ಬೆಂಗಳೂರು: ಯಾರೂ ಯಾವ ಭಾಷೆಯಲ್ಲಿ ಕಲಿಯಬೇಕು ಅಂತ ಹೇಳುವುದು ಅವರಿಗೆ ಬಿಟ್ಟ ವಿಚಾರ. ನಾನು ಹೇಳ್ತಾ ಇರೋದು, ಇಂಗ್ಲಿಷ್ ಮೀಡಿಯಂನಲ್ಲಿ ಓದಿದವರಿಗೆ ಮಾತ್ರ ಭವಿಷ್ಯ ಇದೆ. ಅವರು ಬಹಳ ಜಾಣರಾಗ್ತಾರೆ ಅಂತ ತಿಳಿದುಕೊಂಡಿದ್ದರೆ ಅದು ಬಹಳ ತಪ್ಪು, ಕನ್ನಡ ಭಾಷೆಯಲ್ಲಿ ಓದಿದವರಿಗೂ ಬಹಳ ದೊಡ್ಡ ಭವಿಷ್ಯವಿದೆ. ನಾವೂ ಕೂಡ ಕನ್ನಡ ಮೀಡಿಯಂನಲ್ಲಿಯೇ ಪಿಯುಸಿ ತನಕ ಓದಿದ್ದೇನೆ. ಹೀಗಾಗಿ ಕನ್ನಡ ಭಾಷೆಯಲ್ಲಿ ಕಲಿತರೆ ಭವಿಷ್ಯ ಇಲ್ಲ ಎಂದು ಹೇಳುವುದು ತಪ್ಪು ಎಂದು ಶಾಸಕ ರಾಯರೆಡ್ಡಿ ಅವರು ವಿಚಾರವನ್ನ ತೆಗೆದರು.
ಆದರೆ ಇಲ್ಲಿ ಯುಟಿ ಖಾದರ್ ಅವರು ಮೊದಲು ಬಿಲ್ ಬಗ್ಗೆ ಮಾತನ್ನಾಡಿ, ಈಗ ಆ ಬಗ್ಗೆ ಯಾಕೆ ಚರ್ಚೆ. ಆಯ್ತು ಈಗ ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಾ ಇದ್ದಾರೆ ಎಂದು ಪ್ರಶ್ನೆ ಕೇಳಿದರು ರಾಯರೆಡ್ಡಿ ಅವರು ಉತ್ತರ ಕೊಡಲಿಲ್ಲ. ಮತ್ತೆ ಅದೇ ಭಾಷೆಯ ಬಗ್ಗೆಯೇ ಜೋರು ಧ್ವನಿಯಲ್ಲಿಯೇ ಮಾತನ್ನಾಡಿದರು.
ಇದಕ್ಕೆ ಶಿವಲಿಂಗೇಗೌಡ ಅವರು ರೊಚ್ಚಿಗೆದ್ದರು. ನೀವೂ ಸರ್ಕಾರ್ ವಿರುದ್ಧವೇ ಮಾತನಾಡ್ತಾ ಇದ್ದೀರಿ. ಕಿಪಿಎಸ್ಸಿ ಶಾಲೆಯನ್ನ ಇಡೀ ರಾಜ್ಯದ ಜನತೆ ಒಪ್ಪಿಕೊಂಡಿದೆ. ಇಂಗ್ಲಿಷ್ ಮಾಧ್ಯಮದಲ್ಲಿಯೇ ಆಗಬೇಕು ಅಂತ ಸೇರಿಸಿದ್ದೀರಿ. ನಮಗೆ ಆಂಗ್ಲ ಮಾಧ್ಯಮ ಬೇಕು. ಆರ್ಥಿಕವಾಗಿ ಹಿಂದುಳಿದಿರುವ ಎಲ್ಲಾ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಓದಿ, ಅಮೆರಿಕಾ ಸೇರಿದಂತೆ ಹೊರದೇಶದಲ್ಲೆಲ್ಲಾ ಸುತ್ತಿಕೊಂಡು ಬರಬೇಕು. ಕರ್ನಾಟಕದಲ್ಲಿಯೇ ಇರಕೂಡದು. ಇಡೀ ಪ್ರಪಂಚ ವಿಶಾಲವಾಗಿದೆ, ವೈಜ್ಞಾನಿಕವಾಗಿ ಬೆಳೆದಿದೆ. ಆ ವೈಜ್ಞಾನಿಕ ಲೋಕವನ್ನ ನೋಡಿಕೊಂಡು ಬರಬೇಕು. ಇದೆಲ್ಲಾ ಆಗಬೇಕು ಅಂದ್ರೆ ಆಂಗ್ಲಮಾಧ್ಯಮ ಎಲ್ಕೆಜಿ, ಯುಕೆಜಿಯಿಂದಾನೇ ಇರಬೇಕು ಎಂದಿದ್ದಾರೆ.















