ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 20 : ವಿಕಲಚೇತನರು ಮತ್ತು ಬುದ್ಧಿಮಾಂದ್ಯರಿಗೆ ಸೂಕ್ತ ಕಾಲಕ್ಕೆ ಚಿಕಿತ್ಸೆ ನೀಡಿದರೆ, ಆರೋಗ್ಯದಲ್ಲಿ ಕನಿಷ್ಠ ಸುಧಾರಣೆಯಾಗುತ್ತದೆ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ||ಪಾರ್ವತಿಯವರು ಹೇಳಿದರು.
ನಗರದ ಜೆ.ಸಿ.ಆರ್. ಬಡಾವಣೆಯಲ್ಲಿರುವ ಗಾಡ್ಸ್ ಸಂಸ್ಥೆ ಮತ್ತು ಮಾನಸಧಾರ ಇವರ ವತಿಯಿಂದ ನಡೆಸಲಾಗುತ್ತಿರುವ ಮಾನಸಿಕ ರೋಗಿಗಳ ಡೇಕೇರ್ ಸೆಂಟರ್ಗೆ ಭೇಟಿನೀಡಿ, ಮಕ್ಕಳ ಆರೋಗ್ಯ ಸ್ಥಿತಿ ಬಗ್ಗೆ ಚಿಕಿತ್ಸೆ ನೀಡಿ ಮಾತನಾಡಿದರು.
ಮಾನಸಿಕ ಅಸ್ವಸ್ಥರಿಗೆ ಆತ್ಮ ವಿಶ್ವಾಸ, ಚೈತನ್ಯ ತುಂಬುವುದರ ಜೊತೆಗೆ ಆರೋಗ್ಯದ ಕುರಿತು ಚಿಕಿತ್ಸೆ ನೀಡಿದಾಗ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಸಾಧ್ಯವಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಮತ್ತು ದೊಡ್ಡವರಲ್ಲಿ ಮೆಂಟಲ್ ಇಲ್ನೆಸ್ ಮಾನಸಿಕ ಅಸ್ವಸ್ಥತೆ ಹೆಚ್ಚಾಗಿ ಕಂಡುಬರುತ್ತಿದೆ. ಆದ್ದರಿಂದ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಮಾನಸಿಕ ರೋಗಿಗಳಿಗಾಗಿಯೇ ಪ್ರತ್ಯೇಕ ವಿಭಾಗವಿದ್ದು, ಅದನ್ನು ಸದಸ್ಬಳಕೆ ಮಾಡಿಕೊಳ್ಳುವ ಮೂಲಕ ಮಾನಸಿಕ ಅಸ್ವಸ್ಥ ಮಕ್ಕಳ ಪೋಷಕರು ಮಕ್ಕಳ ಆರೋಗ್ಯ ಸುಧಾರಣೆಗಾಗಿ ಶ್ರಮಿಸಬೇಕು ಎಂದು ನುಡಿದರು.
ಗಾಡ್ಸ್ ಸಂಸ್ಥೆಯ ಅಧ್ಯಕ್ಷರಾದ ಕವಿತಾ ಎಂ. ಅವರು ಮಾತನಾಡಿ ಗಾಡ್ಸ್ ಸಂಸ್ಥೆಯಲ್ಲಿ ಮಾನಸಿಕ ಅಸ್ವಸ್ಥ ಮಕ್ಕಳಿಗೆ ವಿಶೇಷ ಚಿಕಿತ್ಸೆಯನ್ನು ನೀಡಿ, ಡೇಕೇರ್ ಸೆಂಟರ್ನಲ್ಲಿ ಅವರನ್ನು ಕಾಪಾಡಿಕೊಳ್ಳುವಂತಹ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ಗಾಡ್ಸ್ ಸಂಸ್ಥೆಯ ಕಾರ್ಯದರ್ಶಿ ಸೂರ್ಯನಾರಾಯಣ್ ಮತ್ತು ನಾಗರಾಜ್ ಮುಂತಾದ ಸಿಬ್ಬಂದಿಗಳು ಹಾಜರಿದ್ದರು.





