ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿಚಾರಗಳು ಚರ್ಚೆಯಾಗುತ್ತಲೆ ಇದಾವೆ. ಅದರಲ್ಲೂ ಪವರ್ ಶೇರಿಂಗ್ ಬಗ್ಗೆ. ಸಿದ್ದರಾಮಯ್ಯ ಅವರು ಸದ್ಯಕ್ಕೆ ಸಿಎಂ ಹುದ್ದೆಯಲ್ಲಿದ್ದಾರೆ. ಈ ಅಧಿಕಾರಾವಧಿಯಲ್ಲಿಯೇ ಡಿಕೆ ಶಿವಕುಮಾರ್ ಅವರಿಗೂ ಬಿಟ್ಟುಕೊಡಬೇಕು ಎಂಬ ಒಪ್ಪಂದ ಆಗಿದೆ ಎನ್ನುತ್ತಿದ್ದಾರೆ ಹಲವರು. ಆದರೆ ಈ ಬಗ್ಗೆ ಡಿಕೆ ಶಿವಕುಮಾರ್ ಅವರೇ ಅಂಥದ್ದೆಲ್ಲ ಏನಿಲ್ಲ, ನಮ್ಮ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ ಎಂದು ಆಶ್ವಾಸನೆ ನೀಡಿದ್ದಾರೆ. ಆದರೂ ಚರ್ಚೆಯಾಗುತ್ತಿರುವ ಪವರ್ ಶೇರಿಂಗ್, ಅಧಿಕಾರ ತಿಕ್ಕಾಟದ ಬಗ್ಗೆ ಇದೀಗ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ರಣದೀಪ್ ಸಿಂಗ್ ಸುರ್ಜೆವಾಲ ಪ್ರತಿಕ್ರಿಯೆ ನೀಡಿದ್ದಾರೆ.
ಕೆಪಿಸಿಸಿ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಸುರ್ಜೆವಾಲ್, ನೀವೂ ಒಗ್ಗಟ್ಟಿನ ಸರ್ಕಾರದ ಬಗ್ಗೆ ಪ್ರಶ್ನೆ ಕೇಳುತ್ತಿದ್ದೀರಿ. ನಮ್ಮದು ಒಗ್ಗಟ್ಟಿನ ಸರ್ಕಾರ. ನಮ್ಮಲ್ಲಿ ಒಗ್ಗಟ್ಟಿದೆ. ಏನೇ ಇದ್ದರು ಹೈಕಮಾಂಡ್ ನಿಂದ ಸಂದೇಶ ಬರುತ್ತದೆ. ಇದೆಲ್ಲಾ ಏನೇ ಇದ್ದರು ಒಂದು ಗುಂಪಿನ ಮಾಧ್ಯಮಗಳ ಸೃಷ್ಟಿಯಷ್ಟೇ.
ಕರ್ನಾಟಕ ಸರ್ಕಾರದ ಗ್ಯಾರಂಟಿಗಳು ಜನರಲ್ಲಿ ವಿಶ್ವಾಸ ಮೂಡಿಸಿದೆ. ಆದರೆ ಬಿಜೆಪಿಯಲ್ಲು ಎಲ್ಲಾ ನಾಯಕರು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಅವರು ತಮ್ಮ ಭಿನ್ನಾಭಿಪ್ರಾಯ ಮುಚ್ಚಿ ಹಾಕಿಕೊಳ್ಳಲು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಅವರು ಕಾಂಗ್ರೆಸ್ ಸರ್ಕಾರ, ಡಿಕೆಶಿ ವಿರುದ್ಧ ಅಟ್ಯಾಕ್ ಮಾಡಲು ಆಗುತ್ತಿಲ್ಲ. ಹಾಗಾಗಿ ಕರ್ನಾಟಕ ಜನತೆಯ ಮೇಲೆ ರಾಜಕೀಯ ದಾಳಿ ಮಾಡ್ತಿದ್ದಾರೆ. ಇವತ್ತಿನ ಸಭೆ ಜೈ ಬಾಪೂ, ಜೈ ಭೀಮ್, ಜೈ ಸಂವಿಧಾನದ ಸಮಾವೇಶದ ಸಿದ್ಧತಾ ಸಮಾವೇಶ ಸಭೆಯಾಗಲಿದೆ. ಅಮಿತ್ ಶಾ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ. ದೇಶದ ಎಸ್ಸಿ/ಎಸ್ಟಿ ಸಮುದಾಯದ ಜನರಿಗೆ ಅಪಮಾನ ಮಾಡಿದ್ದಾರೆ. ಅಮಿತ್ ಶಾ ಅವರ ರಾಜೀನಾಮೆ ಕೇಳಿದ್ದೇವೆ ಎಂದಿದ್ದಾರೆ.










