Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದ ಜಲಾಶಯಗಳಲ್ಲಿ ಶೇ. 44 ರಷ್ಟು ಮಾತ್ರ ನೀರು: ಭೀಕರ ಅಭಾವದ ಮುನ್ನೆಚ್ಚರಿಕೆ

---Advertisement---

ಚಿತ್ರದುರ್ಗ. ಜು.25: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆಯು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಗಣನೀಯವಾಗಿ ಕುಸಿತ ಕಂಡಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಜುಲೈ 22 ರವರೆಗಿನ ಅಂಕಿ-ಅಂಶಗಳನ್ನು ಗಮನಿಸಿದರೆ ರಾಜ್ಯದ ಜಲಮೂಲಗಳ ಸ್ಥಿತಿ ಕಳವಳಕಾರಿಯಾಗಿದೆ.

​ನೀರಿನ ಸಂಗ್ರಹಣೆ ಕುಸಿತ:

ರಾಜ್ಯದ ಜಲಾಶಯಗಳ ಒಟ್ಟು ಗರಿಷ್ಠ ಸಂಗ್ರಹಣಾ ಸಾಮರ್ಥ್ಯ 895.65 ಟಿ.ಎಂ.ಸಿ ಇದ್ದು, ಪ್ರಸ್ತುತ ಜಲಾಶಯಗಳಲ್ಲಿ ಕೇವಲ 392.02 ಟಿ.ಎಂ.ಸಿ ನೀರು ಮಾತ್ರ ಸಂಗ್ರಹವಾಗಿದೆ. ಇದು ಒಟ್ಟು ಸಾಮರ್ಥ್ಯದ ಶೇಕಡಾ 44 ರಷ್ಟು ಮಾತ್ರ. ಆದರೆ, ಕಳೆದ ವರ್ಷ ಇದೇ ವೇಳೆಗೆ ಜಲಾಶಯಗಳಲ್ಲಿ 689.73 ಟಿ.ಎಂ.ಸಿ ನೀರು ಸಂಗ್ರಹವಿತ್ತು.

ಜಲ ವಿದ್ಯುತ್ ಉತ್ಪಾದನೆ ಮಾರಕ:

​ಜಲ ವಿದ್ಯುತ್ ಜಲಾಶಯಗಳಾದ ಲಿಂಗನಮಕ್ಕಿ, ಸುಪಾ, ವಾರಾಹಿ ಇವುಗಳ ಒಟ್ಟು ಸಂಗ್ರಹಣಾ ಸಾಮರ್ಥ್ಯ 328.21 ಟಿ.ಎಂ.ಸಿ ಆಗಿದ್ದು, ಪ್ರಸ್ತುತ ಕೇವಲ 87.81 ಟಿ.ಎಂ.ಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 209.14 ಟಿ.ಎಂ.ಸಿ ನೀರು ಸಂಗ್ರಹವಿತ್ತು. ವಿಶೇಷವಾಗಿ ಲಿಂಗನಮಕ್ಕಿಯಲ್ಲಿ ಕಳೆದ ವರ್ಷ 106.40 ಟಿ.ಎಂ.ಸಿ ನೀರಿದ್ದರೆ, ಈ ವರ್ಷ ಕೇವಲ 36.10 ಟಿ.ಎಂ.ಸಿ ನೀರಿದೆ. ಇದು ಜಲ ವಿದ್ಯುತ್ ಉತ್ಪಾದನೆ ಮಾರಕ ಎನಿಸಲಿದೆ.

ಕಾವೇರಿ ಕಣಿವೆಯಲ್ಲಿ ಬರದ ಛಾಯೆ:

