ತುಮಕೂರು: ಈಗಂತೂ ಗಂಡು ಮಕ್ಕಳಿಗೆ ಮದುವೆಗಾಗಿ ಹೆಣ್ಣನ್ನ ಹುಡುಕುವುದೇ ಹರಸಾಹಸವಾಗಿದೆ. ಹೆಣ್ಣು ಮಕ್ಕಳ ಪೋಷಕರ ಡಿಮ್ಯಾಂಡ್ ಕೇಳಿನೇ ಗಂಡು ಮಕ್ಕಳು ಸುಸ್ತೆದ್ದು ಹೋಗಿದ್ದಾರೆ. ಚೆನ್ನಾಗಿ ಓದಿದ್ದರು ಲೆಕ್ಕಕ್ಕಿಲ್ಲ. ಹಳ್ಳಿಗಳಲ್ಲಿ ಇರಬಾರದು, ರೈತನಾಗಿಯೂ ಜೀವನ ಕಳೆಯಬಾರದು. ಸಿಟಿಯಲ್ಲಿ ಬಿಂದಾಸ್ ಲೈಫ್ ಲೀಡ್ ಮಾಡುವುದನ್ನೇ ಅದೆಷ್ಟೋ ಹುಡುವಿಯರು ಎಕ್ಸ್ಪೆಕ್ಟ್ ಮಾಡ್ತಾ ಇದ್ದಾರೆ. ಮಗನಿಗೆ ಹೆಣ್ಣು ಸಿಕ್ತಿಲ್ಲ ಅಂತ ಅದೆಷ್ಟೋ ಪೋಷಕರು ಕಣ್ಣೀರಿಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ರೈತರನ್ನ ಮದುವೆಯಾಗುವ ಹೆಣ್ಣು ಮಕ್ಕಳಿಗೆ ವಿಶೇಷ ಭತ್ಯೆ ನೀಡಿ ಅಂತ ಕುಣಿಗಲ್ ಶಾಸಕ ರಂಗನಾಥ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಈ ರೀತಿ ಇದೆ. ನನ್ನ ಮತ ಕ್ಷೇತ್ರ ಕುಣಿಗಲ್ ತಾಲೂಕು ಗ್ರಾಮೀಣ ಪ್ರದೇಶವಾಗಿದ್ದು, ವ್ಯವಸಾಯ ಅವಲಂಬನೆ ಹೆಚ್ಚಿರುತ್ತದೆ. ಹಾಗೂ ಗ್ರಾಮಗಳಲ್ಲಿ ಹೆಚ್ಚಿನ ಯುವಕರು ವಾಸವಿದ್ದು, ವ್ಯವಸಾಯ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಇವರನ್ನು ಮದುವೆ ಆಗುವುದಕ್ಕೆ ಹೆಣ್ಣು ಮಕ್ಕಳು ನಿರಾಕರಿಸುತ್ತಿದ್ದು, ಮೂವತ್ತು ಆದರೂ ಮದುವೆಯಾಗದೆ ತೊಂದರೆಯಲ್ಲಿರುತ್ತಾರೆ.
ಆದ್ದರಿಂದ ತಾವೂಗಳು, ಹಳ್ಳಿಯಲ್ಲಿ ವಾಸವಿದ್ದು, ವ್ಯವಸಾಯ ಮಾಡಿಕೊಂಡಿರುವ ಗಂಡು ಮಕ್ಕಳನ್ನು ಮದುವೆ ಆಗುವ ಹೆಣ್ಣು ಮಕ್ಕಳಿಗೆ ಮುಂಬರುವ ಅಧಿವೇಶನದಲ್ಲಿ ವಿಶೇಷ ಭತ್ಯೆ ಹಾಗೂ ವಿಶೇಷ ಸ್ಥಾನಮಾನವನ್ನು ಘೋಷಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಶಾಸಕ ರಂಗನಾಥ್ ಪತ್ರ ಬರೆದಿದ್ದಾರೆ. ಈ ಹಿಂದೆ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅವರು ರೈತಾಪಿ ವರ್ಗದ ಹುಡುಗರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ವಿಚಾರವನ್ನ ಪ್ರಸ್ತಾಪಿಸಿ ಗಮನ ಸೆಳೆದಿದ್ದರು. ರೈತಾಪಿ ಕುಟುಂಬದ ಗಂಡು ಮಕ್ಕಳನ್ನು ಮದುವೆಯಾದವರಿಗೆ 10 ಲಕ್ಷ ಠೇವಣಿ ಇಡುವಂತೆ ಹೇಳಿದ್ದರು. ಇದೀಗ ಶಾಸಕ ರಂಗನಾಥ್ ಅವರು ಒತ್ತಾಯಿಸಿದ್ದಾರೆ.




