ಸುದ್ದಿಒನ್,ಬೆಂಗಳೂರು,ಮೇ.25: ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿಯ ಅನರ್ಹ ಫಲಾನುಭವಿಗಳಿಗೆ ಸದ್ಯದಲ್ಲೇ ದೊಡ್ಡ ಶಾಕ್ ಕಾದಿದೆ. ಈ ಯೋಜನೆಗಳ ಅರ್ಹರ ಪಟ್ಟಿಯನ್ನು ಸಂಪೂರ್ಣವಾಗಿ ಮರುಪರಿಶೀಲಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಸರ್ಕಾರದ ಈ ಕಠಿಣ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಗೃಹಜ್ಯೋತಿ ಮತ್ತು ಗೃಹಲಕ್ಷ್ಮೀ ಯೋಜನೆಗಳಲ್ಲಿ ಸುಮಾರು 100 ಕೋಟಿ ರೂ. ದುರ್ಬಳಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

ಮೃತರ ಖಾತೆಗಳಿಗೂ ಇನ್ನೂ ಹಣ ಜಮೆಯಾಗುತ್ತಿದೆ. ಅಷ್ಟೇ ಅಲ್ಲದೆ, ಅನರ್ಹರು ಕೂಡ ತಪ್ಪು ಮೊಬೈಲ್ ಸಂಖ್ಯೆಗಳನ್ನು ನೀಡಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಸದ್ಯ ಯೋಜನೆಗಳು ಸರಿಯಾದ ಫಲಾನುಭವಿಗಳನ್ನೇ ತಲುಪುತ್ತಿವೆಯೇ ಎಂಬ ಗೊಂದಲವಿದೆ. ಹೀಗಾಗಿಯೇ ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಯ ಪರಿಷ್ಕರಣೆಗೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.