ಕಾವೇರಿ ಕಣಿವೆಯ ಹಾರಂಗಿ, ಹೇಮಾವತಿ, ಕೆ.ಆರ್.ಎಸ್, ಕಬಿನಿ ಜಲಾಶಯಗಳ ಒಟ್ಟು ಸಾಮರ್ಥ್ಯ 114.57 ಟಿ.ಎಂ.ಸಿ ಆಗಿದ್ದು, ಪ್ರಸ್ತುತ 59.91 ಟಿ.ಎಂ.ಸಿ (ಶೇ. 52) ಸಂಗ್ರಹವಿದೆ. ಕಳೆದ ವರ್ಷ ಇದೇ ಸಮಯದಲ್ಲಿ 110.80 ಟಿ.ಎಂ.ಸಿ ಭರ್ತಿಯಾಗಿತ್ತು. ಬೆಂಗಳೂರು ವಿಭಾಗದ ಪ್ರಮುಖ ಜಲಾಶಯದ ಕೆ.ಆರ್.ಎಸ್‌ನಲ್ಲಿ ಕಳೆದ ವರ್ಷ 47.58 ಟಿ.ಎಂ.ಸಿ ನೀರಿದ್ದರೆ, ಪ್ರಸ್ತುತ ಕೇವಲ 17.32 ಟಿ.ಎಂ.ಸಿ ನೀರು ಮಾತ್ರ ಲಭ್ಯವಿದೆ. ಈ ವರ್ಷ ಕಾವೇರಿ ಕಣಿವೆಯಲ್ಲಿ ಬರದ ಛಾಯೆ ಆವರಿಸುವುದು ಸ್ಪಷ್ಟ.

ಕೃಷ್ಣಾ ಕಣಿವೆಯಲ್ಲಿ ಅರ್ಧಕ್ಕೆ ಕುಸಿದ ಜಲಾಶಯಗಳ ಒಡಲು:

ಕೃಷ್ಣಾ ಕಣಿವೆಯ ಭದ್ರಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಒಡಲು ಅರ್ಧದಷ್ಟು ಮಾತ್ರ ಭರ್ತಿಯಾಗಿದೆ. ಈ ಕಣಿವೆಯ ಜಲಾಶಯಗಳ ಸಂಗ್ರಹಣಾ ಸಾಮರ್ಥ್ಯ 422.45 ಟಿ.ಎಂ.ಸಿ ಇದ್ದು, ಪ್ರಸ್ತುತ 220.86 ಟಿ.ಎಂ.ಸಿ (ಶೇ. 52) ನೀರಿದೆ. ಕಳೆದ ವರ್ಷ 346.35 ಟಿ.ಎಂ.ಸಿ ಯಷ್ಟು ನೀರಿತ್ತು.ತುಂಗಭದ್ರ ಜಲಾಶಯದಲ್ಲಿ ಕಳೆದ ವರ್ಷ 79.40 ಟಿ.ಎಂ.ಸಿ ಇದ್ದುದ್ದು, ಈ ಬಾರಿ ಕೇವಲ 26.45 ಟಿ.ಎಂ.ಸಿಗೆ ಕುಸಿದಿದೆ.

ವಾಣಿವಿಲಾಸ ಸಾಗರವಷ್ಟೇ ಸಮಾಧನರ :

ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಾಗರ ಜಲಾಶಯದ ಒಟ್ಟು ಸಂಗ್ರಹಣಾ ಸಾಮರ್ಥ್ಯ 30.42 ಟಿ.ಎಂ.ಸಿ ಆಗಿದ್ದು, ಪ್ರಸ್ತುತ 23.44 ಟಿ.ಎಂ.ಸಿ (ಶೇ. 77) ನೀರು ಸಂಗ್ರಹವಾಗಿದೆ. ಕಳೆದ ವರ್ಷದ ಈ ಅವಧಿಯಲ್ಲೂ ಸಹ ಇಲ್ಲಿ 23.44 ಟಿ.ಎಂ.ಸಿಯಷ್ಟೇ ನೀರು ಸಂಗ್ರಹವಿತ್ತು. ಇದೊಂದು ಮಾತ್ರ ಜಲಾಶಯಗಳ ಪೈಕಿ ಸಮಾಧಾನಕ ಅಂಶವಾಗಿದೆ.

ಮುನ್ನೆಚ್ಚರಿಕೆಯ ಕರಗಂಟೆ:

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಹರಿವು ಹೆಚ್ಚುತ್ತಿದೆ. ಪ್ರಸ್ತುತ ಒಟ್ಟು ಒಳಹರಿವು 1,36,184 ಕ್ಯೂಸೆಕ್ಸ್‌ಗೆ ತಲುಪಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಸಂಗ್ರಹದ ಪ್ರಮಾಣ ಅರ್ಧಕ್ಕಿಂತ ಕಡಿಮೆಯಿದೆ. ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದರೆ ಕೃಷಿ, ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆಗೆ ತೀವ್ರ ಅಭಾವ ಎದುರಾಗುವ ಸನ್ನಿವೇಶ ಸೃಷ್ಟಿಯಾಗಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now