ದೆಹಲಿ.ಜುಲೈ.24: ರಾಷ್ಟ್ರಗೀತೆಯಷ್ಟೇ ಗಂಭೀರತೆ ಹೊಂದಿರುವ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಆಲಾಪನೆಗೆ ಯಾವುದೇ ರೀತಿಯ ಅಡಚಣೆ ಉಂಟುಮಾಡುವುದು ಅಥವಾ ಅದಕ್ಕೆ ಅಪಮಾನ ಮಾಡುವುದನ್ನು ಇನ್ಮುಂದೆ ಅಪರಾಧ ಎಂದು ಪರಿಗಣಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಈ ಕುರಿತಾದ ‘ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ವಿಧೇಯಕ, 2026’ ಅನ್ನು ರಾಜ್ಯಸಭೆಯಲ್ಲಿ ಮಂಡಿಸಿದ್ದಾರೆ.
ಇದುವರೆಗೆ 1971ರ ಕಾಯ್ದೆಯು ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ನೀಡುತ್ತಿದ್ದ ಕಾನೂನು ರಕ್ಷಣೆಯನ್ನು, ಇನ್ಮುಂದೆ ‘ವಂದೇ ಮಾತರಂ’ ಗೀತೆಗೂ ವಿಸ್ತರಿಸುವುದು ಈ ವಿಧೇಯಕದ ಮುಖ್ಯ ಉದ್ದೇಶ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೋಟ್ಯಂತರ ಭಾರತೀಯರಲ್ಲಿ ದೇಶಭಕ್ತಿಯ ಕಿಚ್ಚು ಹೊತ್ತಿಸಿದ್ದ ಈ ಗೀತೆಯ ಘನತೆಯನ್ನು ಎತ್ತಿಹಿಡಿಯಲು ಈ ಕ್ರಮ ಅಗತ್ಯ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಬಿಜೆಪಿ ಸಂಸದ ಸಂಜಯ್ ಸೇಠ್ ಈ ನಡೆಗೆ ಹರ್ಷ ವ್ಯಕ್ತಪಡಿಸಿದ್ದು, ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಈ ಗೀತೆಗೆ ಸಿಗುತ್ತಿರುವ ಜನಪ್ರಿಯತೆಯ ಹಿನ್ನೆಲೆಯಲ್ಲಿ ಸೂಕ್ತ ಗೌರವ ಕಾಯ್ದುಕೊಳ್ಳಲು ಇದು ಪೂರಕ ಎಂದಿದ್ದಾರೆ.

ಆದರೆ, ಈ ಪ್ರಸ್ತಾಪವು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಹೊಸ ಸಂಘರ್ಷಕ್ಕೆ ಕಾರಣವಾಗಿದೆ. ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು, ಈ ಕಾಯ್ದೆಯು ಸಂವಿಧಾನದ ವಿಧಿ 19 (ವಾಕ್ ಸ್ವಾತಂತ್ರ್ಯ), ವಿಧಿ 21 (ವೈಯಕ್ತಿಕ ಸ್ವಾತಂತ್ರ್ಯ) ಮತ್ತು ವಿಧಿ 25 (ಧಾರ್ಮಿಕ ಸ್ವಾತಂತ್ರ್ಯ) ಗಳ ಉಲ್ಲಂಘನೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಬಲವಂತದ ದೇಶಭಕ್ತಿಯನ್ನು ಕಾನೂನಿನ ಮೂಲಕ ಹೇರುವುದು ವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಬಹುದು ಎಂಬುದು ವಿಪಕ್ಷಗಳ ವಾದ. ಆಮ್ ಆದ್ಮಿ ಪಾರ್ಟಿಯ ಸಂಸದ ಸಂಜಯ್ ಸಿಂಗ್ ಕೂಡ ಈ ವಿಧೇಯಕವನ್ನು ತೀವ್ರವಾಗಿ ವಿರೋಧಿಸಿದ್ದಾರೆ.











