ಸುದ್ದಿಒನ್,ಹೊಸದುರ್ಗ, ಸೆಪ್ಟೆಂಬರ್. 17 : ಸ್ಥಳೀಯ ಮಾರುಕಟ್ಟೆ ಹೊರತಾಗಿಯೂ ರಾಜ್ಯ ಹೊರರಾಜ್ಯ ಸೇರಿದಂತೆ ದೇಶ ವಿದೇಶಗಳಲ್ಲಿ ನಂದಿನಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದ್ದು ದೇಶದಲ್ಲಿ ಕ್ಷೀರ ಕ್ರಾಂತಿಗೆ ನಂದಿನಿ ಬ್ರಾಂಡ್ ಕಾರಣವಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್. ಬಿಲ್ಲಪ್ಪ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಾಡದಕೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕೆಎಂಎಫ್ ನಂದಿನಿ ಮಾರಾಟ ಮಳಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರ್ಗಿಯಲ್ಲಿ ಏಕಕಾಲದಲ್ಲಿ 500 ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಗೆ ಸಾಂಕೇತಿಕವಾಗಿ ಚಾಲನೆ ನೀಡಿದ್ದಾರೆ. ಅದರಂತೆ ಹೊಸದುರ್ಗ ತಾಲೂಕಿನಲ್ಲೂ ಸಹ ನಂದಿನಿ ಮಳಿಗೆಗಳನ್ನು ತೆರೆಯಲಾಗಿದೆ ಎಂದರು. ದೇಶದ ಎರಡನೇ ಅತಿದೊಡ್ಡ ಸರ್ಕಾರ ಹಾಲು ಮಂಡಳಿಯಾಗಿ ಕೆಎಂಎಫ್ ಜನಮನ್ನಣೆ ಗಳಿಸಿದೆ. ಸುಮಾರು 150ಕ್ಕೂ ಹೆಚ್ಚು ನಂದಿನಿ ಸಿಹಿ ಪದಾರ್ಥಗಳನ್ನು ಒಳಗೊಂಡಿದೆ. ನಂದಿನಿ ಹಾಲು, ಮೊಸರು, ಬೆಣ್ಣೆ, ತುಪ್ಪ, ಪೇಡಾ ಸೇರಿದಂತೆ ಇನ್ನಿತರ ಪದಾರ್ಥಗಳಿಗೆ ತುಂಬಾ ಬೇಡಿಕೆಯಿದೆ. ಮುಂದಿನ ದಿನಗಳಲ್ಲಿ ದೇಶದ ನಂಬರ್ ಒನ್ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಹೊಸದುರ್ಗ ವಿಭಾಗದ ಶಿಮುಲ್ ನಿರ್ದೇಶಕ ಬಿಆರ್ ರವಿಕುಮಾರ್ ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲೂ ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಇದೆ. ಏಕ ಕಾಲದಲ್ಲಿ ಐನೂರು ನಂದಿನಿ ಮಾರಾಟ ಮಳಿಗೆ ಉದ್ಘಾಟನೆ ಕಾರ್ಯಕ್ರಮ ಇತಿಹಾಸ ಪುಟ ಸೇರಿದೆ. ತಾಲೂಕಿನ ಹಾಲು ಉತ್ಪಾದಕರ ಸಮಸ್ಯೆಗಳನ್ನು ಬಗೆಹರಿಸಲು ನಾನು ಸದಾ ಸಿದ್ಧವಾಗಿದ್ದೇನೆ. ಹೈನುಗಾರಿಕೆ ಹೆಚ್ಚಿಸಲು ಪಹಣಿ ಹೊಂದಿದ ರೈತರಿಗೆ ಕೃಷಿ ಇಲಾಖೆ ಹಾಗೂ ಪಶು ಸಂಗೋಪನ ಇಲಾಖೆ ಸಹಯೋಗದಲ್ಲಿ ಶಿಮೂಲ್ ನೇತೃತ್ವದಲ್ಲಿ 25ಸಾವಿರ ಸಬ್ಸಿಡಿ ಹಣದೊಂದಿಗೆ ಹಸುಗಳನ್ನು ಕೊಡಿಸಲಾಗುವುದು. ಇದನ್ನು ಹಾಲು ಉತ್ಪಾದಕ ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಹರೀಶ್, ಮಾಡದಕೆರೆ ಈರಣ್ಣ, ಶಿಮುಲ್ ವಿಸ್ತರಣಾಧಿಕಾರಿ ಜಿ. ರವಿಚಂದ್ರ, ಎ. ರಂಗಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.
















