿರುತ್ತಾರೆ.

ಕೂಡಲೇ ಭರಮಸಾಗರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮೂವರನ್ನು ಬಂಧಿಸಿರುತ್ತಾರೆ. ಈ ವೇಳೆ ಆರೋಪಿಗಳು ದರೋಡೆ ಮಾಡಲು ಕಾರಿನಲ್ಲಿ ಇಟ್ಟುಕೊಂಡಿದ್ದ ಒಂದು ಡ್ರಾಗರ್ ನೈಫ್, 03 ಕಬ್ಬಿಣದ ಲಾಂಗ್ ಗಳು (Bill hook) ಮಾರಕ ಆಯುಧಗಳು ಹಾಗೂ ಕಾರದ ಪುಡಿ ಪಾಕೇಟ್‌ಗಳನ್ನು ಮತ್ತು ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತದೆ. ಉಳಿದ ಆರೋಪಿಗಳ ಪತ್ತೆಕಾರ್ಯ ಮುಂದುವರೆದಿರುತ್ತದೆ ಎಂದು ಎಸ್.ಪಿ. ರಂಜಿತ್ ಕುಮಾರ್ ಬಂಡಾರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks