ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನವೆಂಬರ್ ಕ್ರಾಂತಿಯ ಚರ್ಚೆ ಜೋರಾಗಿದೆ. ಸಿಎಂ ಬದಲಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿರುವುದರ ನಡುವೆ ಡಿಕೆಶಿ ಸಿಎಂ ಆಗುವುದಕ್ಕೆ ಡೇಟ್ ಫಿಕ್ಸ್ ಆಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದನ್ನ ಹೊರತುಪಡಿಸಿದರೂ ಸಚಿವ ಸಂಪುಟ ವಿಸ್ತರಣೆಯಾಗುವ ಎಲ್ಲಾ ಸಾಧ್ಯತೆಯೂ ಇದೆ. ಕಾಂಗ್ರೆಸ್ ಪಕ್ಷದಲ್ಲೇನೋ ನವೆಂಬರ್ ಕ್ರಾಂತಿಯ ಬಗ್ಗೆ ಕುತೂಹಲವಿದೆ. ಆದರೆ ಬಿಜೆಪಿಯಲ್ಲೂ ನವೆಂಬರ್ ಕ್ರಾಂತಿಯಾಗಲಿದೆ ಎನ್ನಲಾಗ್ತಾ ಇದೆ.
ಬಿಜೆಪಿಯಲ್ಲಿ ನವೆಂಬರ್ ಕ್ರಾಂತಿಯಾದ್ರೆ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬಹುದು ಎನ್ನಲಾಗ್ತಿದೆ. ಯಾಕಂದ್ರೆ ಬಿಜೆಪಿಯಲ್ಲಿ ಮೂರು ಬಣಗಳಿರೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಒಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಬಣವಾದ್ರೆ, ಮತ್ತೊಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಬಣ, ಮತ್ತೊಂದು ರೆಬೆಲ್ ನಾಯಕರ ಬಣವಾಗಿದೆ. ರೆಬೆಲ್ ನಾಯಕರ ಬಣದಲ್ಲಿದ್ದ ಯತ್ನಾಳ್ ಅವರು ಸದಾ ವಿಜಯೇಂದ್ರ ಹಾಗೂ ಅವರ ತಂದೆ ಯಡಿಯೂರಪ್ಪ ಅವರ ಮೆಡಲೆ ಆಕ್ರೋಶ ಹೊರ ಹಾಕುತ್ತಿದ್ದರು.
ಇದೀಗ ನವೆಂಬರ್ ಕ್ರಾಂತಿಯ ಹಿನ್ನೆಲೆ, ರೆಬೆಲ್ ನಾಯಕರು ಒಟ್ಟುಗೂಡಿ ಸಭೆ ಸೇರಿದ್ದಾರೆ. ಬಿಜೆಪಿ ಉಚ್ಚಾಟಿತ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಹಾಜರಾಗಿದ್ದು, ಜೊತೆಗೆ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಸೇರಿ ಬಸನಗೌಡ ಪಾಟೀಲ್ ಯತ್ನಾಳ್ ಜೊತೆ ಚರ್ಚೆ ನಡೆಸಿದ್ದಾರೆ. ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರ ಸದಾಶಿವನಗರದ ನಿವಾಸದಲ್ಲಿ ನಡೆದ ಸಭೆಯಲ್ಲಿ ರೆಬೆಲ್ ತಂಡದ ಮುಂದಿನ ನಡೆ ಹಾಗೂ ವಿಜಯೇಂದ್ರ ಬದಲಾವಣೆಗೆ ವರಿಷ್ಠರಿಗೆ ಮತ್ತೊಮ್ಮೆ ಏನೆಲ್ಲ ಹೇಳಬೇಕೆಂದು ಚರ್ಚೆ ನಡೆಸಿದ್ದಾರೆ.
