ಸುದ್ದಿಒನ್, ಚಿತ್ರದುರ್ಗ, ನವೆಂಬರ್.14 : ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಕಳೆದ ಆಗಸ್ಟ್ನಲ್ಲಿ ‘ಪರೀಕ್ಷಾ ಪೇ ಚರ್ಚಾ’ ಸಂವಾದ ಕಾರ್ಯಕ್ರಮ ನಡೆಸಲಾಗಿತ್ತು. ಈ ಸಂವಾದದಲ್ಲಿ ಪಾಲ್ಗೊಂಡಿದ್ದ ಚಿತ್ರದುರ್ಗದ ಪಾಲಕರೊಬ್ಬರಿಗೆ ಪ್ರಧಾನಿ ಕಚೇರಿಯಿಂದ ಮೆಚ್ಚುಗೆಯ ಪತ್ರ ಬಂದಿದೆ.
ತಾಲ್ಲೂಕಿನ ಕುಂಚಿಗನಾಳ್ ವಾಸಿ ಕಣುಮಪ್ಪ ಪಿ. ಅರಣ್ಯ ಇಲಾಖೆಯಲ್ಲಿ ಕಳೆದ 16 ವರ್ಷಗಳಿಂದ ಆಡುಮಲ್ಲೇಶ್ವರ ಚೆಕ್ ಪೋಸ್ಟ್ ಬಳಿ ರಕ್ಷಣಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ನವೆಂಬರ್ 05 ರಂದು ಪ್ರಧಾನಿ ಕಚೇರಿಯಿಂದ ಪತ್ರ ಬಂದಿದೆ. ಆ ಪತ್ರದ ಸಾರಾಂಶ ಈ ಕೆಳಗಿನಂತಿದೆ.
ಪರೀಕ್ಷಾ ಪೆ ಚರ್ಚಾ’ದಲ್ಲಿ ಪೋಷಕರಾಗಿ ನಿಮ್ಮ ಉತ್ಸಾಹಭರಿತ ಉಲ್ಗೊಳ್ಳುವಿಕೆ ನಿಜವಾಗಿಯೂ ಹೃದಯಸ್ಪರ್ಶಿಯಾಗಿದೆ.
ನಿಮ್ಮ ಪಾಲ್ಗೊಳ್ಳುವಿಕೆಯು ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಮಾತ್ರವಲ್ಲದೇ ನಮ್ಮ ಯುವ ಪೀಳಿಗೆ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ನೀವು ಹೊಂದಿರುವ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ.
ಮಾರ್ಗದರ್ಶಿಗಳು ಮತ್ತು ಪೋಷಕರಾಗಿ, ಪ್ರತಿಯೊಂದು ಹಂತದಲ್ಲೂ ಮಕ್ಕಳಿಗೆ ನೀವು ಅತ್ಯಂತ ಸ್ಫೂರ್ತಿ ನೀಡುತ್ತೀರಿ ಮತ್ತು ಅವರ ಆತ್ಮವಿಶ್ವಾಸ ವನ್ನು ಬಲಗೊಳಿಸಲು ನೆರವಾಗುತ್ತೀರಿ ಎಂದು ನನ್ನ ದೃಢವಾದ ನಂಬಿಕೆ.
21ನೇ ಶತಮಾನ ಅವಕಾಶಗಳ ಯುಗ. ಬಾಹ್ಯಾಕಾಶದಿಂದ ಕ್ರೀಡೆಯವರೆಗೆ, ನವೋದ್ಯಮಗಳಿಂದ ತಂತ್ರಜ್ಞಾನದವರೆಗೆ, ತಾಂತ್ರಿಕತೆಯಿಂದ ಕಲೆಯವರೆಗೆ, ಯುವ ಸಮೂಹಕ್ಕೆ ಪ್ರಜ್ವಲಿಸಲು ಹಲವಾರು ಮಾರ್ಗಗಳಿವೆ. ಅಸಾಧಾರಣ ಕೌಶಲ್ಯ ಮತ್ತು ಅಪಾರ ಶಕ್ತಿಯುಳ್ಳ ಈಗಿನ ಯುವ ಸಮೂಹಕ್ಕೆ ಯಾವುದೇ ಕನಸನ್ನು ನನಸಾಗಿಸುವುದು ಅಸಾಧ್ಯವಲ್ಲ.
