ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಆ. 26 : ಮಹಿಳೆಯರು ಕುಟುಂಬಕ್ಕೆ ಮತ್ತು ಮಕ್ಕಳಿಗೆ ಸ್ಪೂರ್ತಿಯಾಗಿರಬೇಕು. ತಾಯಂದಿರ ನಡವಳಿಕೆಯನ್ನು ನೋಡಿ ಮಕ್ಕಳು ಬೆಳೆಯುವುದರಿಂದ, ಮನೆಯಲ್ಲಿ ಶ್ರದ್ಧೆ ಹಾಗೂ ಉತ್ತಮ ವಾತಾವರಣ ನಿರ್ಮಿಸುವುದು ಅತ್ಯಗತ್ಯ ಎಂದು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀಮತಿ ರುಕ್ಕಮ್ಮ ಬಿ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ) ಚಿತ್ರದುರ್ಗ ತಾಲ್ಲೂಕು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ನಗರದ ಕರುವಿನಕಟ್ಟೆ ವೃತ್ತದಲ್ಲಿನ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಮರದ ಶಾಲಾ ಅವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಶಕ್ತಿ ಹಾಗೂ ಕುಟುಂಬದ ಜವಾಬ್ದಾರಿ: ಮಹಿಳೆಯರು ತಮ್ಮ ಬುದ್ಧಿವಂತಿಕೆ, ಶ್ರಮ ಮತ್ತು ಛಲದಿಂದ ಉನ್ನತ ಮಟ್ಟಕ್ಕೆ ಬೆಳೆಯಬಹುದು. ಮಕ್ಕಳಿಗೆ ನೀಡುವ ನಿಜವಾದ ಆಸ್ತಿ ಶಿಕ್ಷಣವಾಗಿದೆ. ಆಸ್ತಿ-ಪಾಸ್ತಿಗಳನ್ನು ಕಳೆದುಕೊಳ್ಳಬಹುದು ಆದರೆ ವಿದ್ಯೆಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಪೋಷಕರು ಮೊಬೈಲ್ ಮತ್ತು ಟಿವಿ ವೀಕ್ಷಣೆಯನ್ನು ಕಡಿಮೆ ಮಾಡಿ, ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಮಹಿಳೆಯರಿಗೆ ಕರೆ ನೀಡಿದರು.
ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಸಹಿ ಮಾಡುವುದನ್ನು ಕಲಿಯುವುದರ ಜೊತೆಗೆ, ಸ್ವಂತ ದುಡಿಮೆಯ ಮೂಲಕ ಸ್ವಾವಲಂಬನೆ ಸಾಧಿಸುತ್ತಿರುವುದು ಪ್ರಶಂಸನೀಯ.ಗೃಹಹಿಂಸೆ ಅಥವಾ ಯಾವುದೇ ತೊಂದರೆಗಳು ಎದುರಾದಾಗ ಮಹಿಳೆಯರು ಹೆದರದೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು. ಪೊಲೀಸರು ಆರಂಭದಲ್ಲಿ ಕೌನ್ಸೆಲಿಂಗ್ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಾರೆ. ತುರ್ತು ಸಂದರ್ಭಗಳಲ್ಲಿ 112 ಸಹಾಯವಾಣಿಗೆ ಕರೆ ಮಾಡಿದರೆ 10 ನಿಮಿಷಗಳಲ್ಲಿ ಪೊಲೀಸ್ ವಾಹನ ಸ್ಥಳಕ್ಕೆ ತಲುಪಲಿದೆ. ಕರೆ ಮಾಡಿದವರ ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ ಎಂದು ತಿಳಿಸಿದ ಅವರು. ಮಹಿಳೆಯರು ಕುಟುಂಬಕ್ಕೆ ಮತ್ತು ಮಕ್ಕಳಿಗೆ ಸ್ಪೂರ್ತಿಯಾಗಿರಬೇಕು. ತಾಯಂದಿರ ನಡವಳಿಕೆಯನ್ನು ನೋಡಿ ಮಕ್ಕಳು ಬೆಳೆಯುವುದರಿಂದ, ಮನೆಯಲ್ಲಿ ಶ್ರದ್ಧೆ ಹಾಗೂ ಉತ್ತಮ ವಾತಾವರಣ ನಿರ್ಮಿಸುವುದು ಅತ್ಯಗತ್ಯ ಎಂದು ತಿಳಿಸಿದರು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳಿಗೆ ಮದುವೆ ಮಾಡುವುದು ಕಾನೂನುಬಾಹಿರ. ಬಾಲ್ಯವಿವಾಹ ಮಾಡುವುದರಿಂದ ಪೋಕ್ಸೋ ಕಾಯ್ದೆಯಡಿ ಪೋಷಕರು ಹಾಗೂ ಮದುವೆಗೆ ಸಹಕರಿಸಿದ ಎಲ್ಲರ ಮೇಲೆಯೂ ಪ್ರಕರಣ ದಾಖಲಾಗುತ್ತದೆ. ಅಪ್ರಾಪ್ತರಿಗೆ ವಾಹನಗಳನ್ನು ನೀಡಬಾರದು ಮತ್ತು ಹೆಲ್ಮೆಟ್ ಧಾರಣೆ ಕಡ್ಡಾಯವಾಗಿರಬೇಕು ಎಂದು ಸೂಚಿಸಿ ಸಮಾಜದಲ್ಲಿ ಕಾನೂನು ಅರಿವು ಮೂಡಿಸುವ ಮೂಲಕ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಕರೆ ನೀಡಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯ ಸಾರ್ವಜನಿಕರಿಗಾಗಿ ತಮ್ಮಗೆ ಏನಾದರೂ ತೊಂದರೆಯಾದರೆ ನನ್ನ ವೈಯಕ್ತಿಕ ಸಂಪರ್ಕ ಸಂಖ್ಯೆಯನ್ನು (9945269544) ಸಂಪರ್ಕ ಮಾಡಬಹುದೆಂದು ತಿಳಿಸಿದರು.
