ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 08 : ಪ್ರಸನ್ನಾನಂದಪುರಿ ಸ್ವಾಮೀಜಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಗರ್ ಏರುಪೇರಾಗಿ ಅಸ್ವಸ್ಥರಾಗಿದ್ದ ಕಾರಣ, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರಿಗೆ ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಚಿಕತ್ಸೆ ಮುಂದುವರೆದಿದೆ. ಶ್ರೀಗಳನ್ನ ನೋಡುವುದಕ್ಕೆ ಭಕ್ತರ ದಂಡು ಹರಿದು ಬಂದಿದೆ. ಆದಷ್ಟು ಬೇಗ ಗುರುಗಳು ಚೇತರಿಕೆ ಕಾಣಲಿ ಎಂದು ಭಕ್ತರು ಹಾರೈಸಿದ್ದಾರೆ.
ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೂ ಪ್ರಸನ್ನಾನಂದ ಸ್ವಾಮೀಜಿ ಅವರು ಗೈರಾಗಿದ್ದರು. ಆರೋಗ್ಯದ ಸಮಸ್ಯೆಯ ಕಾರಣಕ್ಕೇನೆ ಕಾರ್ಯಕ್ರಮಕ್ಕೆ ಅವರು ಬಂದಿರಲಿಲ್ಲ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಪ್ರಸನ್ನಾನಂದಪುರಿಶ್ರೀ ಆರೋಗ್ಯದ ಬಗ್ಗೆ ಬಸವೇಶ್ವರ ಆಸ್ಪತ್ರೆಯ ವೈದ್ಯ ಡಾ.ವಿಶ್ವಾಸ್ ಪ್ರತಿಕ್ರಿಯೆ ನೀಡಿದ್ದು, ವಾಲ್ಮೀಜಿ ಶ್ರೀಗಳಿಗೆ ಶುಗರ್ ಅನ್ ಕಂಟ್ರೋಲ್ಡ್ ಆಗಿತ್ತು. ಆಸ್ಪತ್ರೆಗೆ ಬಂದಾಗ ಶುಗರ್ ಲೆವೆಲ್ 440 ಆಗಿತ್ತು. ಜೊತೆಗೆ ಜ್ವರ ಕೂಡ ಬಂದಿತ್ತು. ಸದ್ಯ ಚಿಕಿತ್ಸೆ ಬಳಿಕ ಈಗ ಶುಗರ್ ಲೆವೆಲ್ 160 ಕ್ಕೆ ಬಂದಿದೆ. ಶ್ರೀಗಳಿಗೆ ಇನ್ನೂ ಕೆಲ ಪರೀಕ್ಷೆಗಳನ್ನು ಮಾಡಿಸಬೇಕಿದೆ. ಆದ್ರೆ ಆಸ್ಪತ್ರೆಗೆ ಭಕ್ತರು ಬರುತ್ತಿರುವುದರಿಂದ ಶ್ರೀಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಯೋಚನೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಆರೋಗ್ಯದಿಂದ ಚೇತರಿಸಿಕೊಂಡ ಬಳಿಕ ಶ್ರೀಗಳೇ ಮಾತನಾಡಿದ್ದು, ಅಕ್ಟೋಬರ್ 6ರಂದು ಕಾರ್ಯಕ್ರಮ ನಿಮಿತ್ತ ಚಿತ್ರದುರ್ಗಕ್ಕೆ ಬಂದಿದ್ದೆನು. ಮಾಚಿದೇವ ಮಠದ ಬಳಿ ವಾಕಿಂಗ್ ಮಾಡುವಾಗ ಸುಸ್ತಾದಂತೆ ಆಯಿತು. ಅಂದು ಮಾಚಿದೇವ ಮಠದಲ್ಲಿ ಉಳಿದು ವಿಶ್ರಾಂತಿ ಪಡೆದೆವು. ಬೆಳಗ್ಗೆ ಮತ್ತೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದೆನು. ವೈದ್ಯರ ಸೂಚನೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದಿದ್ದಾರೆ.




