ಮೈಸೂರು.ಆಗಸ್ಟ್.2 : ಇಟ್ಟಿಗೆ ತಯಾರಿಕಾ ಘಟಕವೊಂದರಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಮೂವರು ಕಾರ್ಮಿಕರು ಜೀವ ಕಳೆದುಕೊಂಡ ಘಟನೆ ಟಿ. ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೂದಹಳ್ಳಿ ಗ್ರಾಮದ ಸಿದ್ದರಾಜು ಅವರಿಗೆ ಸೇರಿದ ಇಟ್ಟಿಗೆ ಗೂಡಿನಲ್ಲಿ ಈ ಅವಘಡ ಸಂಭವಿಸಿದೆ. ಇಟ್ಟಿಗೆ ಸುಡಲು ಹಾಕಲಾಗಿದ್ದ ಬೆಂಕಿಯನ್ನು ಸಂಪೂರ್ಣವಾಗಿ ಆರಿಸುವ ಮುನ್ನವೇ, ಗೂಡನ್ನು ತೆರವುಗೊಳಿಸಲು (ಬಿಚ್ಚಲು) ಸಿಬ್ಬಂದಿ ಮುಂದಾಗಿದ್ದಾರೆ. ಈ ವೇಳೆ ಬಿಸಿಯಾಗಿದ್ದ ಇಟ್ಟಿಗೆ ರಾಶಿ ಏಕಾಏಕಿ ಕಾರ್ಮಿಕರ ಮೇಲೆಯೇ ಕುಸಿದುಬಿದ್ದಿದೆ.

ಬಿದ್ದ ತೀವ್ರತೆಗೆ ರಾಜೇಶ್ (32) ಹಾಗೂ ನಾರಾಯಣ (63) ಎಂಬುವವರು ತೀವ್ರ ಸುಟ್ಟ ಗಾಯಗಳಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜ್ (62) ಅವರನ್ನು ತಕ್ಷಣವೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರೂ ಕೊನೆಯುಸಿರೆಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