ಭವ್ಯ, ಸ್ವಾವಲಂಬಿ ಭಾರತ ನಿರ್ಮಿಸಲು ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಸಮರ್ಪಣ ಭಾವದ ಪ್ರಯತ್ನಗಳಿಗೆ ಇದೊಂದು ಅವಕಾಶ, ಇದು ನಮ್ಮ ಯುವ ಸಮೂಹಕ್ಕೆ ಮಾತ್ರವಲ್ಲದೇ ದೇಶದ ಭವಿಷ್ಯವೂ ರೂಪಿಸುವ ನಿರ್ಣಾಯಕ ಅವಧಿಯಾಗಿದೆ.
ಸಾಮೂಹಿಕ ಸಂಕಲ್ಪ ಮತ್ತು ಪ್ರಯತ್ನಗಳಿಗಾಗಿ ನಾವೆಲ್ಲರೂ ಒಟ್ಟಿಗೆ ಮುನ್ನಡೆಯೋಣ, ರಾಷ್ಟ್ರದ ಅಭ್ಯುದಯದಲ್ಲಿ ಎಲ್ಲರೂ ಸಕ್ರಿಯ ಪಾಲುದಾರರಾಗುತ್ತೇವೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ.
ಸದಾಶಯಗಳು ಮತ್ತು ಶುಭ ಹಾರೈಕೆಗಳೊಂದಿಗೆ
ಸಹಿ/- ನರೇಂದ್ರ ಮೋದಿ
ಪ್ರಧಾನಿ ಕಚೇರಿಯಿಂದ ಪತ್ರ ಬಂದಿರುವ ಕುರಿತು ಸುದ್ದಿಒನ್ ಗೆ ಪ್ರತಿಕ್ರಿಯೆ ನೀಡಿದ ಕಣುಮಪ್ಪ, ನನ್ನ ಮಗಳು ನಗರದ ಸ್ಟೆಪ್ಪಿಂಗ್ ಸ್ಟೋನ್ ಶಾಲೆಯಲ್ಲಿ 9 ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದು, ಪರೀಕ್ಷಾ ಪೇ ಚರ್ಚಾದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಮುಂಚಿತವಾಗಿ ನೋಂದಣಿ ಮಾಡಿಸಿದ್ದೆ. ಸುಮಾರು ನಾಲ್ಕು ತಿಂಗಳ ಹಿಂದೆ ನನಗೆ ಒಂದು ಕರೆ ಬಂದಿತ್ತು. ಆ ಕರೆಗೆ ನಾನು ಉತ್ತರಿಸಿದ್ದೆ. ಅದಾದ ನಂತರ ಎರಡು ಮೂರು ಬಾರಿ ಅವರ ಕರೆಗೆ ಪ್ರತಿಕ್ರಿಯೆ ನೀಡುತ್ತಿದ್ದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಕಚೇರಿಯಿಂದ ನನಗೆ ಪತ್ರ ಬರುತ್ತದೆಯೆಂಬ ನಿರೀಕ್ಷೆ ಇರಲಿಲ್ಲ. ಪತ್ರ ನೋಡಿ ಅಚ್ಚರಿ ಹಾಗೂ ಸಂತೋಷ ಎರಡೂ ಆಯಿತು. ಪ್ರಧಾನ ಮಂತ್ರಿಗಳ ಕಚೇರಿಯಿಂದ ಬಂದ ಪತ್ರ ನಮಗೆ ಇನ್ನಷ್ಟು ಸಂತಸ ಮೂಡಿಸಿದೆ. ಈ ಪತ್ರ ಬಂದ ನಂತರ ಎಲ್ಲರೂ ನನಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















