ಬೆಂಗಳೂರು: ಕುರ್ಚಿ ಕದನದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದಲ್ಲಿ ಮನೆ ಮಾಡಿದ್ದ ಗೊಂದಲವನ್ನು ಬಗೆಹರಿಸಿಕೊಳ್ಳುವುದಕ್ಕೆ ಹೈಕಮಾಂಡ್ ಸೂಚನೆ ನೀಡಿತ್ತು. ಅದರ ಭಾಗವಾಗಿಯೇ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮಾಡುತ್ತಾ, ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಇದೀಗ ಸಿದ್ದರಾಮಯ್ಯ ಅವರು ಸುದ್ದಿಗೋಷ್ಟಿ ನಡೆಸಿ ಆ ಬಗ್ಗೆ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ನನ್ನ ಹಾಗೂ ಡಿಕೆ ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈ ಹಿಂದೆಯೂ ಭಿನ್ನಾಭಿಪ್ರಾಯ ಇರಲಿಲ್ಲ, ಮುಂದೆಯೂ ಇರಲ್ಲ. ಸುಳ್ಳು ಅಪವಾದ, ಆರೋಪ ಮಾಡುವುದು ಬಿಜೆಪಿ – ಜೆಡಿಎಸ್ ನವರ ಚಾಳಿಯಾಗಿದೆ. ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಯ ಬಗ್ಗೆಯೂ ಚರ್ಚೆ ಮಾಡಿದ್ದೇವೆ. 2023ರ ಚುನಾವಣೆಯಲ್ಲಿ ನಾನು ಮತ್ತು ಡಿಕೆ ಹೇಗೆ ಒಟ್ಟಿಗೆ ಹೋದೆವೊ ಹಾಗೆಯೇ 2028ರ ಚುನಾವಣೆಗೂ ಒಟ್ಟಿಗೆ ಹೋಗ್ತೇವೆ ಎಂದಿದ್ದಾರೆ.
ಬಿಜೆಪಿ, ಜೆಡಿಎಸ್ ಸೇರಿದರು 82 ಆಗಬಹುದೇ ಹೊರತು ಜಾಸ್ತಿಯಾಗಲ್ಲ. ಹೈಕಮಾಂಡ್ ಹೇಳಿದಂತೆ ನಾವೀಬ್ಬರೂ ಕೇಳುತ್ತೇವೆ. ನಾಳೆಯಿಂದ ಯಾವುದೇ ಗೊಂದಲ ಇರಲ್ಲ. ವಿಪಕ್ಷವನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂಬ ಮಾತನ್ನ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಒಟ್ನಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಕುರ್ಚಿ ಕದನದ ಬಗ್ಗೆ ಒಂದು ನಿರ್ಧಾರಕ್ಕೆ ಬಂದಿರುವಂತೆ ಕಾಣಿಸುತ್ತದೆ. ಈಗ ಹೈಕಮಾಂಡ್ ನಿರ್ಧಾರದ ಮೇಲೆ ಎಲ್ಲವೂ ಬಿಟ್ಟಿದೆ. ಹೈಕಮಾಂಡ್ ನಿರ್ಧಾರ ಏನಾಗಿರುತ್ತೆ ಅದನ್ನ ಇಬ್ಬರು ಸ್ವೀಕಾರ ಮಾಡುವುದಕ್ಕೂ ರೆಡಿಯಾಗಿದ್ದಾರೆ. ಈಗ ಎಲ್ಲರ ಚಿತ್ತ ಹೈಕಮಾಂಡ್ ನತ್ತ ನೆಟ್ಟಿದ್ದು, ವಿಪಕ್ಷಗಳಿಗೆ ಸರಿಯಾಗಿ ತಿರುಗೇಟು ನೀಡಲು ಇಬ್ಬರು ರೆಡಿಯಾಗಿದ್ದಾರೆ.