ಮಹಿಳೆಯ ಹಕ್ಕು ಮತ್ತು ಕಾನೂನು ಮಾಹಿತಿ ಬಗ್ಗೆ ಎಸ್.ಜೆ.ಎಂ. ಕಾನೂನು ಕಾಲೇಜ್ನ ಸಹಾಯಕ ಪ್ರೋಫೆಸರ್ ಶ್ರೀಮತಿ ಸುಮನ ಎಸ್ ಅಂಗಡಿ ಮಹಿಳಾ ಸಬಲೀಕರಣ, ಮಕ್ಕಳ ಶಿಕ್ಷಣ ಹಾಗೂ ಕಾನೂನು ಅರಿವಿನ ಕುರಿತು ಉಪನ್ಯಾಸ ನೀಡಿ ಹಿಂದಿನ ಕಾಲದಲ್ಲಿ ಮಹಿಳೆಯರ ಸ್ಥಿತಿ ಶೋಚನೀಯವಾಗಿತ್ತು, ಅವರಿಗೆ ಸರಿಯಾದ ರೀತಿಯಲ್ಲಿ ಸ್ವಾತಂತ್ರ್ಯ ಇರಲಿಲ್ಲ, ಮನೆ ಹಾಗೂ ದೇವಾಲಯಗಳಿಗೆ ಮಾತ್ರ ಪ್ರವೇಶ ಇತ್ತು, ಮಹಿಳೆಗೆ ಸರಿಯಾದ ರೀತಿಯಲ್ಲಿ ಗೌರವ ಸಿಗುತ್ತಿರಲಿಲ್ಲ, ಮತದಾನದ ಹಕ್ಕು ಸಹಾ ಇರಲಿಲ್ಲ ದೇಶದಲ್ಲಿ ಸಂವಿಧಾನ ರಚನೆಯಾದ ಮೇಲೆ ಮಹಿಳೆಯರಿಗೆ ಎಲ್ಲಾ ರೀತಿಯಾದ ಸ್ಥಾನಗಳು, ಹಕ್ಕುಗಳು, ಗೌರವಗಳು ದೊರಕುವಂತಾದವು, ಕೆಲಸದಲ್ಲಿ ಜಾಗದಲ್ಲಿ ಪುರುಷ ಹಾಗೂ ಮಹಿಳೆ ಎಂಬ ತಾರತಮ್ಯ ಇತ್ತು ಇದನ್ನು ಹೋಗಲಾಡಿಸಿದ್ದ ಸಂವಿಧಾನ, ಇದೇ ರೀತಿ ಮಹಿಳೆಯರಿಗೆ ಮತದಾನದ ಹಕ್ಕು, ಸ್ತ್ರಿ ಸ್ವಾತಂತ್ರ್ಯ, ಸಮಾನ ಕೆಲಸಕ್ಕೆ ಸಮಾನ ವೇತನ, ಹೋರಾಟದ ಹಕ್ಕು, ರಕ್ಷಣೆಯ ಹಕ್ಕು ಸೇರಿದಂತೆ ವಿವಿಧ ರೀತಿಯ ಸೌಲಭ್ಯಗಳು ಸಂವಿಧಾನದ ಮೂಲಕ ಮಹಿಳೆಯರಿಗೆ ಸಿಕ್ಕಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ)ನ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಗೀತಾ, ಮಾತನಾಡಿ ಜ್ಞಾನವಿಕಾಸ ಕಾರ್ಯಕ್ರಮಗಳ ಮಹತ್ವ ಮತ್ತು ರೂಪ ರೇಖೆಗಳ ಬಗ್ಗೆ ಕ್ಷೇತ್ರದ ಹಿನ್ನೆಲೆ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿ ಮಾತೃಶ್ರೀ ಅಮ್ಮನವರ ಕನಸಿನ ಕೂಸಾದ ಜ್ಞಾನ ವಿಕಾಸ ಕಾರ್ಯಕ್ರಮಗಳ ಮಹತ್ವದ ಬಗ್ಗೆ ಹಾಗೂ ಕೇಂದ್ರದಲ್ಲಿರುವ ಪ್ರತಿ ತಿಂಗಳ ಕಾರ್ಯಕ್ರಮಗಳ ಮಹತ್ವ ಹಾಗೂ ಉಪಯೋಗದ ಬಗ್ಗೆ ಹಾಗೂ ಸಂಸ್ಥೆಯ ಕಾರ್ಯ ವೈಖರಿಯ ಬಗ್ಗೆ ಕೇಂದ್ರ ಸದಸ್ಯರಿಗೆ ಮಾರ್ಗದರ್ಶನ ನೀಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್(ರಿ)ನ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ರೂಪ ಜನಾರ್ಧನ್ ವಹಿಸಿದ್ದರು, ಜಿಲ್ಲಾ ನಿರ್ದೆಶಕರಾದ ಕಮಲಾಕ್ಷ, ಯೋಜನಾಧಿಕಾರಿಗಳಾದ ಶ್ರೀಮತಿ ರತ್ನ ಚಂದ್ರಮ್ಮ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆ, ಪುಷ್ಪಗುಚ್ಚ ಸ್ಪರ್ದೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾ ಯಿತು, ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ನ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು ರೇಣುಕಮ್ಮ ಪ್ರಾರ್ಥಿಸಿದರೆ, ಚಂದ್ರಹಾಸ್ ಸ್ವಾಗತಿಸಿದರು.











