ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಧರ್ಮಸ್ಥಳ ಬುರುಡೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಚಿಕ್ಕಬಳ್ಳಿ ಗ್ರಾಮದ ಚಿನ್ನ ಅಲಿಯಾಸ್ ಚಿನ್ನಯ್ಯ ಹೈಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಹಲವು ಗಂಭೀರ ಆರೋಪಗಳು ಕೇಳಿಬಂದಿದ್ದು, ಪ್ರಕರಣ ಮತ್ತಷ್ಟು ಕುತೂಹಲ ಕೆರಳಿಸಿದೆ.ಅರ್ಜಿಯಲ್ಲಿ, ಧರ್ಮಸ್ಥಳದ ವಿರುದ್ಧ ಸಂಚು ರೂಪಿಸಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಆರೋಪಿಸಿರುವ ಚಿನ್ನಯ್ಯ, ಈ ಪ್ರಕ್ರಿಯೆಯಲ್ಲಿ ಹಲವು ವ್ಯಕ್ತಿಗಳ ಪಾತ್ರವಿದೆ ಎಂದು ಉಲ್ಲೇಖಿಸಿದ್ದಾನೆ. ಪ್ರಕರಣದ ವಿವಿಧ ಹಂತಗಳಲ್ಲಿ ತನ್ನನ್ನು ಬಳಸಿಕೊಳ್ಳಲಾಗಿದೆ ಹಾಗೂ ನಿರ್ದಿಷ್ಟ ರೀತಿಯ ಹೇಳಿಕೆಗಳನ್ನು ನೀಡುವಂತೆ ಒತ್ತಡ ಹೇರಲಾಗಿದೆ ಎಂದು ಆತ ದೂರಿದ್ದಾನೆ.
ಚಿನ್ನಯ್ಯನ ಪ್ರಕಾರ, ವಿವಿಧ ರಾಜ್ಯಗಳಿಗೆ ತನ್ನನ್ನು ಕರೆದೊಯ್ಯಲಾಗಿದ್ದು, ಕಾಲಕಾಲಕ್ಕೆ ಹಣ ನೀಡಲಾಗುತ್ತಿತ್ತು. ಬಳಿಕ ಕೆಲ ಸ್ಥಳಗಳಲ್ಲಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ನಡೆಸಿ, ನಿರ್ದಿಷ್ಟ ದಾಖಲೆಗಳಿಗೆ ಸಹಿ ಪಡೆಯಲಾಯಿತು ಎಂದು ಆತ ಆರೋಪಿಸಿದ್ದಾನೆ. ಅಲ್ಲದೆ, ಕೆಲವು ವಕೀಲರ ಮಾರ್ಗದರ್ಶನದಲ್ಲಿ ನ್ಯಾಯಾಲಯದ ಮುಂದೆ ಯಾವ ರೀತಿಯಲ್ಲಿ ಹೇಳಿಕೆ ನೀಡಬೇಕು ಎಂಬ ಕುರಿತು ಸೂಚನೆಗಳನ್ನು ನೀಡಲಾಗಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.ಇನ್ನೂ, ತನ್ನ ಮೇಲೆ ಬೆದರಿಕೆ ಮತ್ತು ಒತ್ತಡ ಹೇರಿ ನಿರ್ದಿಷ್ಟ ವ್ಯಕ್ತಿಗಳ ವಿರುದ್ಧ ಹೇಳಿಕೆ ನೀಡುವಂತೆ ಒತ್ತಾಯಿಸಲಾಗಿತ್ತು. ಸಹಕರಿಸಿದರೆ ಮನೆ ನಿರ್ಮಾಣಕ್ಕೆ ಹಣಕಾಸಿನ ನೆರವು ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ಆತ ಆರೋಪಿಸಿದ್ದಾನೆ.
ಪ್ರ
ಕರಣದಲ್ಲಿ ನಟ ಪ್ರಕಾಶ್ ರಾಜ್ (Prakash Raj) ಅವರ ಹೆಸರೂ ಪ್ರಸ್ತಾಪವಾಗಿದ್ದು, ಕೇರಳದ ರೆಸಾರ್ಟ್ನಲ್ಲಿ ಇದ್ದ ವೇಳೆ ದೂರವಾಣಿ ಮೂಲಕ ಮಾತನಾಡಿದ್ದಾರೆ ಎಂದು ಚಿನ್ನಯ್ಯ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ. ಆದರೆ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್, ಪ್ರಕರಣದ ಬಗ್ಗೆ ತಮ್ಮ ಹೆಸರನ್ನು ಉಲ್ಲೇಖಿಸಿ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಗಮನಿಸಿದ್ದೇನೆ. ಇದು ಅತ್ಯಂತ ಸೂಕ್ಷ್ಮ ಹಾಗೂ ಭಕ್ತರ ನಂಬಿಕೆಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಉದ್ಭವಿಸಿರುವ ಅನುಮಾನಗಳಿಗೆ ಉತ್ತರಿಸುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.ಇದೀಗ ಈ ಬೆಳವಣಿಗೆಗಳು ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ. ಎಸ್ಐಟಿ ತನಿಖೆಯ ಕುರಿತೂ ಹಲವು ಪ್ರಶ್ನೆಗಳು ಎದ್ದಿದ್ದು, ಪ್ರಕರಣದ ಅಂತಿಮ ಸತ್ಯಾಂಶ ಏನು ಎಂಬುದು ತನಿಖಾ ತಂಡ ಸಲ್ಲಿಸುವ ವರದಿಯ ನಂತರವೇ ಸ್ಪಷ್ಟವಾಗಲಿದೆ.
ಇದೇ ವೇಳೆ, ಪ್ರಕರಣದಲ್ಲಿ ವಿವಿಧ ಆರೋಪ-ಪ್ರತ್ಯಾರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ತೀರ್ಮಾನಕ್ಕೆ ಬರಬಾರದು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಧರ್ಮಸ್ಥಳ ಪ್ರಕರಣದ ಸುತ್ತ ಮೂಡಿರುವ ಕುತೂಹಲ ಮತ್ತು ಅನುಮಾನಗಳಿಗೆ ಎಸ್ಐಟಿ ಅಂತಿಮ ವರದಿಯೇ ಉತ್ತರ ನೀಡುವ ನಿರೀಕ್ಷೆಯಿದೆ.







