ಬೆಂಗಳೂರು: ಮೂಡಾ ಕೇಸಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಧರ್ಮಪತ್ನಿ ಪಾರ್ವತಿ ಅವರಿಗೂ ಇದರಿಂದ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಬಳಿಕ ಎಲ್ಲವೂ ಸಮಾಧಾನದ ಹಂತ ತಲುಪಿತ್ತು. ಈಗ ಕೋರ್ಟ್ ಈ ಕೇಸ್ ಗೆ ಸಂಬಂಧಿಸಿದಂತೆ ತನಿಖೆ ಮುಗಿಸುವುದಕ್ಕೆ ಡೆಡ್ಲೈನ್ ನೀಡಿದೆ. ಇನ್ನು ಎರಡು ತಿಂಗಳ ಒಳಗೆ ತನಿಖೆ ಮುಗಿಸಿ, ವರದಿ ಒಪ್ಪಿಸುವುದಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚನೆ ನೀಡಿದೆ.
ಮೂಡಾ ಕೇಸ್ ಗೆ ಸಂಬಂಧಿಸಿದಂತೆ ಕಳೆದ 6 ತಿಂಗಳಿನಿಂದ ತನಿಖೆಯಲ್ಲಿ ಯಾವುದೇ ರೀತಿಯ ಪ್ರಗತಿ ಕಂಡಿಲ್ಲ. ಈ ಹಿನ್ನೆಲೆ ಅರ್ಜಿದಾರರು ಬಿ ರಿಪೋರ್ಟ್ ಸಲ್ಲಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿ, ಇಂದಿಗೆ ಆದೇಶ ಕಾಯ್ದಿರಿಸಿತ್ತು. ಆದೇಶದಲ್ಲಿ ಎರಡು ತಿಂಗಳ ಒಳಗಾಗಿ ತನಿಖೆಯನ್ನು ಸಂಪೂರ್ಣಗೊಳಿಸಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಬೇಕು. ಹೆಚ್ಚುವರಿಯಾಗಿ ಕಾಲಾವಕಾಶ ಕೋರುವಂತೆ ಇಲ್ಲ ಎಂದು ನ್ಯಾಯಾಲಯ ಸೂಚನೆ ನೀಡಿದೆ. ಲೋಕಾಯುಕ್ತ ಪೊಲೀಸರು ತನಿಖೆಯ ನೆಪದಲ್ಲಿ ಕಾಲ ಹರಣ ಮಾಡುತ್ತಲೇ ಇದ್ದಾರೆ. ಹೀಗಾಗಿ ಬಿ ರಿಪೋರ್ಟ್ ಸಲ್ಲಿಕೆ ಮಾಡಲು ತೀರ್ಮಾನ ಮಾಡುವಂತೆ ಅರ್ಜಿ ಸಲ್ಲಿಸಲಾಗಿತ್ತು.
ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಲಯ ನವೆಂಬರ್ 15ಕ್ಕೆ ವಿಚಾರಣೆ ಮುಂದೂಡಿದೆ. ತನಿಖಾಧಿಕಾರಿ ಬದಲಾವಣೆ ಮಾಡುವಂತೆ ಕೋರಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಾಲಯ ಇದೇ ವೇಳೆ ವಜಾ ಮಾಡಿದೆ. ಇಂದು ಆದೇಶ ಮಾಡುವ ನಿರೀಕ್ಷೆ ಇತ್ತು. ನ್ಯಾಯಾಲಯ ತನಿಖಾಧಿಕಾರಿ ಬದಲಾವಣೆ ಮಾಡಲು ಕೋರಿದ್ದ ಅರ್ಜಿ ವಜಾ ಮಾಡಿದೆ ಎಂದು ಸ್ನೇಹಮಯಿ ಕೃಷ್ಣ ಬೇಸರ ಹೊರ ಹಾಕಿದ್ದಾರೆ.




