ಕನ್ನಡದ ಜಾನಪದ ಸೊಗಡು, ಸಂಸ್ಕೃತಿ ಮತ್ತು ಕಲೆಯನ್ನು ಉಳಿಸಿ : ಕಲಾವಿದ ಡಿ. ರಾಜಣ್ಣ

1 Min Read

 

ಸುದ್ದಿಒನ್, ಚಳ್ಳಕೆರೆ, ಸೆಪ್ಟೆಂಬರ್. 17 : ಇಂದಿನ ಯುವ ಪೀಳಿಗೆಯಲ್ಲಿ ಕನ್ನಡ ಜಾನಪದ ಗೀತೆಗಳು ಮತ್ತು ಭಾವಗೀತೆಗಳ ಮೇಲೆ ಆಸಕ್ತಿ ಕಡಿಮೆಯಾಗುತ್ತಿದ್ದು. ಚಲನಚಿತ್ರಗೀತೆಗಳ ಅಬ್ಬರದಲ್ಲಿ ಗಡಿನಾಡಿನ ಕನ್ನಡ ಜಾನಪದ ಗೀತೆಗಳ, ವೈಶಿಷ್ಟ್ಯ, ಭಾವಗೀತೆಗಳ ಮಹತ್ವವನ್ನು ಅರಿಯದೆ ಮರೆಮಾಡುತ್ತಿದ್ದಾರೆ ಎಂದು ಮಲ್ಲೂರಹಳ್ಳಿ ಗ್ರಾಮದ ಕಲಾವಿದ D ರಾಜಣ್ಣ ಹೇಳಿದರು.

ತಾಲ್ಲೂಕಿನ ನಾಯಕನಹಟ್ಟಿ ಸಮೀಪದ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿಂದು ಶ್ರೀ ಕಲಾನಿಧಿ ಗ್ರಾಮೀಣಾ ಅಭಿವೃದ್ಧಿ ಸಂಸ್ಥೆ (ರಿ), ನಾಯಕನಹಟ್ಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪ್ರಯೋಜಿತ ಸುಗಮ ಸಂಗೀತ ಮತ್ತು ಜಾನಪದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಳ್ಳುವ ಇಂತಹ ಪ್ರಾಯೋಜಿತ ಸಂಗೀತ ಕಾರ್ಯಕ್ರಮಗಳು ಯುವಕರಲ್ಲಿ ಜಾಗೃತಿ ಮೂಡಿಸಿ ಜಾನಪದ ಸೊಗಡು, ಹಾಗೂ ಸಂಗೀತದ ಬಗ್ಗೆ ಅರಿವನ್ನು ಮೂಡಿಸಿ ಕಲಾ ಪ್ರಕಾರಗಳು ಮರೆಯಾಗದಂತೆ ಅವರಲ್ಲಿ ಆಸಕ್ತಿಯನ್ನು ಕೆರಳಿಸುವಂತೆ ಅಭಿಪ್ರೇರಣೆ ಹುಟ್ಟು ಹಾಕುತ್ತದೆ. ಸಂಗೀತಕ್ಕೆ ಮನಸೋಲದೆ ಇರುವ ವ್ಯಕ್ತಿ ಜಗತ್ತಿನಲ್ಲಿ ಇಲ್ಲ. ಸಂಗೀತ ನಮ್ಮಲ್ಲಿರುವ ಒತ್ತಡ, ಆತಂಕ ಹಾಗೂ ದ್ವೇಷ ಮುಂತಾದ ಗುಣಗಳನ್ನು ದೂರಮಾಡುವ ಶಕ್ತಿಯಿದೆ. ಇಂದಿನ ಮಕ್ಕಳು ಮುಂದಿನ ನಮ್ಮ ನಾಡು ನುಡಿ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕಲಾವಿದರಾಗಿ ನಿರ್ಮಾಣಗೊಂಡು ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಜಗದೀಶ್ ತಬಲವನ್ನು ನುಡಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ದರು.
ಗಾಯಕ ಶಿಕ್ಷಕರಾದ ನಾಗಭೂಷಣ್ ಕೆ.ಟಿ ಇವರು ವಿವಿಧ ಜಾನಪದ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಕಲಾವಿದ ಡಿ. ರಾಜಣ್ಣನವರು ತಮ್ಮ ಕಂಚಿನ ಕಂಠದಿಂದ ವಿವಿಧ ಗೀತೆಗಳನ್ನು ಹಾಡಿ ರಸದೌತಣವನ್ನು ನೀಡಿದರು.

ಶಿಕ್ಷಕರಾದ ವೀರಭದ್ರಪ್ಪ , ಓಂಕಾರಪ್ಪ, ಶಿವಕುಮಾರ್,ರಂಜಿತ, ರಮ್ಯ, ಮತ್ತು ಗಾಯಕಿಯಾದ ಬೇಬಿ ಶ್ಯಾಮಿಲಿ ಕಲಾವಿದರಾದ ಪವನ್, ಕೀರ್ತಿರಾಜ್, ಹಾಗೂ ಮತ್ತಿತರು ಹಾಜರಿದ್ದರು.

Share This Article
Enable Notifications OK No thanks