ಬೆಂಗಳೂರು: ರಾಜ್ಯದಲ್ಲಿ ಕುರ್ಚಿ ಕದನದ ವಿಚಾರಕ್ಕೆ ಸ್ವಾಮೀಜಿಗಳು ಎಂಟ್ರಿಯಾಗಿದ್ದಾರೆ. ತಮ್ಮ ತಮ್ಮ ನಾಯಕರ ಬಗ್ಗೆ ಬೆಂಬಲದ ಮಾತುಗಳನ್ನಾಡುತ್ತಿದ್ದಾರೆ. ನಿನ್ನೆಯೆಲ್ಲ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮಿಗಳು ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂಬಂತೆ ಮಾತುಗಳನ್ನ ಆಡಿದ್ದರು. ಡಿಕೆಶಿ ಶಿಸ್ತಿನ ಸಿಪಾಯಿ. ಪಕ್ಷದ ಏಳಿಗೆಗಾಗಿ ದುಡಿದಿದ್ದಾರೆ. ಡಿಕೆಶಿ ಸಿಎಂ ಆಗ್ಬೇಕು ಅಂತ ಭಕ್ತರು ನಮ್ಮ ಬಳಿ ಹೇಳಿಕೊಂಡಿದ್ದಾರೆ. ನಮ್ಮ ರಾಜ್ಯದ ಹಿತದೃಷ್ಟಿಯಿಂದ ಹೈಕಮಾಂಡ್ ಈ ಸಮಸ್ಯೆಯನ್ನ ಬಗೆಹರಿಸಲಿ ಎಂದಿದ್ದಾರೆ.
ಇದಕ್ಕೆ ಕುರುಬ ಸಮುದಾಯದ ಸ್ವಾಮೀಜಿ ತಿರುಗೇಟು ನೀಡಿದ್ದು, ಸಂವಿಧಾನದಲ್ಲಿ ಮಠಾಧೀಶರು ಹೇಳಿದ ತಕ್ಷಣ ಮುಖ್ಯಮಂತ್ರಿ ಆಗುವ ಅವಕಾಶ ಇದ್ಯಾ..? ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡುವಂತದ್ದು, ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡುವಂತದ್ದು, ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವಂತದ್ದು, ಸಾಂವಿಧಾನಿಕವಾಗಿ ಆಯ್ಕೆಯಾದ ಶಾಸಕರ ಅಧಿಕಾರ. ಹಾಗಾಗಿ ಶಾಸಕರು ಯಾರು ಮುಖ್ಯಮಂತ್ರಿ ಆಗ್ಬೇಕು ಅನ್ನೋದನ್ನ ತೀರ್ಮಾನ ಮಾಡ್ತಾರೆ ಅಂತ ಕಾಹಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಶ್ರೀಗಳು ತಿರುಗೇಟು ನೀಡಿದ್ದಾರೆ.
ಹೀಗೆ ರಾಜಕೀಯಕ್ಕೆ ಮಠಾಧಿಪತಿಗಳು ಎಂಟ್ರಿಯಾಗಿದ್ದು, ತಮ್ಮ ಹೇಳಿಕೆಗಳನ್ನ ನೀಡುತ್ತಿರುವುದಕ್ಕೆ ಸಿದ್ದರಾಮನಂದ ಮಹಾಪುರಿ ಸ್ವಾಮೀಜಿಗಳು ಬೇಸರ ಹೊರ ಹಾಕಿದ್ದು, ಮಠಾಧೀಶರು ಮಧ್ಯಪ್ರವೇಶ ಮಾಡೋದು ಸೂಕ್ತವಲ್ಲ, ಜಾತಿ ಹಿನ್ನೆಲೆಯಲ್ಲಿ ಹೀಗೆ ಮಾತನಾಡಿದ್ರೆ ಇತರೆ ಸಮುದಾಯಗಳನ್ನು ಅವಮಾನಿಸಿದಂತೆ ಆಗುತ್ತೆ. ಈ ವಿಷಯದಲ್ಲಿ ಮಠಾಧೀಶರು ಮಧ್ಯ ಪ್ರವೇಶ ಮಾಡುವುದು ಸೂಕ್ತವಲ್ಲ. ಕಾಂಗ್ರೆಸ್ ನಾಯಕರು ಚರ್ಚೆ ಮಾಡಿ ಸೂಕ್ತವಾಷ ತೀರ್ಮಾನ ಮಾಡುತ್ತಾರೆ. ಪಕ್ಷದ ವಿಚಾರದಲ್ಲಿ ಮಠಾಧೀಶರು ಎಂಟ್ರಿಯಾಗುವುದು ಯಾವುದೇ ಮಠಾಧೀಶರಿಗೂ ಸೂಕ್ತವಲ್ಲ ಅಂತ ಬೇಸರ ಹೊರಹಾಕಿದ್ದಾರೆ.
