ಚಿತ್ರದುರ್ಗ : ಚೇತನ್ ಮೂವಿಸ್ ಅರ್ಪಿಸುವ ಒಂದ್ ಊರಲ್ ಒಂದು ಲವ್ ಸ್ಟೋರಿ ಸಿನಿಮಾ ಜೂ.3 ರಂದು ರಾಜ್ಯಾದ್ಯಂತ 45 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಪ್ರೋತ್ಸಾಹಿಸುವಂತೆ ಚಿತ್ರದ ನಿರ್ಮಾಪಕ ಡಾ.ರೇವಣ್ಣ ಬಳ್ಳಾರಿ ಮನವಿ ಮಾಡಿದರು.
ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶ್ರೀವೀರಭದ್ರೇಶ್ವರ ಸಿನಿ ಕಂಬೈನ್ಸ್ನ ಈ ಚಿತ್ರದಲ್ಲಿ ದಾವಣಗೆರೆಯ ಫೃಥ್ವಿ, ಕಳಶದ ಪಲ್ಲವಿಗೌಡ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಸಮಾಜ ಕಲಬೆರಕೆಯಾಗಿದ್ದು, ಹದಿ ಹರೆಯದ ಯುವಕ-ಯುವತಿಯರು ಚಿಕ್ಕ ವಯಸ್ಸಿನಲ್ಲಿಯೇ ಪ್ರೀತಿಯ ಮೋಹಕ್ಕೆ ಬಲಿಯಾಗಿ ಅತ್ತ ವಿದ್ಯೆಯೂ ಇಲ್ಲ. ಇತ್ತ ಜೀವನವೂ ಇಲ್ಲ. ಎರಡನ್ನು ಕಳೆದುಕೊಂಡು ಜೀವನದಲ್ಲಿ ಸಮಸ್ಯೆ ಸವಾಲುಗಳನ್ನು ಎದುರಿಸುತ್ತಿರುವುದನ್ನು ಸಾಕಷ್ಟು ನೋಡುತ್ತಿದ್ದೇವೆ. ಹಾಗಾಗಿ ಯುವ ಸಮೂಹಕ್ಕೆ ಉತ್ತಮ ಸಂದೇಶವನ್ನು ನೀಡಬೇಕೆಂಬ ಆಸೆಯಿಟ್ಟುಕೊಂಡು ಚಿತ್
ರ ತಯಾರಿಸಲಾಗಿದೆ.
ನನಗೆ ಬದುಕು ಕಟ್ಟಿಕೊಟ್ಟ ನಾಡು ಚಿತ್ರದುರ್ಗ ಜಿಲ್ಲೆಯವನಾಗಿರುವುದರಿಂದ ಮೊದಲಿನಿಂದಲೂ ಕಲೆ, ಸಾಹಿತ್ಯದಲ್ಲಿ ತುಡಿತವಿತ್ತು. ಮದಕರಿ ಕಲಾ ಸಂಪದ ಕಟ್ಟಿಕೊಂಡು ಅನೇಕ ವರ್ಷಗಳ ಕಾಲ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ಕಾಮಿಡಿ, ಫೈಟ್ ಸೀನ್ ಇರುವ ಒಂದ್ ಊರಲ್ ಒಂದು ಲವ್ ಸ್ಟೋರಿ ಚಿತ್ರದಲ್ಲಿ ಆರು ಹಾಡುಗಳಿವೆ. ದಾವಣಗೆರೆ, ಕಾರಿಗನೂರು, ಚಿರಡೋಣಿ, ಹದಡಿ, ಬಸವಾಪಟ್ಟಣ, ಮಲ್ಪೆ, ಮುಂಡುಗೋಡುವಿನಲ್ಲಿ ಚಿತ್ರೀಕರಣವಾಗಿದೆ.
ಸಂಪೂರ್ಣವಾಗಿ ಹಳ್ಳಿ ಚಿತ್ರ ಇದಾಗಿದೆ. ಚಿತ್ರದುರ್ಗ, ದಾವಣಗೆರೆ, ಮೈಸೂರು, ಬೆಂಗಳೂರು, ಕೊಳ್ಳೆಗಾಲ, ಶಿವಮೊಗ್ಗ, ಭದ್ರಾವತಿ ಸೇರಿದಂತೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಪ್ರೇಕ್ಷಕರು ಹರಸಿ ಹಾರೈಸುವಂತೆ ಡಾ.ರೇವಣ್ಣ ಬಳ್ಳಾರಿ ವಿನಂತಿಸಿದರು.
ಶಿವಕುಮಾರ್, ಪಂಕಜ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.