ಸುದ್ದಿಒನ್, ಚಿತ್ರದುರ್ಗ. ಫೆ. 17 : ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆ ಎಲ್ಲ ರಂಗದಲ್ಲಿ ಗುರುತಿಸಿಕೊಳ್ಳುತ್ತಿರುವುದು ಅಭಿಮಾನದ ಸಂಗತಿಯಾದರೂ ಶೋಷಣೆಗೆ ಒಳಗಾಗುತ್ತಿದ್ದಾಳೆ. ಒತ್ತಡಕ್ಕೆ ಒಳಗಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾಳೆ. ಮಹಿಳೆಯರ ಸಮರ್ಪಣಾ ಭಾವ ದೊಡ್ಡದು. ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವುದು ಅರ್ಥಪೂರ್ಣವಾದ ಕೆಲಸ. ಮಹಿಳೆಯ ಆರೋಗ್ಯವಂತ ಬದುಕಿನ ಬಗ್ಗೆ ಆಲೋಚಿಸಬೇಕು ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಹೇಳಿದರು.
ಮುರುಘಾಮಠದ ಅನುಭವ ಮಂಟಪದಲ್ಲಿಂದು ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಚಿತ್ರದುರ್ಗ ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ವೈದ್ಯರ ಸಂಘ ಇವರ ಸಹಯೋಗದಲ್ಲಿ ನಡೆದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕ್ಯಾನ್ಸರ್ ಜಾಗೃತಿ ಅಭಿಯಾನ ಹಾಗೂ ಮುಂಜಾಗ್ರತ ಕಾರ್ಯಕ್ರಮಗಳ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಶ್ರೀಗಳು ಮಾತನಾಡಿದರು.
ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯನ್ನು ಸ್ವಾಮಿಗಳು ಕಟ್ಟಿ ಬೆಳೆಸಿದ್ದಾರೆ. ಅನೇಕ ಸಾಮಾಜಿಕ ಜವಾಬ್ದಾರಿಯನ್ನು ಶ್ರೀಮಠ ಮಾಡುತ್ತಿದೆ. 25ವರ್ಷಗಳ ಹಿಂದೆ ಚಿತ್ರದುರ್ಗಕ್ಕೆ ಆಸ್ಪತ್ರೆಯ ಅವಶ್ಯಕತೆಯಿತ್ತು. ಸಧ್ಯ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಉಚಿತವಾಗಿ ಹೆರಿಗೆ, ಔಷೊಧೋಪಚಾರ, ತಪಾಸಣೆ ಮಾಡಲಾಗುತ್ತದೆ. ನಮ್ಮ ಸಂಸ್ಥೆ ಬಡವರ, ಮಧ್ಯಮ ವರ್ಗದವರ ಆಶಾಕಿರಣವಾಗಿ ಕೆಲಸ ಮಾಡುತ್ತಿದೆ ಎಂದರು.
ಮುಖ್ಯಅತಿಥಿ ಜಿಲ್ಲಾ ಸರ್ಜನ್ ಡಾ. ರವೀಂದ್ರ ಮಾತನಾಡಿ, ಆಶಾ ಕಾರ್ಯಕರ್ತರಿಗೆ ಅನೇಕ ಜವಾಬ್ದಾರಿಗಳಿರುತ್ತವೆ. ಸ್ವಚ್ಛತೆ ಬಗ್ಗೆ ನಿಮಗೆ ಅರಿವು ಇರುತ್ತದೆ. ನೀವು ಜನರಲ್ಲಿ ಜಾಗೃತಿ ಮೂಡಿಸಬೇಕು. ಸಭೆ ಸಮಾರಂಭಗಳಲ್ಲಿ ತಾವು ಕಲಿತದ್ದನ್ನು ತಿಳಿಹೇಳಬೇಕೆಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ ಕಂಬಾಳಿ ಮಠ ಮಾತನಾಡಿ, ಪ್ರತಿ ಮನೆಗೆ ಜಿಲ್ಲೆಯಾದ್ಯಂತ ಭೇಟಿ ಮಾಡಿ ರಕ್ತದೊತ್ತಡ, ಸಕ್ಕರೆಕಾಯಿಲೆ, ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸಲು ಪ್ರಾರಂಭಿಸಿz್ದÉೀವೆ. ಸ್ತನ, ಗರ್ಭ ಮತ್ತು ಬಾಯಿ ಗಂಟಲು ಕ್ಯಾನ್ಸರ್ಗಳು ಮೂರು ರೀತಿ ಇರುತ್ತವೆ. ಜನರ ಹತ್ತಿರ ಹೋಗಿ ಆರೋಗ್ಯ ವಿಚಾರಿಸಿ ಕ್ಯಾನ್ಸರ್ ರೋಗ ಲಕ್ಷಣಗಳು ಇದ್ದರೆ ಆಪರೇಷನ್ ಮಾಡಲಾಗುತ್ತದೆ. ಈ ಮೊದಲು ಶಿವಮೊಗ್ಗ, ದಾವಣಗೆರೆಯಲ್ಲಿ ಮಾತ್ರ ಇತ್ತು. ಇನ್ನೆರಡು ತಿಂಗಳಲ್ಲಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕ್ಯಾನ್ಸರ್ ಆಸ್ಪತ್ರೆ (ಚಿಕಿತ್ಸಾ ಘಟಕ) ಬರುತ್ತಿದೆ. ಅದು ಸುಸಜ್ಜಿತವಾಗಿರುತ್ತದೆ. ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಈಗಾಗಲೇ ಪ್ರತಿ ಹಳ್ಳಿಗೆ ಸಕ್ಕರೆ ಕಾಯಿಲೆ, ಬಿ.ಪಿ. ಮಾತ್ರೆಗಳನ್ನು ಕಳುಹಿಸಿದ್ದೇವೆ. ಮಹಿಳೆಯರ ಕ್ಯಾನ್ಸರ್ ಪತ್ತೆ ಹಚ್ಚುವುದು ಸ್ವಲ್ಪ ಕಷ್ಟದ ಕೆಲಸ. ದೂರದ ಊರುಗಳಿಗೆ ಆಶಾ ಕಾರ್ಯಕರ್ತೆಯರು ಹೋಗಿ ಸಂಬಂಧಿಸಿದ ರೋಗಿಯನ್ನು ಗುಣಮುಖಪಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಕಾಲೇಜಿನ ಡೀನ್ ಡಾ. ಜಿ. ಪ್ರಶಾಂತ ಮಾತನಾಡಿ, ಮೊದಲು ಸಾಂಕ್ರಾಮಿಕ ರೋಗಗಳು ಇರುತ್ತಿದ್ದವು. ಈಗ ಕ್ಯಾನ್ಸರ್ನಂತಹ ಮಾರಕರೋಗ ಇದೆ. ನಮ್ಮ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಉಚಿತ ಹೆರಿಗೆ ಮತ್ತು ಆಪರೇಷನ್ ಮಾಡಲಾಗುತ್ತಿದೆ. ಮೆಮೋಗ್ರಫಿ ಕೂಡ ಇದೆ. ಯಾವುದೇ ರೀತಿಯ ಕ್ಯಾನ್ಸರ್ ಇರಲಿ ಮೊದಲ ಹಂತದಲ್ಲಿ ಪತ್ತೆಯಾದರೆ ಅದನ್ನು ಗುಣಪಡಿಸಬಹುದು. ಗೊತ್ತಾಗುತ್ತಿದ್ದಂತೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡರೆ ಬೇಗ ಗುಣಮುಖವಾಗುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಡಾ. ಭಾರತಿ ಮಾತನಾಡಿ, ಆರೋಗ್ಯ ಮನುಷ್ಯನಿಗೆ ಬಹಳ ಮುಖ್ಯ. ವೈದ್ಯಕೀಯ ಕ್ಷೇತ್ರವು ಸಾಕಷ್ಟು ಬೆಳೆಯುತ್ತಿದ್ದರೆ ಕಾಯಿಲೆಗಳು ಸಹ ವೇಗವಾಗಿ ಬೆಳೆಯುತ್ತಿವೆ. ನಮ್ಮ ಆಹಾರ ಪದ್ಧತಿ, ಬದುಕುವ ರೀತಿ ನೀತಿಗಳಿಂದ ನಮ್ಮ ರಕ್ಷಣೆ ಮಾಡಿಕೊಳ್ಳಬೇಕಿದೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಇಂದು ಕ್ಯಾನ್ಸರ್ ಘಟಕದ ಅವಶ್ಯಕತೆ ಇದೆ. ಇಂದು ಬಿಪಿ, ಶುಗರ್ ಶ್ರೀಮಂತರ ಕಾಯಿಲೆ ಅಲ್ಲ. ಇಂದು ಜನಸಾಮಾನ್ಯರಲ್ಲೂ ಬರುತ್ತಿದೆ. ಹಾಗೆಯೇ ಕ್ಯಾನ್ಸರ್ ಕೂಡ ಎಂದು ಹೇಳಿದರು.
ಡಾ. ಅಭಿನವ್ ಮಾತನಾಡಿ, ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಒಂದು ಭಾಗವಾಗಿ ಕೆಲಸ ಮಾಡುತ್ತಿದೆ. ನಮ್ಮ ಇಲಾಖೆಯ ಶಕ್ತಿ ನೀವುಗಳು. 15 ರಿಂದ 40 ವರ್ಷದವರೆಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಇವರಿಗೆ ಜಾಗೃತಿ ಮೂಡಿಸಬೇಕು. ಅವರಲ್ಲಿರುವ ರೋಗದ ಲಕ್ಷಣಗಳನ್ನು ಗುರುತಿಸಬೇಕೆಂದರು.
ಡಾ. ರಾಜೇಶ್, ಡಾ. ಪಾಲಾಕ್ಷಪ್ಪ ಮಾತನಾಡಿದರು. ಡಾ. ನಾರಾಯಣಮೂರ್ತಿ, ಡಾ. ಗೀತಾ ಪಾಲಾಕ್ಷಪ್ಪ ಮೊದಲಾದವರಿದ್ದರು.
ಡಾ. ಹರ್ಷಿತ ಪ್ರಾರ್ಥಿಸಿದರು. ಡಾ. ಲತಾ ವಂದಿಸಿದರು. ಡಾ. ಸೌಮ್ಯ ನಿರೂಪಿಸಿದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.













