ಬೆಂಗಳೂರು: ಬಾಗಲಕೋಟೆ ಶಾಸಕ ಹೆಚ್ ವೈ ಮೇಟಿ ಅವರು ಅನಾರೋಗ್ಯದ ಸಮಸ್ಯೆಯಿಂದ ಇಂದು ನಿಧನರಾಗಿದ್ದಾರೆ. ಸಿದ್ದರಾಮಯ್ಯ ಅವರಿಗೆ ಆತ್ಮೀಯರಾಗಿದ್ದರು. ಆಪ್ತ ಸ್ನೇಹಿತನನ್ನ ಕಳೆದುಕೊಂಡ ಸಿಎಂ ಸಿದ್ದರಾಮಯ್ಯ ಅವರು ದುಃಖದಲ್ಲಿದ್ದಾರೆ. ಮೌನವಾಗಿ ಮಲಗಿದ್ದ ಮೇಟಿ ಅವರನ್ನು ಕಂಡು ಸಿದ್ದರಾಮಯ್ಯ ಅವರು ಕಣ್ಣೀರಾಕಿದ್ದಾರೆ.
ಈ ವೇಳೆ ನಾತನಾಡಿದ ಸಿದ್ದರಾಮಯ್ಯ ಅವರು, ನಿಷ್ಠಾವಂತ ರಾಜಕಾರಣಿಯಾಗಿದ್ದ ಮೇಟಿಯವರು ನನಗೆ ಅತ್ಯಂತ ಆಪ್ತರಾಗಿದ್ದರು. ನಾನು ಮೂರು ದಿನಗಳ ಹಿಂದೆ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದೆ. ವೈದ್ಯರು ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ತಿಳಿಸಿದ್ದರು. ಆದರೆ ಮೇಟಿಯವರು ಇಷ್ಟು ಬೇಗ ಇಹಲೋಕ ತ್ಯಜಿಸುತ್ತಾರೆ ಎಂದು ಭಾವಿಸಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
1996ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ ಮಾಡುವಂತೆ ಮೇಟಿಗೆ ಹೇಳಿದ್ದೆ. ಆಗ ಸಚಿವರಾಗಿದ್ದರೂ ಕೂಡ ಲೋಕಸಭೆಗೆ ಸ್ಪರ್ಧೆ ಮಾಡಿ ಗೆದ್ದರು. ನನ್ನ ಮಾತು ಕೇಳುತ್ತಿದ್ದರು. ಅತ್ಯಂತ ನಿಷ್ಠಾವಂತ ರಾಜಕಾತಣಿಯಾಗಿದ್ದು, ನನಗೆ ಅತ್ಯಂತ ಆಪ್ತರಾಗಿದ್ದರು. ಮೇಟಿಯವರು ಅರಣ್ಯ ಸಚಿವರಾಗಿ, ಸಂಸದರಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಮೂಲತಃ ಕೃಷಿಕರಾಗಿದ್ದ ಮೇಟಿಯವರು ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರೀಯರಾಗಿದ್ದರು. 1989 ರಲ್ಲಿ ಗುಳೇದಗುಡ್ಡ ಕ್ಷೇತ್ರದಿಂದ ಶಾಸಕರಾಗಿ ಸ್ಪರ್ಧಿಸಿ ಮೂರು ಬಾರಿ ಶಾಸಕರಾಗಿದ್ದರು. ಜನಪರ ಕಾಳಜಿಯಿಂದ ಸೇವೆ ಸಲ್ಲಿಸುತ್ತಿದ್ದ ಮೇಟಿಯವರು ಮಂತ್ರಿಯಾಗಿರಲಿ, ಸಂಸದರಾಗಿ, ಶಾಸಕರಾಗಿರಲಿ, ಪಕ್ಷಕ್ಕೆ ನಿಷ್ಠೆಯಿಂದ ದುಡಿಯುವಂತಹ ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂದರು ಸಿಎಂ ಸಿದ್ದರಾಮಯ್ಯ
ಹೆಚ್.ವೈ.ಮೇಟಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಿದ್ದರಾಮಯ್ಯ ಅವರು ಕಣ್ಣೀರು ಹಾಕಿದರು. ಪಾರ್ಥಿವ ಶರೀರದ ಎದುರು ನಿಂತ ಮೇಟಿ ಅವರ ಪತ್ನಿ ಹಾಗೂ ಮಗಳನ್ನು ನೋಡಿ ಮತ್ತಷ್ಟು ದುಃಖಿತರಾದರು. ಬಾಗಲಕೋಟೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಾಳೆ ಮೇಟಿ ಅವರ ಅಂತ್ಯಸಂಸ್ಕಾರ ನಡೆಯಲಿದೆ.
